‘ತರಕಾರಿ, ತಾಜಾ ತರಕಾರಿ...’ ಕೂಗುತ್ತಾ ತಮ್ಮಣ್ಣ ತರಕಾರಿ ಗಾಡಿ ತಳ್ಳಿಕೊಂಡು ಬಂದ.
ಕೇಳಿಸಿಕೊಂಡು ಹೊರಗೆ ಬಂದ ಸುಮಿ, ‘ನಿಮ್ಹತ್ರ ರೇಟ್ ಜಾಸ್ತಿ, ಬೇರೆಯವರು ಕಾಸಿಗೊಂದು ಕೊಸರಿಗೆ ಎರಡು ಕೊಡ್ತಾರೆ, ನಿಮ್ಮ ತರಕಾರಿ ಬೇಡ...’ ಎನ್ನುತ್ತಲೇ ತರಕಾರಿ ಆರಿಸತೊಡಗಿದಳು.
‘ತರಕಾರಿಯ ಜಿಎಸ್ಟಿ ದರ ಪರಿಷ್ಕರಣೆ ಮಾಡಿದ್ದೇನೆ, ಈಗ ರೇಟ್ ಕಮ್ಮಿ ಮಾಡಿದ್ದೀನಿ ಮೇಡಂ’ ಅಂದ ತಮ್ಮಣ್ಣ.
‘ಹೌದಾ? ಎಷ್ಟು ಮಾಡಿದ್ದೀರಿ?’
‘ತಾಜಾ ತರಕಾರಿಗೆ 28ರಿಂದ 18 ಪರ್ಸೆಂಟ್ಗೆ ಜಿಎಸ್ಟಿ ದರ ಇಳಿಸಿದ್ದೇನೆ. ನಿನ್ನೆಯ ಓಲ್ಡ್ ತರಕಾರಿಗೆ 12ರಿಂದ 5 ಪರ್ಸೆಂಟ್ ಜಿಎಸ್ಟಿ ದರ ನಿಗದಿ ಮಾಡಿದ್ದೇನೆ. ನಿಮಗೂ ಹಣ ಉಳಿತಾಯವಾಗುತ್ತದೆ, ನನ್ನ ವ್ಯಾಪಾರವೂ ಹೆಚ್ಚುತ್ತದೆ. ಇಬ್ಬರ ಬದುಕೂ ಸುಲಭವಾಗುತ್ತದೆ!’ ಎಂದ ತಮ್ಮಣ್ಣ.
‘ಬೆಂಡೆಕಾಯಿ ಕೊಂಡರೆ ಟೊಮೆಟೊ ಉಚಿತ, ಈರುಳ್ಳಿಗೆ ಬೆಳ್ಳುಳ್ಳಿ ಫ್ರೀ ಎನ್ನುವ ಆಫರ್ ಇಲ್ವಾ?’
‘ಅಂಥಾ ಆಫರ್ ಕೊಟ್ಟರೆ ನಾನು ಪಾಪರ್ ಆಗಿಬಿಡ್ತೀನಿ’ ತಮ್ಮಣ್ಣ ನಕ್ಕ.
‘ತರಕಾರಿಯ ತೆರಿಗೆ ಇಳಿಸಲು ಕಾರಣವೇನು?’
‘ನಾನು ದುಬಾರಿ ಬೆಲೆಗೆ ತರಕಾರಿ ಮಾರುತ್ತೇನೆ ಎಂದು ಅಪಪ್ರಚಾರವಾಗಿ, ನಿಮ್ಮಂಥವರು ನನ್ನ ಹತ್ರ ತರಕಾರಿ ಕೊಳ್ಳೋದನ್ನೇ ನಿಲ್ಲಿಸಿದ್ರಿ. ಹೀಗಾದ್ರೆ ಬದುಕು ಬರ್ಬರ ಆಗುತ್ತೆ ಅಂತ ಚಿಂತನೆ ಮಾಡಿ, ನನ್ನ ಹೆಂಡ್ತಿ ಜೊತೆ ಸಮಾಲೋಚನೆ ಮಾಡಿ, ತರಕಾರಿ ಮೇಲಿನ ಜಿಎಸ್ಟಿ ದರ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಿದೆ’.
‘ಅದ್ಸರಿ, ಜಿಎಸ್ಟಿ ಅಂದರೇನು?’ ತರಕಾರಿ ಆರಿಸಿಕೊಂಡ ಸುಮಿ ತಮ್ಮಣ್ಣನಿಗೆ ದುಡ್ಡು ಕೊಟ್ಟಳು.
‘ಗಾಡಿ ಸೇವಾ ತೆರಿಗೆ ಮೇಡಂ! ನಿಮ್ಮ ಮನೆ ಬಾಗಿಲಿಗೆ ತರಕಾರಿ ಗಾಡಿ ತಳ್ಳಿಕೊಂಡು ಬಂದು ಸೇವೆ ನೀಡುತ್ತಿದ್ದೇನಲ್ಲ, ಗಾಡಿಯ ಸೇವಾ ತೆರಿಗೆ...’ ಎಂದು ಹೇಳಿ ತಮ್ಮಣ್ಣ ಹೊರಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.