ADVERTISEMENT

ಚುರುಮುರಿ | ‘ಗುಂಡು’ಗೋವಿ ಗೆಳೆಯ

ಎಸ್.ಬಿ.ರಂಗನಾಥ್
Published 25 ನವೆಂಬರ್ 2021, 20:27 IST
Last Updated 25 ನವೆಂಬರ್ 2021, 20:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಎರಡನೇ ಡೋಸ್ ಕೋವಿಡ್‌ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ‘ಗುಂಡು’ಗೋವಿ ಗೆಳೆಯನನ್ನು ಕೇಳಿದೆ– ‘ಮೂರನೇ ಅಲೆ ಭೀತಿ ಇದ್ದೇ ಇದೆ ಕಣಯ್ಯಾ. ಅದಕ್ಕೇ ನಾನು ಬೂಸ್ಟರ್ ಡೋಸ್ ಅನ್ನೂ ತಗೊಂಡ್ಬಿಟ್ಟಿದೀನಿ. ನೀನಿನ್ನೂ ಎರಡನೇದ್ದೇ ತಗೊಂಡಿಲ್ಲ ಯಾಕೋ?’

‘ನಮ್ಮ ದೇಶ ನೂರು ಕೋಟಿ ಲಸಿಕೆ ದಾಖಲೆ ಮಾಡಿದೆಯಲ್ಲ ಸಾಕು ಬಿಡಯ್ಯಾ’ ಎಂದ.

‘ಈ ಉಡಾಫೆ ಮಾತೆಲ್ಲ ಬೇಡ. ಎರಡು ಡೋಸ್ ತಗೊಂಡೋರನ್ನೂ ಈ ಮಾರಿ ಬಲಿ ತಗೊಂಡಿರೋ ನಿದರ್ಶನ ಇದೆ, ಕೂಡ್ಲೇ ತಗೊಳ್ಳೋ’.

ADVERTISEMENT

ತಲೆ ಕೆರೆಯುತ್ತಾ ನಿಂತ ಅವನನ್ನು ನೋಡುತ್ತಿದ್ದಂತೆ ಅವನ ಸಮಸ್ಯೆ ನಂಗೆ ಅರ್ಥವಾಯಿತು. ‘ವ್ಯಾಕ್ಸಿನ್ ತಗೊಳ್ಳೋದ್ರಿಂದ ನಿನ್ನ ಗುಂಡು ಪಾರ್ಟಿಗೇನೂ ಬಾಧಕ ಇಲ್ಲಾಂತ ಅವತ್ತೇ ಹೇಳಿದ್ದೆನಲ್ಲೋ’.

‘ಅದಕ್ಕಲ್ಲ... ಆಸ್ಟ್ರಿಯಾದಲ್ಲಿ ಶೇ 35ರಷ್ಟು ಜನ ಇನ್ನೂ ತಗೊಂಡೇ ಇಲ್ವಂತೆ!’

‘ಅದ್ರಿಂದ ಆ ಸರ್ಕಾರ ಏನ್ಮಾಡಿದೆ ಗೊತ್ತೇನೋ ಬುದ್ದೂ? ಅದರ ಹಾಗೇ ನಮ್ಮ ಸರ್ಕಾರನೂ ಮಾಡಿದ್ರೆ ಏನ್ಮಾಡ್ತೀಯೋ?’

‘ಅಂಥದ್ದು ಏನ್ಮಾಡಿದೆಯಪ್ಪಾ?’

‘ಲಸಿಕೆ ಹಾಕಿಸಿಕೊಳ್ಳದವರು ಹೊರಗೆ ಬರುವಂತಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಂಡ್ರೆ ಲಕ್ಷ ರೂಪಾಯಿಗಿಂತ ಹೆಚ್ಚು ದಂಡವಂತೆ. ಅದಕ್ಕಿಂತ ಮಿಗಿಲಾಗಿ...’

‘ಅದೇನು ಪೂರ್ತಿ ಹೇಳಯ್ಯಾ!’

‘ಅಂಥೋರಿಗೆ ಬಾರು, ಪಬ್‌ಗಳ ಪ್ರವೇಶಾನೂ ನಿಷಿದ್ಧ!’

‘ಹಾಗಾದ್ರೆ ನಡೆಯಪ್ಪಾ ಹೋಗೋಣ, ಈಗ್ಲೇ ವ್ಯಾಕ್ಸಿನ್ ಹಾಕಿಸು’.

‘ಹಂಗ್ಯಾಕೆ ಬೆಚ್ಚಿಬೀಳ್ತೀಯೋ? ಹಾಗೆ ಮಾಡಿರೋದು ಯುರೋಪಿನ ಆಸ್ಟ್ರಿಯಾ ಸರ್ಕಾರ, ನಮ್ಮದಲ್ಲ’.

‘ಯಾರಿಗ್ಗೊತ್ತಯ್ಯಾ, ದಿನಕ್ಕೊಂದು ಹೊಸ ಯೋಜನೆ ಘೋಷಿಸ್ತಾ ಫುಲ್ ಜೋಶ್‌ನಲ್ಲಿದ್ದ ಮೋದೀಜಿ ಈಗ ಕೃಷಿ ಕಾಯ್ದೆಗಳನ್ನ ಅನಿವಾರ್ಯವಾಗಿ ವಾಪಸ್ ತಗೊಂಡ ಸಿಟ್ಟಲ್ಲಿದಾರೆ. ಅವ್ರಿಗೆ ಈ ಆಸ್ಟ್ರಿಯಾ ರೂಲ್ಸ್ ಗೊತ್ತಾದ್ರೆ ನಮ್ಗೆ ಕಷ್ಟ’.

ಗೆಳೆಯನ ಮುಂದಾಲೋಚನೆಗೆ ನಾನು ಮೂಕವಿಸ್ಮಿತನಾದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.