‘ನಾವ್ ಸಣ್ಣೋರಿದ್ದಾಗ ಹಾಲು, ಸಕ್ಕರಿ, ಅಕ್ಕಿ, ಬ್ಯಾಳಿ, ಬೆಲ್ಲ, ಕಾಯ್ಪಲ್ಲೆ ರೇಟ್ ಜಾಸ್ತಿ ಆದಾಗ ಜನ ರೋಡಿಗಿಳಿದು, ಏರ್ಸಿದ್ ರೇಟ್ ಕಡಿಮೆ ಮಾಡ್ರಿ ಅಂತಿದ್ರು. ಆದ್ರೆ ಈಗ ಕಾಲ ಬದ್ಲ್ಯಾಗೇದ ಬಿಡಪಾ’ ಕಡೇಮನಿ ಕೊಟ್ರ ಲೊಚಗುಡುತ್ತಲೇ ಬಂದ.
‘ರೇಟ್ ಜಾಸ್ತಿ ಆಗದು ಇವತ್ ನೋಡಿದ್ಯಾ ಎಂಗ?’ ಯಂಕ್ಟ ಸಮಜಾಯಿಷಿಗೆ ಮುಂದಾದ.
‘ಇಲ್ಲಲೇ, ನಾವು ಸ್ಟುಡೆಂಟ್ ಆಗಿದ್ದಾಗ ಈ ರೇಟುಗೂಳು ಜಾಸ್ತಿ ಆದ್ವಪಂದ್ರ ರೋಡಿಗಿಳೀತಿದ್ವಿ. ನಮಗ ಹೆದರಿ, ಸ್ಟ್ರೈಕು ಪೈಕು ಮಾಡಬ್ಯಾಡ್ರೆಪಾ ಅಂತ ಲೀಡ್ರುಗೂಳು ಕೇಳಕ್ಯಂತಿದ್ರು. ಇವತ್ ನೋಡು, ಲೀಡ್ರುಗೂಳೇ ರೋಡಿಗಿಳದಾರ. ಪೆಟ್ರೋಲು, ಡೀಸೆಲ್ಲು, ಗ್ಯಾಸ್ ರೇಟ್ ಜಾಸ್ತಿ ಆತಂತ ಕಾಂಗ್ರೆಸಿನೋರು, ಹಾಲು, ಬೆಣ್ಣಿ, ಎಣ್ಣಿ, ಕಾಯ್ಪಲ್ಲೆ, ಬಸ್ ಚಾರ್ಜು ರೇಟು ಜಾಸ್ತಿ ಆತಂತ ಈ ಬಿಜೆಪಿಯೋರು ರೋಡಿಗಿಳ್ಯಾಕತ್ತಾರ. ಅದೇ ನನಿಗೆ ವಂಡರ್ ಅನಿಸೇತಿ ನೋಡು’ ವಿವರಣೆ ನೀಡಿದ ಕೊಟ್ರ.
‘ಜನಗೂಳೂ ತಮ್ ಪಾಡಿಗೆ ತಾವಿದ್ರಪಂದ್ರ ಈ ಪಾರ್ಟಿಯೋರು, ಲೀಡರ್ಗೂಳು ಸ್ಟ್ರೈಕ್ ಮಾಡಬಾರದಂತಿದ್ಯಾ ಹೆಂಗಲೇ ಖೋಡಿ?’ ಮೂಲೀಮನಿ ಮಾದೇವ ಜೋರಾಗೇ ಕೇಳಿದ.
‘ಅಲ್ಲಲೇ ಜನಗೂಳೂ ತಮ್ ಪಾಡಿಗೆ ತಾವದಾರಂದ್ರ ಅವರಿಗೆ ತೊಂದ್ರಿ ಆಗಿಲ್ಲ ಅಂತ ಅರ್ಥ ಅಲ್ಲಪಾ. ಅಲ್ಲಿ ದಿಲ್ಯಾಗ, ಇಲ್ಲಿ ಬೆಂಗ್ಳೂರಾಗ ಅಧಿಕಾರದಾಗ ಇರೋರು ತಾವೇ ರೇಟ್ ಜಾಸ್ತಿ ಮಾಡಿ ತಾವ್ತಾವೇ ರೋಡಿಗಿಳದು ಸ್ಟ್ರೈಕ್ ಮಾಡೀದ್ರ ಹೆಂಗಂತೀನಿ?’ ಕೊಟ್ರ ತನ್ ವಾದ ಬಿಟ್ಟುಕೊಡಲಿಲ್ಲ.
‘ಬಿಡಿಸೇಳಲೇ ಖೋಡಿ’ ಎಂದ ಮಾದೇವ.
‘ನೋಡ್ರೆಪಾ... ಈ ಸ್ಟ್ರೈಕ್ಗಳಲ್ಲಿ ನಮ್ಮಂಥ ಜನಸಾಮಾನ್ಯರೇ ಇಲ್ಲ. ಎಲ್ಲಾ ಔರೌರ್ ಪಾರ್ಟಿಯೋರೇ ತುಂಬಕ್ಯಂಡಾರ. ಅದರ್ ಬದ್ಲಿಗೆ ಇವರು ಮಾಡ ಸ್ಟ್ರೈಕು ಅವರು, ಅವರು ಮಾಡ ಸ್ಟ್ರೈಕು ಇವರು ಮಾಡೀದ್ರಪಂದ್ರ ಎಲ್ಲಾ ಸರಿ ಹೋಗತ್ತಲ್ಲೇನಪಾ?’ ಕೊಟ್ರನ ಸಲಹೆಗೆ ಎಲ್ಲರೂ ಬಾಯಿ ಮೇಲೆ ಬೆರಳಿಟ್ಕಂಡ್ರು.
‘ಹೌದಲ್ಲಾ... ಬಿಜೆಪಿಯೋರ ಬೇಡಿಕೆ ಕಾಂಗ್ರೆಸೀಂದಾಗ್ಬೇಕು, ಕಾಂಗ್ರೆಸಿನೋರ ಬೇಡಿಕೆ ಬಿಜೆಪಿದಾಗ್ಬೇಕು, ಆಗ ಎಲ್ಲಾ ಸರಿ ಹೋಗ್ಬೋದು...’ ಯಂಕ್ಟ ಯೋಚಿಸತೊಡಗಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.