‘ಅಯ್ಯೊ… ಅಯ್ಯೋ… ಹೊಳೇಲಿ ಹುಣಿಸೇಹಣ್ಣು ತೊಳೆದ್ಹಂಗೆ 600 ಕೋಟಿ ರೂಪಾಯಿ ಹೋತು’ ಬೆಕ್ಕಣ್ಣ ಬಾಯಿ ಬಡಿದುಕೊಂಡಿತು.
‘ಯಾರ ರೊಕ್ಕ? ಎಲ್ಲಿ ಹೋತು?’ ನನಗೂ ಗಾಬರಿಯಾಯಿತು.
‘ಇನ್ಯಾರಿದ್ದು…? ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಹಣ…!’
ಬೆಂಗಳೂರಿನಲ್ಲಿ ಪ್ರಮುಖವಾದ ಜಾಗದಲ್ಲಿ ಒಂದು ಐಷಾರಾಮಿ ಹೋಟೆಲ್ಲಿಗೆ ಟೆಂಡರ್ ಇಲ್ಲದೆ, ಕೆಲವು ಅಧಿಕಾರಿಗಳು ಬ್ಯಾಡ ಅಂದ್ರೂ ಕೇಳದೇ ಭಯಂಕರ ಕಡಿಮೆ ಬೆಲೆಗೆ ಗುತ್ತಿಗೆ ಕೊಟ್ಟಿದ್ದರಿಂದ 600 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟವೆಂಬ ಸುದ್ದಿಯನ್ನು ಬೆಕ್ಕಣ್ಣ ಓದಿತು.
‘ಸರ್ಕಾರದ ಬೊಕ್ಕಸಕ್ಕೆ ನಷ್ಟ… ಆದರೆ ಯಾರೋ ರಾಜಕಾರಣಿಗಳ, ಉನ್ನತ ಅಧಿಕಾರಗಳ ಜೇಬಿಗೆ ಲಾಭವಂತೂ ಆಗಿರತೈತಿ’ ಎಂದೆ ಸಿಟ್ಟಿನಿಂದ.
‘ಈ 600 ಕೋಟಿ ಜುಜುಬಿ ಅನ್ನಬೌದು. ಗಣಿ ಹಗರಣ ನೆನಪೈತಿ ತಾನೆ? ಒಟ್ಟು ಸುಮಾರು 19 ಕೋಟಿ ಮೆಟ್ರಿಕ್ ಟನ್ ಅದಿರು ಅಕ್ರಮ ರಫ್ತಿನಿಂದಾಗಿ ಅಂದಾಜು 78,245 ಕೋಟಿ ರೂಪಾಯಿ ಬೊಕ್ಕಸಕ್ಕೆ ನಷ್ಟವಾಗೈತಂತೆ’ ಬೆಕ್ಕಣ್ಣ ಗುರುಗುಟ್ಟಿತು.
‘ಈ ಥರಾ ಕೋಟಿಗಟ್ಟಲೆ ಹಣ ನಷ್ಟವಾಗೋದನ್ನು ತಪ್ಪಿಸಿದ್ದರೆ ಎಷ್ಟ್ ಜನ ಬಡವ್ರಿಗೆ ಮನೆ ಕಟ್ಟಿಸಬೌದಿತ್ತು’ ಎಂದೆ.
‘ಅಷ್ಟು ರೊಕ್ಕದಾಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗೆ, ಸರ್ಕಾರಿ ಶಾಲೆಗಳಿಗೆ, ರೈತರಿಗೆ ಬೇಕಾಗಿರೋ ಸೌಲಭ್ಯಗಳನ್ನ ಒದಗಿಸಬಹುದಿತ್ತು’ ಬೆಕ್ಕಣ್ಣ ಪಟ್ಟಿ ಮುಂದುವರಿಸಿತು.
‘ಗಣಿ ಹಗರಣ ಪ್ರಕರಣಗಳಿಗೆ ಮರುಜೀವ ಕೊಡತೀವಿ ಅಂತ ಸಿಎಮ್ಮು ಮೊನ್ನೆ ಗುಡುಗಿದಾರೆ…
ಕಾದು ನೋಡೂಣು’. ನಾನು ಆಶಾಭಾವದಿಂದ ಹೇಳಿದೆ.
‘ನಾವು ನಷ್ಟದ ಅಂಕಿ ಸಂಖ್ಯೆ ಹೇಳಿ ಬಾಯಿ ತುರಿಕೆ ಕಡಿಮೆ ಮಾಡಿಕೋತೀವಿ ಅಷ್ಟೆ. ಅಕ್ರಮ ಮಾಡಿದೋರು ಆ ರೊಕ್ಕದಲ್ಲಿ ತಿಂದು ತೇಗಿ, ಮಿಕ್ಕಿದ್ದನ್ನು ಎಲ್ಲಿ ಅಡಗಿಸಿಡಬೇಕೋ ಅಲ್ಲಿಟ್ಟಾಗಿದೆ! ಬೊಕ್ಕಸಕ್ಕೂ ತೂತು, ಶ್ರೀಸಾಮಾನ್ಯರ ಜೇಬಂತೂ ಮೊದಲೇ ತೂತು!’ ಎಂದ ಬೆಕ್ಕಣ್ಣ ಪಕಪಕನೆ ನಕ್ಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.