ADVERTISEMENT

ಚುರುಮುರಿ: ಮಾವಿನ ನೋವು

ಮಣ್ಣೆ ರಾಜು
Published 25 ಜೂನ್ 2025, 0:38 IST
Last Updated 25 ಜೂನ್ 2025, 0:38 IST
   

‘ಅಮ್ಮಾವ್ರೇ, ತಾಜಾ ಮಾವಿನ ಹಣ್ಣು ತಗೊಳ್ಳಿ...’ ಎಂದು ಕೂಗಿದ ಮಾರಣ್ಣ.

‘ಬೇಡ, ನಿನ್ಹತ್ರ ರೇಟ್ ಜಾಸ್ತಿ, ಬೆಲೆ ಕುಸಿದಿದೆ ಎಂದು ಬೆಳೆಗಾರರು ಮಾವಿನ ಹಣ್ಣನ್ನು ರಸ್ತೆಗೆ ಸುರಿಯುತ್ತಿದ್ದಾರೆ...’ ಎನ್ನುತ್ತಲೇ ಹೊರಗೆ ಬಂದ ಸುಮಿ ಹಣ್ಣು ಆರಿಸಿಕೊಳ್ಳತೊಡಗಿದಳು.

‘ತಿಂದು ನೋಡಿ, ರುಚಿಯಾಗಿಲ್ಲವೆಂದರೆ ನಾಳೆ ದುಡ್ಡು ವಾಪಸ್ ಕೊಡ್ತೀನಿ’ ಅಂದ ಮಾರಣ್ಣ.

ADVERTISEMENT

‘ಒಳ್ಳೆ ಕಲರ್‌ ಇರುವ ಹಣ್ಣು ಕೊಡು’.  

‘ಕಲರ್, ಡಿಸೈನು ನೋಡ್ಬೇಡಿ, ರುಚಿ ನೋಡಿ’ ಎಂದು ಆರಿಸಿಕೊಟ್ಟ ಮಾರಣ್ಣ.

‘ಬೆಲೆ ಕುಸಿದರೂ ಮಾವಿನ ವ್ಯಾಪಾರ ಬಿಟ್ಟಿಲ್ಲ, ಕಷ್ಟಕಾಲದಲ್ಲೂ ಮಾವು ಮುನ್ನಡೆಸುವ ಮಾವುತ ನೀನು’ ಎನ್ನುತ್ತಾ ಶಂಕ್ರಿ ಬಂದ.

‘ಹಣ್ಣು ತಿನ್ನೋರು ಕಮ್ಮಿಯಾಗಿದ್ದಾರೆ ಸಾರ್. ಒಂದು ಪೂರ್ತಿ ಹಲಸಿನ ಹಣ್ಣನ್ನು ನಾನೊಬ್ಬನೇ ತಿಂತೀನಿ, ಒಂದೇ ಬಾರಿಗೆ ಡಜನ್ ಮಾವಿನ ಹಣ್ಣು ಮುಗಿಸ್ತೀನಿ’ ಎಂದು ತನ್ನ ಸಾಮರ್ಥ್ಯ ಹೇಳಿಕೊಂಡ.

‘ನಮ್ಮ ಮಕ್ಕಳು ಆಸೆಪಟ್ಟು ಹಣ್ಣು ತಿನ್ನೋದಿಲ್ಲ. ಜಂಕ್ ಫುಡ್, ಹಾಳುಮೂಳುಗೆ ಆಸೆಪಡ್ತಾರೆ. ಒಂದು ಹೋಳು ಮಾವು ತಿಂದರೆ ಹೆಚ್ಚು, ಎರಡು ಹಲಸಿನ ತೊಳೆ ತಿಂದರೆ ಜಾಸ್ತಿ’ ಎಂದ ಶಂಕ್ರಿ.

‘ಸರ್ಕಾರ ಮಾವಿನ ಹಣ್ಣು ಖರೀದಿಸಿ ಮಾವು ಭಾಗ್ಯ ತಂದು ಬಿಸಿಯೂಟದ ಜೊತೆ ಮಾವಿನ ಹಣ್ಣು ಕೊಟ್ಟು ಮಕ್ಕಳಲ್ಲಿ ಹಣ್ಣಿನ ರುಚಿ, ಅಭಿರುಚಿ ಬೆಳೆಸಬೇಕು’.

‘ಮಕ್ಕಳು ತರಕಾರಿಯನ್ನೂ ತಿನ್ನೋದಿಲ್ಲಾರೀ... ತಿಳಿ ಸಾರು, ಬಿಳಿ ಅನ್ನ ತಿಂದರೆ ಸಾಕೆ? ಹಣ್ಣಿನ ಜೊತೆ ಹೆಚ್ಚೆಚ್ಚು ತರಕಾರಿ ತಿನ್ನೋದನ್ನೂ ಶಾಲೆಗಳು ಮಕ್ಕಳಿಗೆ ಕಲಿಸಬೇಕು’ ಎಂದಳು ಸುಮಿ.

‘ಮಾವಿನ ಹಣ್ಣನ್ನು ಮಕ್ಕಳಿಗೆ ತಿನ್ನಿಸಿ, ವಾಟೆಯನ್ನು ಮಕ್ಕಳ ಹೆಸರಿನಲ್ಲಿ ರಸ್ತೆ ಬದಿಯೋ, ಖಾಲಿ ಜಾಗದಲ್ಲೋ ಹೂಣಿರಿ. ಮೊಳೆತು ಗಿಡವಾಗಿ ಮಕ್ಕಳು ಬೆಳೆದಂತೆ ಮಾಮರವೂ ಬೆಳೆದು ಹೆಮ್ಮರವಾಗಲಿ...’ ಎಂದು ಹೇಳಿ ಮಾರಣ್ಣ ಗಾಡಿ ತಳ್ಳಿಕೊಂಡು ಹೊರಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.