‘ಸಬ್ ರಿಜಿಸ್ಟ್ರಾರ್ ಆಫೀಸ್ಗೆ ಬಂದು ಇದೇನ್ ಹುಡುಕ್ತಾ ನಿಂತಿದ್ದೀಯ ಮುದ್ದಣ್ಣ’ ಕೇಳಿದ ಸ್ನೇಹಿತ ವಿಜಿ.
‘ರೇಟ್ ಬೋರ್ಡ್ ಹುಡುಕ್ತಿದ್ದೀನಿ’ ತಣ್ಣಗೆ ಹೇಳಿದ ಮುದ್ದಣ್ಣ.
‘ರೇಟ್ ಬೋರ್ಡಾ? ಯಾವುದರ ರೇಟ್?’
‘ಸೈಟ್ ರಿಜಿಸ್ಟರ್ ಮಾಡಿಸೋಕೆಷ್ಟು, ಇ.ಸಿ. ತೆಗೆಸೋಕೆ ಎಷ್ಟು, ಬೇಗ ಬೇಗ ಕೆಲಸ ಮಾಡೋಕೆ ಎಷ್ಟು ರೇಟ್ ಅಂತ ಇರುತ್ತಲ್ಲ ಆ ಬೋರ್ಡ್’.
‘ಇಲ್ಲಿರೋ ಆಫೀಸರ್ಸ್ಗೆ ಕೇಳಿದ್ರೆ ಅಥವಾ ವೆಬ್ಸೈಟ್ನಲ್ಲಿ ನೋಡಿದರೆ ಗೊತ್ತಾಗುತ್ತಲ್ಲ’.
‘ಆ ಬೋರ್ಡ್ ಬೇರೆ, ನಾನು ಹುಡುಕ್ತಿರೋದು ಬೇರೆ... ಮೊನ್ನೆ ಮಿನಿಸ್ಟರ್ ಸಾಹೇಬ್ರು, ಅಧಿಕಾರಿಗಳಿಗೆ ಯಾವುದಕ್ಕೆ ಎಷ್ಟು ಅಂತ ಬೋರ್ಡ್ ಹಾಕಿಬಿಡಿ ಎಂದು ಹೇಳಿದ್ದನ್ನ ಗಂಭೀರವಾಗಿ ತಗೊಂಡಿರೋ ಅಧಿಕಾರಿಗಳು ರೇಟ್ ಬೋರ್ಡ್ ಹಾಕಿದ್ದಾರಂತೆ, ಅದನ್ನ ಹುಡುಕ್ತಿದ್ದೀನಿ’.
‘ಅಂದ್ರೆ ಲಂಚದ ಬೋರ್ಡಾ?’ ಕಣ್ಣರಳಿಸಿ ಕೇಳಿದ ವಿಜಿ.
‘ಏಯ್, ಅಷ್ಟು ಜೋರಾಗಿ ಕೂಗಬೇಡ, ನಮ್ಮ ಅಧಿಕಾರಿಗಳ ಮನಸಿಗೆ ನೋವಾಗುತ್ತೆ’.
‘ಛೇ, ಏನಿಷ್ಟೊಂದು ಭ್ರಷ್ಟಾಚಾರ ತಾಂಡವವಾಡುತ್ತಿದೆ... ಇಂತಹ ಭ್ರಷ್ಟರಿಗೆ ಬುದ್ಧಿ ಕಲಿಸಲೆಂದೇ ಲೋಕಾಯುಕ್ತ ಸಂಸ್ಥೆ ರೂಪಿಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ನೀನ್ಯಾಕೆ ಕಂಪ್ಲೇಂಟ್ ಕೊಡಬಾರದು?’
ವಿಜಿ ಮಾತು ಮುಗಿಸುವ ಮುನ್ನವೇ, ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗತೊಡಗಿದ ಮುದ್ದಣ್ಣ, ‘ಅಲ್ಲಿಗೂ ಹೋಗಿದ್ದೆ, ಅಲ್ಲಿ ಅಸಲಿ ಆಫೀಸರ್ ಯಾರು, ನಕಲಿ ಯಾರು ಗೊತ್ತಾಗಲಿಲ್ಲ’.
‘ಅಯ್ಯೋ, ಹೌದಾ, ಹಾಗಾದರೆ ನಿನ್ನ ಸಮಸ್ಯೆಗೆ ಇಂಟರ್ನ್ಯಾಷನಲ್ ಪರಿಹಾರವನ್ನೇ ಕಂಡುಕೊಳ್ಳಬೇಕು’.
‘ಅಂದ್ರೆ?’
‘ಅಂದ್ರೆ, ಟ್ರಂಪಣ್ಣಂಗೆ ನಿನ್ನ ಸಮಸ್ಯೆ ಹೇಳ್ಕೊ ಅಂದೆ’.
‘ಅವರು ಬಂದು ಸಮಸ್ಯೆ ಸರಿ ಮಾಡ್ತಾರಾ?’
‘ಇಲ್ಲ. ಜನ ಕೊಟ್ಟಷ್ಟು ನೀವು ತಗೋಬೇಕು ಅಥವಾ ಅವರು ಕೇಳಿದಷ್ಟು ನೀವು ಕೊಡಬೇಕು ಎಂದು ಅಧಿಕಾರಿಗಳು ಮತ್ತು ಜನರ ನಡುವೆ ಒಪ್ಪಂದ ಮಾಡಿಸಿದ್ದೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕ್ತಾರೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.