ADVERTISEMENT

ಚುರುಮುರಿ: ಮೂರು ಕನಸು

ಲಿಂಗರಾಜು ಡಿ.ಎಸ್
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
   

‘ನನಗೆ ವಾರಕ್ಕೊಂದೊಂದು ದೇಸ ಸುತ್ತಬೇಕು, ಪುಗಸಟ್ಟೆ ಬಾಡು–ಬಳ್ಳೆ, ಎಣ್ಣೆ ಹೊಡಿಬೇಕು, ದಿನಾ ಕಾಸು–ಕರೇಮಣಿ ಎಣಿಸಿ ಎಣಿಸಿ ಮಡೀಕತ್ತಾ ಇರಬೇಕು ಅನ್ನೋ ಮೂರು ಕನಸುಗಳು ಕಾಲಾಂತರದಿಂದ್ಲೂ ಕಾಡ್ತಾವೆ. ಟೆಂಪಲ್ ರನ್, ಪ್ರಾರ್ಥನೆ, ಪ್ರಯತ್ನ ಯಾವುದೂ ಫಲ ಕೊಡ್ನಿಲ್ಲ ಕನ್ರೋ’ ಎಂದು ತುರೇಮಣೆ ತಮ್ಮ ಕನಸಿನ ಗಂಟನ್ನು ಬಿಚ್ಚಿದರು.

‘ನೀವು ದೇಸ ದೇಸ ಸುತ್ತಾಡಕ್ಕೆ ವಿಮಾನದ ಪೈಲೆಟ್ ಆಗಬೇಕು ಸಾ. ನಿಮ್ಮ ಯೇಗ್ತೆಗೆ ಇಲ್ಲೀಗಂಟ ಇಮಾನವೂ ಹತ್ತಿಲ್ಲ’ ಅಂದುದ್ಕೆ ತುರೇಮಣೆಗೆ ಸಿಟ್ಟು ಬಂತು.

‘ಸರಿಕಂಬುಡಿರ್ಲಾ. ಎಣ್ಣೆಗೆ, ಬಾಡು–ಬಳ್ಳೆ, ಕಾಸಿಗೇನಾರಾ ದಾರಿ?’ ಅಂದ್ರು.

ADVERTISEMENT

‘ದಿನಾ ದುಡ್ಡು ಎಣಿಸಬೇಕಾದರೆ ನೀವು ಬ್ಯಾಂಕ್ ಮ್ಯಾನೇಜರಾಗಬಕು. ಈ ವಯಸ್ಸಲ್ಲಿ ಅದಾಗ್ಕುಲ್ಲ.
ಸಿಎಂಎಸ್ ವ್ಯಾನು ದರೋಡೆ ಮಾಡ್ರಿ. ಹ್ಯಂಗೂ ಜೈಲಿಗೆ ಹೋತಿರ. ಜೈಲಿನ ಕಳ್ಳಬಟ್ಟಿ ಡಿಸ್ಟಿಲರೀಲಿ ಪಾರ್ಟ್ನರ್ ಆಗ್ರಿ. ಇಲ್ಲ ಜೈಲು ಅಡುಗೆಮನೆಯಿಂದ ಬಾಡು–ಬಳ್ಳೆ ಕದ್ದು ಸಪ್ಲೆ ಮಾಡ್ರಿ. ಟೆರರಿಸ್ಟುಗಳು, ಐನಾತಿ ಕಳ್ಳರು, ಸರ್ಕಾರಿ ಖದೀಮರು, ಕುಜ ದೋಷದೋರಿಗೆಲ್ಲಾ ಅನುಕೂಲಾತದೆ’ ಅಂತ ಕಾಲೆಳೆದೆ.

‘ನೋಡ್ಲಾ ಈಗ ಕಾವೇರಿದ ಚರ್ಚೆ ನಡೀತಾ ಅದೆ. ರೆಸಾರ್ಟು ರಾಜಕೀಯ ಸುರುವಾದ್ರೆ ಬೇಲಿ ಹಾರಿಬರೋ ಕುದುರೆಗಳ ಕಟ್ಟಿಹಾಕೋ ಅಶ್ವಮೇಧಕ್ಕೆ ಸಹಾಯ ಮಾಡಿ ಕಾಸು ದುಡೀಬೈದು’ ಯಂಟಪ್ಪಣ್ಣ ಕಿಚಾಯಿಸಿತು.

‘ನೀವು ರಾಜಕೀಯಕ್ಕೋಗಿ ಮಂತ್ರಿಯಾಗ್ರಿ. ದೇಸ ಸುತ್ತಬೈದು, ದಿನಾ ಕಾಸು ಎಣಿಸಿಕಬೈದು. ಎಣ್ಣೆ, ಬಾಡು–ಬಳ್ಳೆಗೆ ತೊಂದರೆಯಿಲ್ಲ. ಏನೂ ಗೊತ್ತಿಲ್ಲದಿದ್ರೆ ‘ಮಾಹಿತಿ ತಿಳಕಂದು ಕ್ರಮ ತಗತೀವಿ’ ಅಂದ್ರಾತು’ ಅಂತ ಐಡಿಯಾ ಕೊಟ್ಟೆ.

‘ತುರೇಮಣೆ, ಇವರ ಮಾತೆಲ್ಲಾ ಕೇಳಬ್ಯಾಡ. ಈಗ ನಿನಗೆ ಟೈಮುಟೈಮಿಗೆ ಅನ್ನ, ಬಟ್ಟೆ, ಹಾಸಿಗೆ, ಮಂಚ ಸಿಕ್ತಾ ಅದೆ. ಅದರ ಬಾಯಿಗೂ ಮಣ್ಣಾಕ್ಕ ಬ್ಯಾಡ’ ಎಂದು ತಿಪ್ಪಣ್ಣ ಬುದ್ಧಿ ಹೇಳಿದ. ಆದರೆ, ತುರೇಮಣೆಯ ಕನಸುಗಳ ನಿಲುವಿನಲ್ಲಿ ಬದಲಾವಣೆ ಕಾಣಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.