ಪಕ್ಷಭೇದ ಮಾಡದೆ ‘ಹುಲಿಯಾ’ನಿಂದ ‘ರಾಜಾಹುಲಿ’ಯವರೆಗೆ ಸಾಕಷ್ಟು ಸೆಲೆಬ್ರಿಟಿಗಳ ಮೇಲೆ ಏಕೋಭಾವದಿಂದ ಕೈಯಿರಿಸಿ, ನಾಕಾರು ದಿನ ಮಲಗಿಸಿ, ಮೆತ್ತಗೆ ಮಾಡಿದ ಕೊರೊನಣ್ಣ, ಒಂದು ದಿನವಾದರೂ ತುಸು ಆರಾಮಾಗಿ ಇರೋಣ ಎಂದುಕೊಂಡ. ತನ್ನ ಚಿಳ್ಳೆಪಿಳ್ಳೆಗಳ ಮರಿ ಸೈನ್ಯವನ್ನು ದಂಡಯಾತ್ರೆಗೆ ಕಳಿಸಿದ.
ರಾತ್ರಿ ಮರಳಿ ಬಂದ ಚಿಳ್ಳೆಪಿಳ್ಳೆಗಳು ಮುಖ ತುಸು ಬಾಡಿಸಿಕೊಂಡಿದ್ದವು.
‘ಯಾಕ್ರಲೇ... ಏನಾತು’ ಕಾಳಜಿಯಿಂದ ಕೇಳಿದ.
‘ಯಾರೂ ನಮಗೆ ಕ್ಯಾರೇ ಎನ್ನವಲ್ಲರು. ಮೂತಿಗೊಂದು ಮಾಸ್ಕ್ ಹಾಕ್ಕಂಡು ಎಲ್ಲಿ ಬೇಕಾದಲ್ಲಿ ಸುತ್ತುತಾರ. ಏನೋ ಕಷಾಯ ಅಂತೆ, ವಿಟಮಿನ್ ಸಿ ಇರೋ ಹಣ್ಣುಹಂಪಲು ಅಂತೆ. ಹಿಂಗೆ ಜಂಕ್ ಫುಡ್ ಬಿಟ್ಟು ಎಲ್ಲಾರೂ ಛಲೋ ಆಹಾರ ತಿಂದ್ಕೋತ, ಆರೋಗ್ಯ ಹೆಚ್ಚು ಮಾಡಿಕೊಂಡಾರ. ಯಾರಿಗಿ ಹೋಗಿ ಬಡಕ್ಕೊಳೂಣು ನಾವು... ಟಿವಿಯೋರೂ ನಮ್ಮ ಬಗ್ಗೆ ವದರೂದೆ ಬಿಟ್ಟಾರ’ ಎಂದವು.
‘ಹೌದನು’ ಎನ್ನುತ್ತ ಟಿ.ವಿ ನೋಡಿದ ಕೊರೊನಣ್ಣನಿಗೂ ವಿಚಿತ್ರವೆನ್ನಿಸಿತು. ‘ಹೆಮ್ಮಾರಿ’, ‘ಡೆಡ್ಲೀ ವೈರಸ್ ರಣಕೇಕೆ’ ಎಂದೆಲ್ಲ ಬೆಂಕಿಯುಂಡೆಯಂತಹ ಮಾತುಗಳನ್ನು ಉದುರಿಸುತ್ತಿದ್ದ ಟಿ.ವಿ ನಿರೂಪಕರು ಅವನ್ನೇ ತಿರುವು ಮುರುವು ಮಾಡಿ ಮಳೆರಾಯನಿಗೆ ಹೇಳುತ್ತಿದ್ದರು. ‘ರುದ್ರನರ್ತನ’, ‘ಮಹಾಮಳೆ’ ಇತ್ಯಾದಿ ಕೇಳಿದ ಕೊರೊನಣ್ಣನಿಗೆ, ಇದೇನಪ್ಪ ಈ ಮಳೆರಾಯ ನನ್ನನ್ನು ಮೀರಿಸುತ್ತಿದ್ದಾನಲ್ಲ ಎಂದು ಚಿಂತೆಯಾಯಿತು.
ಮಳೆರಾಯನಿಗೆ ಫೋನು ಹಚ್ಚಿದ ಕೊರೊನಣ್ಣ ‘ಜನಕ್ಕೆ ಇಷ್ಟ್ ಅನ್ಯಾಯ ಮಾಡಬಾರದು’ ಎಂದು ಬುದ್ಧಿವಾದ ಹೇಳಿದ.
‘ನೀನೇನು ಮಹಾ ನ್ಯಾಯ ಮಾಡಿದ್ದೀಯಪ್ಪಾ’ ಎಂದು ಮಳೆರಾಯ ಪಾಟೀಸವಾಲು ಮಾಡಿದ.
‘ನೋಡಪಾ... ನೀನು ಮನುಷ್ಯರಿಗೆ ಕಣ್ಣೀರು ತರಿಸೋದು ಮಾತ್ರ ಅಲ್ಲ, ಅವರು ಬೆವರು ಬಸಿದು ಬೆಳೆದ ಬಂಗಾರದಂಥ ಬೆಳೆ, ಕಟ್ಟಿದ ಮನೆ, ರಸ್ತೆ, ಜಲಾಶಯ ಎಲ್ಲಾ ಮಣ್ಣು ಮಾಡ್ತೀಯ. ಬೆಟ್ಟಗಿಟ್ಟನೂ ಉರುಳಿಸಿದೀಯಂತೆ. ನನ್ನ ಹಂಗೆ ಮನುಷ್ಯರಿಗೆ ಮಾತ್ರ ಬುದ್ಧಿ ಕಲಿಸಬೇಕು, ಅವರನ್ನು ಮಕಾಡೆ ಮಲಗಿಸಬೇಕು, ಪ್ರಕೃತಿ ಸುದ್ದಿಗೆ ಹೋಗಬಾರದು... ಇನ್ನು ನೀನು ಸುಮ್ಮನಾಗು, ನಾನೇ ಎಲ್ಲಾ ಕಡಿಗೂ ಅಡ್ಡಾಡತೀನಿ’ ಎಂದು ಹೇಳಿದ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.