ADVERTISEMENT

ಕೊರೊನಾ ನಾಳೆ ಬಾ...

ಲಿಂಗರಾಜು ಡಿ.ಎಸ್
Published 16 ಮಾರ್ಚ್ 2020, 19:45 IST
Last Updated 16 ಮಾರ್ಚ್ 2020, 19:45 IST
   

ತುರೇಮಣೆ ಮತ್ತು ಯಂಟಪ್ಪಣ್ಣ ‘ಗೋ ಕೊರೊನಾ ಗೋ’ ಅಂತ ಬಾಗಿಲ ಮ್ಯಾಲೆ ‘ಕೊರೊನಾ- ನಾಳೆ ಬಾ’ ಅಂತ ಬರೆದಿದ್ದನ್ನ ತೋರಿಸಿ ಕೂಗ್ತಿದ್ರು. ‘ಇದೇನ್ಸಾರ್ ಕೊರೊನಾ ಗೋ ಅಂದ್ರೆ ಹೊಂಟೋಯ್ತದಾ?‍’ ಅಂತ ಕೇಳಿದೆ.

‘ಯಾಕಾಗಲ್ಲ?’ ಅಂದ್ರು. ‘ಹ್ಞೂಂಕನೇಳಿ, ಗಂಜಲ ಕುಡೀರಿ, ಬ್ರಾಂದಿ ಕುಡೀರಿ, ಬೆಳ್ಳುಳ್ಳಿ ತಿನ್ನಿ ಕೊರೊನಾ ಹೊಂಟೋಯ್ತದೆ ಅಂತ ದೊಡ್ಡೋರೆಲ್ಲಾ ಅಂತಾವ್ರೆ!’ ಅಂದೆ.

‘ಅಲ್ಲಾ ಆಲ್ಕೋಹಾಲಿರಾ ಸ್ಯಾನಿಟೈಸರಲ್ಲಿ ಕೈ ತೊಳೀಬೇಕಂತೆ! ಸರೀರದ ಒಳಗಡೆ ತೊಳೆಯದೆಂಗೆ? ದಿನಾ ಒಂದು ಮಿಳ್ಳೆ ಎಣ್ಣೆ ಬುಟ್ಕಳಿ ಎಲ್ಲಾ ಕ್ಲೀನಾಯ್ತದೆ ಅಂತ ಯಂಟಪ್ಪಣ್ಣ ಏಳವ್ರೆ’ ಅಂದರು.

ADVERTISEMENT

‘ಕರ್ಚೀಪ ಬ್ರಾಂದೀಲಿ ನೆನಿಸ್ಕಂಡು ಮೂಸ್ತಾ ಇದ್ರೂ ಒಳ್ಳೇದೇ!’ ಅಂದೆ. ‘ಐಡಿಯಾ ಕನೋ! ಆದ್ರೆ ಎಣ್ಣೆ ಸಿಕ್ತಿಲ್ಲ. ಕೋಳಿ ಕೇಜಿಗೆ ಎಂಟು ರುಪಾಯಾಗದೆ! ಉದ್ಯಮದ ಉದ್ದಾರಕ್ಕೆ ‘ಎಣ್ಣೆ ಹೊಡೀರಿ, ಕೋಳಿ ಜಡಿರಿ’ ಅನ್ನೋ ಕಾರ್ಯಕ್ರಮ ಮಾಡ್ತಿದೀವಿ. ಎಣ್ಣೆ ಮಂತ್ರಿಗಳು ಫ್ರೀ ಎಣ್ಣೆ ಕೊಡ್ತಾರ ಕೇಳಬೇಕು’ ಅಂತ ತುರೇಮಣೆ ಮನೆ ಒಳಿಕ್ಕೋದರು.

‘ಬಲ್ಲಿ ಸಾ, ಟೀ ಕುಡಕೋಗುರಿ’ ಅಂತ ಶ್ರೀಮತಿ ತುರೇಮಣೆ ಕರುದ್ರು. ‘ಕುಡಿತ- ಜಡಿತದ ಕುಜ ದೋಸ ಇರೋ ನಮ್ಮನೇರಿಗೆ ಎಣ್ಣೆ ಇಲ್ಲದೇ ಬಾಯಿಬೀಗ ಬಿದ್ದದೆ. ಈಗೇನಂತೆ?’ ಅಂದುದ್ದಕ್ಕೆ ಯಂಟಪ್ಪಣ್ಣ ‘ಸಿಸ್ಟರ್ ಈತರಕೀತರಾ’ ಅಂತ ಎಣ್ಣೆ ಹೊಡಿ, ಕೋಳಿ ಜಡಿ ಕಾರ್ಯಕ್ರಮದ ಪೂರ್ತಿ ವಿವರ ಕೊಟ್ಟು ಹುಳಿ ಹಿಂಡಿಬುಡದಾ! ತುರೇಮಣೆ ಹೊರಗೆ ಬಂದು ಅವರ ಶ್ರೀಮತಿಗಂದರು-

‘ನೋಡ್ಲಮ್ಮಿ, ಇದಾನಸೌದಕ್ಕೆ ಹೋಯ್ತಾ ಅವನಿ. ಮನೆಕಡೆ ಜ್ವಾಪಾನ’ ಅಂದೇಟಿಗೆ ಗೌಡತಿ ಹಳೆ ಪರಕೆ ಹಿಡಕಬಂದು ಅಗತುಕಂಡು ‘ಥೂ ಶನ್ಯೇಸ ನನ ಆಟಗಳ್ಳ. ಬೆಂಗಳೂರಾದ ಬೆಂಗಳೂರೇ ಬಾಯಿಗೆ ಕುಕ್ಕೆ ಹಾಕ್ಕ್ಯಂಡು ಕೂತದೆ. ನಿಗರಾಡದೇ ತೆಪ್ಪಗೆ ಮನೇಲಿ ಕುಂತಿರು. ಇಲ್ಲಾಂದ್ರೆ ಗಾವು ಸಿಗಿದುಬುಟ್ಟೇನು’ ಅಂತ ಅಬ್ಬರಿಸಿ ಬಾಗಿಲು ಬಂದ್ ಮಾಡ್ತಿದ್ದಂಗೇ ಯಂಟಪ್ಪಣ್ಣ, ನಾನು ಕೊರೊನಾ ವೈರಸ್ ಥರಾ ಮೆಲ್ಲಗೆ ಅರುಗಾಗಿಬುಟ್ಟೊ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.