ದೇವೇಂದ್ರನು ಬೆಂಗಳೂರಿಂದ ಜನ ಉಸುರುಗಟ್ಟಿ ಊರಿಗೋಯ್ತಿರದು ನೋಡಿ ‘ಫೋನ್ ಇನ್ ಕಾರ್ಯಕ್ರಮವ ಮಾಡಮು’ ಅಂತ ಆರೋಗ್ಯ ಇಲಾಖೆಯ ಅಶ್ವಿನಿ ದೇವತೆಗಳ ಕರೆಸಿ ರಾವು ರೂಮಲ್ಲಿ ಕುತಗಂಡ್ರು. ಮೊದಲನೇ ಫೋನು ಬಂತು.
‘ನಾನು ಕಮಂಗಿಪುರದಿಂದ. ಕೊರೊನಾ ಅಂದ್ರೇನ್ಸಾ?’ ಇಂದ್ರ ಬೆಪ್ಪಾದರು.
‘ಕೋತ್ಮುಂಡೇವಾ, ರೋಗಿಗಳಾಗಿ ನರಕ ಸೇರಿಕ್ಯಂತಿರಾ ಅಂತ. ಮಡಗು ಫೋನು ಬಡ್ಡೆತ್ತುದೇ’ ಅಂದ್ರು.
‘ನನಗೆ ತಲೆನೋವು, ಜ್ವರ, ಕೆಮ್ಮು ಸಾ ಏನು ಮಾಡಲಿ’ ಅಂದ ಒಬ್ಬ. ‘ಲೇ ಹೈವಾನ್, ಮೊದಲನೇ ಉತ್ತರ ನೋಡು. ಕಾಸಿಲ್ದಿದ್ರೆ ಕೈಸಾಲ ಮಾಡಿ ಕೊರೊನಾ ಸರ್ಟಿಪಿಕೇಟು ತಗಬುಡು’ ಅಂದ್ರು ಇಂದ್ರ.
‘ಸಾ, ಲಾಕ್ಡೌನಲ್ಲಿ ಏನಿರುತ್ತೆ, ಏನಿರಲ್ಲಾ?’ ಅಂದ ಒಬ್ಬ. ‘ಬಡ್ಡಿಹೈದ್ನೆ, ಆಂಬುಲೆನ್ಸ್ ಬರಕುಲ್ಲ, ಬೆಡ್ ಸಿಕ್ಕಕುಲ್ಲ. ಸಾಯಕ್ಕಿದು ಟೈಮಲ್ಲ, ಅಮಿಕ್ಕಂಡು ಮನೇಲಿರು’ ಅಂದ್ರು ದೇವರಾಜರು.
‘ಸಾ, ನಾನು ಪಾರ್ಕೊರೇಟರು. ಆಸ್ತಿ ವಿವರ ಕೊಟ್ಟಿಲ್ಲಾ ಅಂತ ಹೈಕೋರ್ಟ್ ನೋಟಿಸ್ ಕೊಟ್ಟದೆ ಏನು ಮಾಡ್ಲಿ?’ ಅಂದರು. ‘ನಿಮ್ಮ ತಾವು ಸಾಲ ಬುಟ್ರೆ ಕೈಯ್ಯಗೆ ಒಂದು ವಾಚು, ಒಂದು ಇಂಪೋರ್ಟೆಡ್ ಕಾರೂ ಇರಕುಲ್ಲ. ನಂತಾವ ಏನೂ ಇಲ್ಲ, ಎಲ್ಲಾ ನನ್ನೆಂಡ್ರುದೇ ಅಂತ ಕೈಯ್ಯೆತ್ತಿಬುಡಿ’ ಅಂದ್ರು.
‘ಸಾ, ನಾವು ಕೆಪಿಎಸ್ಸಿ ಪರೀಕ್ಷೆ ಬರೀವಾಗ ಹೆಸರು, ಅಡ್ರಸ್ಸು, ಫೋನ್ ನಂಬರು ಜೊತೆಗೆ ಪಾಸ್ ಮಾಡಿ ಅಂತ ರಿಕ್ವೆಸ್ಟು ಬರದಿದೀವಿ. ಮಾಫ್ ಮಾಡಕೇಳಿ ಸಾ’ ಅಂದ ಅಭ್ಯರ್ಥಿ. ‘ನಾಲಾಯಕ್ ನನ ಮಕ್ಕಳ, ಇದೇನು ಕೆಪಿಸಿಸಿ ಅಂದ್ಕಂಡಿದೀರಾ ನಿಮ್ಮ ಎಡವಟ್ಟೆಲ್ಲಾ ಕ್ಷಮಿಸಕೆ. ಹುಸಾರ್’ ಅಂದು ಫೋನಿಟ್ಟರು.
‘ಸಾ, ಕೊರೊನಾ ಬಂದು ಜನ ಹೈರಾಣ ಆಗಿದ್ದಾರಲ್ಲಾ!’ ಅಂದ ಇನ್ನೊಬ್ಬ.
‘ನಾನೇನು ಮಾಡಕ್ಕಾದದ್ಲಾ ಬಡ್ಡೆತ್ತುದೇ! ಮೂರನೇ ಪ್ರಶ್ನೆ ಉತ್ತರ ನೋಡು’ ಅಂದು ‘ರೀ, ಉತ್ತರ ಹೇಳಕ್ಕೆ ಸಾಮ್ರಾಟರನ್ನೇ ಬರೇಳಿ. ಆಶ್ವಾಸನೆ ಕೊಡದೆಂಗೆ ಅಂತ ಸಿದ್ದರಾಮಣ್ಣನ ತಕ್ಕೋಗಿ ತಿಳಕ ಬತ್ತಿನಿ’ ಅಂತ ಕಡದು ಹೊಂಟೋದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.