ಚುರುಮುರಿ
‘ಕರ್ನಾಟಕದ ಜಿಎಸ್ಟಿಗಳು ಹಾಲು, ತರಕಾರಿ, ಮಾಂಸ– ಮಡ್ಡಿ, ಕಸ–ಕಡ್ಡಿ ಯಾಪಾರ ಮಾಡೋರ್ಗೆಲ್ಲಾ ‘ಪೇಟಿಎಂ, ಗೂಗಲ್ ಪೇಯಲ್ಲಿ ಕಾಸು ತಕ್ಕಂಡಿದ್ದೀಯ. ಲಕ್ಷಗಟ್ಟಲೇ ಟ್ಯಾಕ್ಸು ಬತ್ತದೆ’ ಅಂತ ನೋಟಿಸ್ ಕೊಟ್ಟು ಬಾಳುಗೆಡಿಸಿದ್ದು ಅನ್ನೇಯ ಅಲ್ಲುವಾ?’ ತಿಪ್ಪಣ್ಣ ಕಥೆ ಸುರು ಮಾಡಿದ್ದ.
‘ಇವರಿಗೆಲ್ಲಾ ಜಿಎಸ್ಟಿ ಬರಕುಲ್ವಲ್ಲೋ ಅಣ್ತಮ್ಮಾ?’ ಅಂತಂದೆ.
‘ಅದೇಯ ಟ್ವಿಸ್ಟು. ಅವರೆಲ್ಲಾ ಒಂದಾಗಿ ಜಬರಿಸಿದಾಗ ಕೊಟ್ಟುದ್ದ ನೋಟಿಸ್ ವಾಪಾಸ್ ಇಸುಗಂದು ಸುಮ್ಮಗಾದರಲ್ಲ. ಸರ್ಕಾರ ಗ್ಯಾರಂಟಿಗೆ ಕಾಸಿಲ್ದೆ ‘ಬಿಟ್ಟೀ ಬ್ಯಾಗ್ ಯಾ’ ಅಂತ ಜನದ ಜೋಬಿಗೆ ಕೈ ಇಳಿ ಬುಡ್ತಾದೆ. ಅದುಕ್ಕೆ ಬ್ಯಾರೆ ದಾರಿ ಹುಡುಕಿ ಎಲ್ಲೆಲ್ಲಿ ಟ್ಯಾಕ್ಸು ಹಾಕಬಯ್ದು ಅಂತ ಸರ್ಕಾರಕ್ಕೆ ಹೇಳಬೇಕು ಅಂತ ಇವ್ನಿ’ ತಿಪ್ಪಣ್ಣನ ಇಚಾರಕ್ಕೆ ತಲೆದೂಗಿದೆ.
‘ಅಣ್ತಮ್ಮಾ, ಪಾಪದ ಕುಡುಕಣ್ಣಗಳು ವೈನ್ ಸ್ಟೋರಿಗೋಗಿ ಒಂದು ಕ್ವಾಟ್ರು ಶೇಕು ತೈಲ ಇಳಿಸಿ ನಾಕು ಕಡ್ಲೇಬೀಜ ಬಾಯಿಗೆ ಎಸ್ಕಂದು ಹೋಯ್ತಿದ್ದರಲ್ಲಾ, ಆ ಎಸ್ಕೋ ಬಾರುಗಳೂ ಈಗ ಖಾಲಿ ಹೊಡಿತಾವೆ’ ಅಂತಂದೆ.
‘ಮಳೆ ಚೆನ್ನಾಗಿ ಹೂದು ನೆಲ ಹದವಾಗ್ಯದೆ. ರೈತರು, ಗೊಬ್ಬರ ಕೊಡ್ರೋ ಅಂತ ಬಾಯಿಬಾಯಿ ಬಡಕಂಡು ಮಣ್ಣು ತಿಂತಿದ್ರೂ ಖುಷಿ ಸಚೇವರು, ಗೊಬ್ಬರ ನಮ್ಮತಾವೆಲ್ಲದೆ? ಕೇಂದ್ರದೋರು ಕೊಟ್ಟಿಲ್ಲ, ನಾವೇನು ಮಾಡನೆ? ಅಂತವ ಜಾಲಿಯಾಗಿ ತಿರುಗಾಡಿಕ್ಯಂದವ್ರೆ’ ತಿಪ್ಪಣ್ಣ ಬೇಸರ ಹೊರಹಾಕಿದ.
‘ನೋಡ್ರಲಾ, ರಾಜಕಾರಣಿಗಳ ಬಾಯಿಗೆ ಜಿಎಸ್ಟಿ ಮೀಟರ್ ಫಿಕ್ಸ್ ಮಾಡಬಕು. ಇವರು ಕಿಸಿಯಕ್ಕೆ ಕ್ಯಾಮೆ ಇಲ್ಲದೇ ಬೆಂಗಳೂರಗೆ ಸುತ್ತಾಡಿಕ್ಯಂದು ಜನ ಶೇವೆ ಅಂತ ಎಪರಾ ತಪರಾ ಯೋಜನೆಗಳ ಬಗ್ಗೆ ಮಾತು ಸುರು ಮಾಡಿದಾಗ ಮೀಟರ್ ಓಡ್ತದಲ್ಲಾ, ಅದರ ರೀಡಿಂಗ್ ತಗಂದು ತುತ್ತೂರಿ ಟ್ಯಾಕ್ಸು ಹಾಕಬಕು. ಯಂಗೆ?’ ತಮ್ಮ ಐಡಿಯಾದ ಭಾರದಲ್ಲಿ ತುರೇಮಣೆ ಬೀಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.