
ಗೋಪಾಲಿ, ವೈಶಾಲಿ ಮನೆಗೆ ಬಂದು, ‘ಮಗಳ ಮದುವೆ ಸೆಟ್ಟಾಯ್ತು’ ಎಂದು ಕಾರ್ಡ್ ಕೊಟ್ಟರು.
‘ಇಷ್ಟು ಬೇಗ ಗಂಡು ಹುಡುಕಿಬಿಟ್ರಾ?’ ಶಂಕ್ರಿ ಕಾರ್ಡ್ ಈಸ್ಕೊಂಡ.
‘ಮಗಳೇ ಹುಡುಕಿಕೊಂಡಳು. ನಾವು ಕಲ್ಯಾಣಮಂಟಪ ಹುಡುಕಿ, ಮದ್ವೆಗೆ ದುಡ್ಡು ವ್ಯವಸ್ಥೆ ಮಾಡಿಕೊಂಡೆವು’ ವೈಶಾಲಿ ಹೇಳಿದಳು.
‘ಹೊಸ ಸಂಬಂಧವಾ?’ ಸುಮಿ ಕಾಫಿ ತಂದುಕೊಟ್ಟಳು.
‘ಯಾವ ಸಂಬಂಧವೂ ಇಲ್ಲ, ಹುಡುಗನ ಜಾತಿ–ಕುಲವೂ ಗೊತ್ತಿಲ್ಲ. ಆ ಕುಲ, ಈ ಕುಲ ಡ್ರಾಕುಲ ಅಂತ ಹುಡುಗನ ಬಗ್ಗೆ ಕೇಳಕೂಡದು ಎಂದು ಮಗಳು ಕಂಡೀಷನ್ ಹಾಕಿಬಿಟ್ಟಿದ್ದಾಳೆ!’
‘ಹುಡುಗ–ಹುಡುಗಿಯ ಜಾತಿ, ಜಾತಕ, ವರಸೆ, ಸಾಲಾವಳಿ ನೋಡದೆ ನೀವು ಒಪ್ಪಿಬಿಟ್ರಾ?’
‘ಮದುವೆ ಮಸೂದೆ ಪ್ರಭಾವ ಕಣ್ರೀ... ಮರ್ಯಾದೆಗೇಡು ಹತ್ಯೆಯ ಪ್ರಯತ್ನ ಮಾಡಿದರೆ ಜೈಲು ಸೇರಬೇಕಾಗುತ್ತದೆ ಎಂದು ಮಗಳು ನಮ್ಮನ್ನು ಹೆದರಿಸಿದ್ದಾಳೆ!’
‘ಮದುವೆ ಮಸೂದೆ ಪ್ರಕಾರ ಮಕ್ಕಳು ಸಂಗಾತಿ ಆಯ್ಕೆ ಮಾಡಿಕೊಂಡು ಆಗುವ ಮದುವೆ ವಿರೋಧಿಸುವುದು ಕಾನೂನುಬಾಹಿರ’ ಅಂದ ಶಂಕ್ರಿ.
‘ಇನ್ಮೇಲೆ ಮಕ್ಕಳನ್ನು ಕುಲತಿಲಕ, ವಂಶೋದ್ಧಾರಕ ಅಂತೆಲ್ಲಾ ಹೇಳುವಂತಿಲ್ಲ’ ಗೋಪಾಲಿ ನಿಟ್ಟುಸಿರುಬಿಟ್ಟ.
‘ಮದುವೆಯಲ್ಲಿ ಶಾಸ್ತ್ರ ಮತ್ತು ಸಂಪ್ರದಾಯ ಆಚರಣೆಗಿಂಥ ಮದುವೆ ಮಸೂದೆ ನಿಯಮಗಳ ಪಾಲನೆ ಮುಖ್ಯವಾಗುತ್ತದೆ’.
‘ಜೀವನಪರ್ಯಂತ ಜೊತೆಯಲ್ಲಿ ಬಾಳಬೇಕಾದ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳುವ ಜೀವನನುಭವ ಆ ವಯಸ್ಸಿನ ಮಕ್ಕಳಿಗೆ ಇರೋದಿಲ್ಲ, ನಿಮ್ಮ ಮಗಳ ಸಂಗಾತಿ ಆಯ್ಕೆ ಯೋಗ್ಯವೆ ಎಂದು ಪರಿಶೀಲಿಸಿ’.
‘ಹೌದು. ಹೆಣ್ಣುಮಕ್ಕಳು ಸೀರೆ ಆಯ್ಕೆಯಲ್ಲಿ ತೋರಿಸುವ ಜಾಣತನವನ್ನು ಗಂಡನ ಆಯ್ಕೆಯಲ್ಲಿ ತೋರಿಸದೆ ಯಾಮಾರಿಬಿಡ್ತಾರೆ!’
‘ಹೌದು ಕಣ್ರೀ, ಸೀರೆಯ ಸೆರಗು, ಕಲರ್, ಡಿಸೈನ್ ಬಾರ್ಡರ್, ಬೆಲೆ ನೋಡಿ ಯೋಗ್ಯವಾದುದನ್ನು ಆರಿಸುವ ನಾನು ಗುಣಮಟ್ಟದ ಗಂಡನನ್ನು ಆಯ್ಕೆ ಮಾಡುವಲ್ಲಿ ಯಾಮಾರಿಬಿಟ್ಟೆ ಕಣ್ರೀ!’ ಎನ್ನುತ್ತಾ ಸುಮಿ ವೈಶಾಲಿಗೆ ಕುಂಕುಮ ಕೊಟ್ಟಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.