ADVERTISEMENT

ಚುರುಮುರಿ: ಕ್ಯಾಲೆಂಡರ್ ಶ್ರವಣ!

ತುರುವೇಕೆರೆ ಪ್ರಸಾದ್
Published 3 ಜನವರಿ 2026, 1:06 IST
Last Updated 3 ಜನವರಿ 2026, 1:06 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಲೇಯ್, ವೊಸ ವರ್ಸದ ಕ್ಯಾಲೆಂಡರ್ ಪಠಣ ಶುರು ಹಚ್ಕತೀನಿ... ರಾಜಕೀಯ ಕೊಳೆ, ಕಳೆ ಮತ್ತು ಗುಳೆ ಬಗ್ಗೆ ಯೋಳ್ತೀನಿ. ಕಣ್ಣು, ಕಿವಿ ಮತ್ತು ಗ್ಯಾನ ನೆಟ್ಟಗಿಟ್ಕಂಡು ಕೇಳಿ, ಪುಣ್ಯ ಬತ್ತದೆ’ ಎಂದು ಕ್ಯಾಲೆಂಡರ್ ಕಣ್ಗೊತ್ತಿಕೊಂಡ ಗುದ್ಲಿಂಗ.

‘ಅಂಗಾರೆ ಪುಣ್ಯ ಬರಾಕಿಲ್ಲ, ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂದಂಗೆ ಪಾಪಾನೇ ಸುತ್ಕಳಾದು... ಸರಿ, ಅದೇನು ಒದ್ರು’ ಎಂದ ಪರ‍್ಮೇಶಿ.

ADVERTISEMENT

‘ನಮ್ಮಲ್ಲಿ ಷಡೃತು ಇದ್ದಂಗೆ ರಾಜಕೀಯ ಕ್ಯಾಲೆಂಡರಲ್ಲಿ ಏಳು ಪರ್ವ ಇದಾವೆ! ಬಜೆಟ್ ಪರ್ವ, ಕ್ರಾಂತಿ ಪರ್ವ, ಅಧಿವೇಶನ ಪರ್ವ, ಭ್ರಾಂತಿ ಪರ್ವ, ಸಂಘರ್ಷ ಪರ್ವ, ಶೂನ್ಯ ಪರ್ವ, ಶಿಶಿರ ಪರ್ವ, ಅಂತ! ಬಜೆಟ್ ಪರ್ವ ಶುರುವಾಗದೆ, ಆದಾದ ಮೇಲೆ ಮತ್ತೆ ಕುರ್ಚಿ ಕ್ರಾಂತಿ ಶುರುವಾಯ್ತದೆ. ಆಮೇಲೆ ಅಧಿವೇಶನ ಪರ್ವ ಶುರುವಾಗಿ ಆಷಾಢದಲ್ಲಿ ಎಲ್ಲ ಭ್ರಾಂತಿ ಅನುಸ್ತದೆ...’

‘ಅರ್ಥ ಆಯ್ತು ಬಿಡು. ಆಮೇಲೆ ಸಂಘರ್ಷ ಪರ್ವ ಶುರು. ಈ ಸಾರಿ ಸೀಕ್ರೆಟ್ ಡಿನ್ನರ್ ಬದ್ಲು ಓಪನ್ ಹಸ್ತಪಾತ್ರೆ ಭೋಜನ (ಬಫೆ) ಶುರುವಾಗ್ಬಹುದು’.

‘ಕೈನಲ್ಲಿ ಮಾತ್ರ ಅಲ್ಲ, ಕಮಲ– ದಳದಲ್ಲೂ ಬಂಡಾಯ ಎಚ್ಚಾಗ್ಬಹುದು... ಕಮಲೇ ಕಮಲೋತ್ಪತ್ತಿಃ, ದಳೇ ಭಾರೀ ಕಳೆ ಉತ್ಪತ್ತಿಃ ಅನ್ನೋ ಅಂಗಾಗಬಹುದು’.

‘ಈ ಶೂನ್ಯ ಪರ್ವ ಅಂದ್ರೇನು?’

‘ರಾಜಕೀಯದೋರಿಗೆ (ಮೂಢ)ನಂಬಿಕೆ ಜಾಸ್ತಿ, ಅದ್ಕೇ ಅವರು ಅಮಾವಾಸ್ಯೆ ಹಿಂದೆ ಮುಂದೆ ಏನೂ ಮಾಡಕಿಲ್ಲ. ಅವೆಲ್ಲಾ ಸೇರಿ ಶೂನ್ಯ ಪರ್ವ, ವಿರೋಧಿಗಳಿಗೆ ಮಾಟ ಮಂತ್ರ ಮಾಡ್ಸೋ ಟೈಮ್ ಅದು’.

‘ಸರಿ, ಈ ಶಿಶಿರ ಪರ್ವ ಅಂದ್ರೇನು?’

‘ಶಿ–ಶಿರ ಅಂದ್ರೆ ಎಲ್ಲಾ ಹೈಕಮಾಂಡ್ ಸೋನಿಯಾಜಿ ಕೈಲಿದೆ ಅಂತ. ಅವರು ಯಾವ ಪರ್ವಾನ ಯಾವಾಗ ಬೇಕಾದ್ರೂ ಉಲ್ಟಾ ಮಾಡ್ ಹಾಕ್ಬಹುದು’ ಎಂದ ಗುದ್ಲಿಂಗ ನಸುನಗುತ್ತಾ!

ಎಲ್ಲಾ ಕಣ್ ಕಣ್ ಬಿಟ್ಟರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.