
ಇವತ್ತು ಏನಾದರಾಗ್ಲಿ, ಡಿಸಿಎಂ ಡಿಕೆಶಿ ಸಾಹೇಬ್ರ ಮೌನ ಭಂಗ ಮಾಡ್ಲೇಬೇಕು ಎಂದು ಪಣ ತೊಟ್ಟು ಕ್ಯಾಮೆರಾ, ಮೈಕು ಹಿಡ್ಕಂಡು ವಿಧಾನಸೌಧಕ್ಕೆ ಹೋದ ಟಿ.ವಿ. ಪತ್ರಕರ್ತ ತೆಪರೇಸಿ. ಡಿಕೆಶಿ ಸಾಹೇಬ್ರು ಬಂಡೆಯಂತೆ ಕೂತಿದ್ದರು.
‘ಸರ್, ನವೆಂಬರ್ ಕ್ರಾಂತಿ ಗ್ಯಾರಂಟಿನಾ?’ ತೆಪರೇಸಿ ಕಡ್ಡಿ ಕೆರೆಯೋಕೆ ಮೆಲ್ಲಗೆ ಕಡ್ಡಿಪೆಟಿಗಿ ಹೊರ ತೆಗೆದ.
ಬಂಡೆ ಸಾಹೇಬ್ರು ತುಟಿ ಮೇಲೆ ಬೆರಳಿಟ್ಟು ಸುಮ್ಮನೆ ನಕ್ಕರು.
‘ಮಾತಾಡಲ್ವ? ಮೌನ ವ್ರತಾನ? ಅಥ್ವ ಮೌನ ಯುದ್ಧಾನ?’ ಎಂದ ತೆಪರೇಸಿ.
ಬಂಡೆ ಸಾಹೇಬ್ರು ಎರಡೂ ಕೈ ಎತ್ತಿ ಮುಗಿದರು.
‘ಅಂದ್ರೆ? ದೊಡ್ಡ ನಮಸ್ಕಾರ, ಏನಾದ್ರು ತಿಳ್ಕಾ ಅಂತಾನ? ಈಗ ಮತ್ತೆ ದಲಿತ ಸಿ.ಎಂ. ಡಿಮ್ಯಾಂಡ್ ಶುರುವಾಗಿದೆ?’
ಬಂಡೆ ಸಾಹೇಬ್ರು ಬಲಗೈ ಬೆರಳು ಮೇಲಕ್ಕೆತ್ತಿ ತೋರಿಸಿದರು.
‘ಅಂದ್ರೆ ಹೈಕಮಾಂಡ್ಗೆ ಬಿಟ್ಟದ್ದು ಅಂತಾನ? ಸಿದ್ರಾಮಣ್ಣ ಸಾಹೇಬ್ರ ಕಡೆ ಬಾಳ ಜನ ಬ್ಯಾಟಿಂಗ್ ಮಾಡ್ತಿದಾರೆ?’
ಬಂಡೆ ಆಕಾಶ ನೋಡಿದರು. ತೆಪರೇಸಿಗೆ ಅಲ್ಲೇನೂ ಕಾಣಿಸಲಿಲ್ಲ. ‘ಓ.. ದೇವರಿದಾನೆ ಅಂತಾನ? ಅದಿರ್ಲಿ ಈಗ ಎಲ್ಲ ಕಡೆ ಔತಣಕೂಟ ಜಾಸ್ತಿಯಾಗಿದಾವೆ?’
ಆಗಲೂ ಬಂಡೆ ಸಾಹೇಬ್ರು ಏನನ್ನೂ ಮಾತಾಡದೆ ತಮ್ಮ ಮುಂದಿದ್ದ ಕಪ್ ಎತ್ತಿ ನೀರು ಕುಡಿದರು.
‘ಓ.. ಅವರು ಊಟ ಮಾಡ್ಲಿ, ನಾನು ನೀರು ಕುಡಿಸ್ತೀನಿ ಅಂತ ಅರ್ಥನಾ?’
ಬಂಡೆ ಸಾಹೇಬ್ರು ಹಣೆ ಮುಟ್ಟಿಕೊಂಡರು.
‘ಗೊತ್ತಾತು, ಹಣೆಬರಹದಲ್ಲಿ ಇದ್ರೆ ಸಿ.ಎಂ. ಆಗ್ತೀನಿ ಅಂತ. ಹಣೆಬರಹದಲ್ಲಿ ಇಲ್ಲದೇ ಇದ್ರೆ?’
ಬಂಡೆ ಸಾಹೇಬ್ರ ಮುಖ ಕೆಂಪಾಯಿತು. ಸಿಟ್ಟಿನಿಂದ ಬಾಗಿಲ ಕಡೆಗೆ ಕೈ ತೋರಿಸಿದರು.
‘ಓ... ಬಾಗಿಲು ಒದ್ದು ಸಿ.ಎಂ. ಸ್ಥಾನ ಕಿತ್ಕೋತೀನಿ ಅಂದ್ರಾ?’
‘ಇಲ್ಲ, ಬಾಗಿಲು ಆ ಕಡೆ ಇದೆ, ಎದ್ದು ನಡಿಯಪ್ಪ ಸಾಕು ಅಂದೆ...’ ಬಾಯಿ ಬಿಟ್ಟರು ಬಂಡೆ!
ಕೊನೆಗೂ ಡಿಕೆಶಿ ಮೌನ ಭಂಗ ಮಾಡಿದ ಖುಷಿಯಲ್ಲಿ ಪಿಟಿಕ್ಕನ್ನದೆ ಎದ್ದು ಬಂದ ತೆಪರೇಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.