ADVERTISEMENT

ಚುರುಮುರಿ: ನೋಡಿ ಸ್ವಾಮಿ...

ಸುಮಂಗಲಾ
Published 26 ಜನವರಿ 2026, 0:30 IST
Last Updated 26 ಜನವರಿ 2026, 0:30 IST
   

‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು.

‘ಏನಲೇ... ಯಾವುದಾರೆ ರಿಯಾಲಿಟಿ ಶೋಗೆ ಹೋಕ್ಕೀಯೇನು? ಇತ್ತಿತ್ತಲಾಗಿ ಭಾಳ ಹಾಡು ಹಾಡಾಕೆ ಹತ್ತೀ...’ ಎಂದೆ ಕುತೂಹಲದಿಂದ.

‘ನಾನಷ್ಟೇ ಅಲ್ಲ... ಟ್ರಂಪಣ್ಣನೂ ಇದೇ ಹಾಡು ಹಾಡಿಕೋತ ತಕಥೈ ಅಂತ ಕುಣಿಲಾಕೆ ಹತ್ಯಾನೆ! ಗ್ರೀನ್‌ಲ್ಯಾಂಡ್‌ ನಮ್ಮದು ಅಂತ ತೊಡೆ ತಟ್ಟುವಾಗ, ವಿಶ್ವಸಂಸ್ಥೆಯ ಅದೆಷ್ಟೋ ಮಂಡಳಿಗಳಿಂದ ಹೊರಗೆ ಹೋಗೂವಾಗ, ಸುಂಕ ಹೆಚ್ಚು ಮಾಡೂವಾಗ, ಹಿಂಗ ಎಲ್ಲಾ ಟೈಮಿನಾಗೂ ಅಂವಾ ಇದೇ ಹಾಡು ಹಾಡಾಕೆ ಹತ್ಯಾನೆ!’ ಎಂದು ಮುಸಿಮುಸಿ ನಕ್ಕಿತು.

ADVERTISEMENT

‘ಇಲ್ಲಿ ನಮ್ಮ ರಾಜಕಾರಣಿಗಳು ಏನು ಕಡಿಮಿ? ಅವರೂ ಇದೇ ಹಾಡು ಹಾಡಿಕೋತ, ಅಧಿಕಾರ,
ಕುರ್ಚಿ, ರೊಕ್ಕಕ್ಕಾಗಿ ಏನು ಬೇಕಾದರೂ ಮಾಡತಾರೆ. ಅದು ಹೋಗಲಿ ಅಂದ್ರ ರಾಜ್ಯಪಾಲರೂ ಪೂರಾ ಭಾಷಣನೂ ಓದದೇ, ನೋಡಿ ಸ್ವಾಮಿ ನಾನಿರಾದೆ ಹಿಂಗೆ ಅಂತ್ಹೇಳಿ ಸದನದಿಂದ ಹೊರಹೋಗತಾರೆ’ ಅಂದೆ ಸಿಟ್ಟಿನಿಂದ.  

‘ಇವರಷ್ಟೇ ಅಲ್ಲ... ಎಲ್ಲಾ ಕಾರ್ಪೋರೇಟ್‌ ಕುಳಗಳು, ಗಣಿಧಣಿಗಳು, ಭ್ರಷ್ಟ ಅಧಿಕಾರಿಗಳು ಎಲ್ಲಾರೂ ಇದೇ ಹಾಡು ಹಾಡಿಕೋತ ತಮ್ಮ ಕಾರುಬಾರು ನಡೆಸತಾರೆ. ಯಾರಿಗೂ ಶ್ರೀಸಾಮಾನ್ಯರ ಬಗ್ಗೆ ಒಂದಿಷ್ಟೂ ಚಿಂತಿ ಇಲ್ಲ’ ಎಂದು ಬೆಕ್ಕಣ್ಣನೂ ಗುರುಗುಟ್ಟಿತು.

‘77ನೇ ಗಣರಾಜ್ಯೋತ್ಸವ ಬಂದರೂ ಶ್ರೀಸಾಮಾನ್ಯನ ಬದುಕು ಉದ್ಧಾರ ಆಗಿಲ್ಲ... ಸಂವಿಧಾನದ ಆಶಯಗಳನ್ನು ಸಾಕಾರ ಮಾಡೂದು ಬಿಡು, ಅದನ್ನೇ ಬದಲಿ ಮಾಡಕ್ಕೆ ಹೊರಟಾರೆ. ನಾವಿರೋದೆ ಹೀಗೆ, ಹಿಂದೆಯೂ, ಇಂದೂ, ಮುಂದೂ ಅಂತ ಹಾಡತಾರೆ’ ಎಂದೆ.

‘ನೀವು ಶ್ರೀಸಾಮಾನ್ಯರೂ ಅಷ್ಟೇ ಜಡ್ಡುಗಟ್ಟೀರಿ. ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಹಾಡಿಕೋತ, ರೊಕ್ಕ ತಗಂಡು ಓಟು ಹಾಕುತೀರಿ. ನಿಮ್ಮದೇ ಬುಡಕ್ಕೆ ಬೆಂಕಿ ಬೀಳೂ ತನಾ ನನಗ್ಯಾಕೆ ಬಿಡು ಅಂತ ತೆಪ್ಪಗೆ ಕುಂದರತೀರಿ’ ಎಂದು ಬೆಕ್ಕಣ್ಣ ಹಂಗಿಸಿದಾಗ ನಾನು ಉತ್ತರಿಸಲಾಗದೇ ತೆಪ್ಪಗಾದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.