ADVERTISEMENT

ಚುರುಮುರಿ: ಶಾಂತಿ ಮತ್ತು ಸುಖ!

ಬಿ.ಎನ್.ಮಲ್ಲೇಶ್
Published 9 ಅಕ್ಟೋಬರ್ 2025, 23:40 IST
Last Updated 9 ಅಕ್ಟೋಬರ್ 2025, 23:40 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಲೇ ತೆಪರ, ವಿಧಾನಸೌಧದ ಮೇಲೆ, ಸರ್ಕಾರದ ಕೆಲಸ ದೇವರ ಕೆಲಸ ಅಂತ ಬರೆಸಿದಾರಲ್ಲ, ಯಾಕಿರಬೋದು?’ ಹರಟೆಕಟ್ಟೆಯಲ್ಲಿ ಗುಡ್ಡೆ ಕೇಳಿದ.

‘ದೇವರ ಕೆಲ್ಸ ಅಲ್ವಾ? ತಟ್ಟೆಗೆ ಕಾಸು ಬೀಳದೆ ನಿಮ್ ಕೆಲ್ಸ ಆಗಲ್ಲ ಅಂತ ಹೇಳೋಕಿರಬೋದು.‌..’ ತೆಪರೇಸಿ ನಕ್ಕ.

ADVERTISEMENT

‘ಅದೇ ತರ ವಿಧಾನಸೌಧದ ಮೂರನೇ ಮಹಡಿಗೆ ಈಗ ಏನಂತ ಬರೆಸಬೋದು?’

‘ಸಿ.ಎಂ ಕುರ್ಚಿ ಖಾಲಿ ಇಲ್ಲ!’

‘ನಮ್ ಬಂಡೆ ಸಾಹೇಬ್ರ ಆಫೀಸಿಗೆ?’

‘ಇಲ್ಲಿ ನಟ್ಟು ಬೋಲ್ಟು ಟೈಟ್ ಮಾಡಲಾಗುವುದು!’

‘ಕರೆಕ್ಟ್, ನಮ್ ಸಿದ್ರಾಮಣ್ಣ ಸಾಹೇಬ್ರ ಆಫೀಸ್ ಮೇಲೆ ಏನಂತ ಬರೆಸಬೋದು?’ ಕೊಟ್ರೇಶಿ ಕೊಕ್ಕೆ.

‘ಹೊಡೀರಿ ಕಪಾಳಕ್ಕೆ...’

‘ಯಾರಿಗೆ, ನಂಗಾ?’

‘ಥೋ... ನಿಂಗಲ್ಲಲೆ, ಸಿದ್ರಾಮಣ್ಣ ಯಾವಾಗ್ಲು ಹಂಗೆ ಅಂತಿರ್ತಾರಲ್ಲ, ಅದ್ಕೆ ಹಂಗಂದೆ.‌..’

‘ಲೇ ಗುಡ್ಡೆ, ನೀನೇಳಲೆ, ಹೋಂ ಮಿನಿಸ್ಟ್ರು ಆಫೀಸ್ ಮೇಲೆ ಏನ್ ಬರೆಸಬೋದು?’ ಮಂಜಮ್ಮ ಕೇಳಿದಳು.

‘ಗೊತ್ತಿಲ್ಲ...’

‘ಏನು? ಗೊತ್ತಿಲ್ವಾ?’

‘ಥೋ, ಹಂಗಲ್ಲ... ನಮ್ ಹೋಂ ಸಾಹೇಬ್ರು ಏನ್ ಕೇಳಿದ್ರೂ ಗೊತ್ತಿಲ್ಲ ಅಂತಿರ್ತಾರಲ್ಲ, ಅದ್ನೇ ಹೇಳಿದೆ ಮಂಜಮ್ಮ...’ ಗುಡ್ಡೆ ನಕ್ಕ.

‘ಸರಿ, ನಮ್ ಜಮೀರಣ್ಣನ ಆಫೀಸ್ ಮೇಲೆ?’

‘ಥು, ನಿನ್ ಜನ್ಮಕ್ಕೆ, ಹೋಗು...’

‘ಏಯ್, ಯಾಕೋ?’ ಮಂಜಮ್ಮಗೆ ಸಿಟ್ಟು ಬಂತು.

‘ಥೋತ್ತೇರಿ, ಅದು ಜಮೀರಣ್ಣಂಗೆ ಸಿಟ್ಟು ಬಂದಾಗ ಹಂಗೆ ಅಂತಿರ್ತಾರೆ ಮಂಜಮ್ಮ...’

‘ಆತು ಬಿಡ್ರಪ್ಪ, ನಮ್ ಬ್ರದರ್ ಕುಮಾರಣ್ಣನ ಆಫೀಸ್ ಮೇಲೆ ಏನ್ ಬರೆಸಬೋದು?’ ದುಬ್ಬೀರ ಕೇಳಿದ.

‘ಸೂಕ್ತ ಸಮಯ ಬಂದಾಗ ಎಲ್ಲ ಬಿಚ್ಚಿಡಲಾಗುವುದು...’

‘ಓಕೆ, ನಮ್ ರಾಗಾ ಆಫೀಸ್ ಮೇಲೆ?’

‘ಬಾಂಬುಗಳಿವೆ ಎಚ್ಚರಿಕೆ!’

‘ಟ್ರಂಪಣ್ಣನ ವೈಟ್ ಹೌಸ್ ಮೇಲೆ?’

‘ಶಾಂತಿ’ ಇಲ್ಲದೆ ಸುಖವಿಲ್ಲ...!’

‘ಶಾಂತಿನಾ? ಯಾರದು?’

‘ಅವಳಾ, ನಮ್ ತೆಪರೇಸಿ ಅಕ್ಕನ ಮಗಳು...!’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.