
‘ಏನ್ರಲೆ, ದೀಪಾವಳಿ ಜೋರಾತ? ಪಟಾಕೀನೂ ಹೊಡೆದ್ರಾ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಹೊಡೆದ್ವಿ ಕಣಲೆ, ಅದೆಂಥದೋ ಹಸಿರು ಪಟಾಕಿಯಂತೆ, ಒಂದೂ ಢಂ ಅನ್ಲಿಲ್ಲ, ಬರೀ ಟುಸುಮುರಗಿ...’ ಎಂದ ಕೊಟ್ರೇಶಿ.
‘ನಿನ್ ಹಸಿರು ಪಟಾಕಿ ಹಂಗಿರ್ಲಿ, ನಮ್ ರಾಜಕೀಯದೋರ ಕೆಸರು ಪಟಾಕಿ ನೋಡು, ಭರ್ಜರಿ ಸೌಂಡು... ಅಲ್ಲಿ ಟ್ರಂಪ್ ಟ್ಯಾಕ್ಸ್ ಪಟಾಕಿ, ಇಲ್ಲಿ ಆರೆಸ್ಸೆಸ್ ದೊಣ್ಣೆ ಪಟಾಕಿ!’ ಗುಡ್ಡೆ ನಕ್ಕ.
‘ಈ ರಾಜಕೀಯದೋರು ಮಾತಿನ ಕೆಸರೆರಚಾಟದ ಜತಿಗೆ ಒಳಗೇ ಎಲ್ಲೆಲ್ಲಿ ಪಟಾಕಿ ಹಚ್ಚಬೇಕೋ ಹಚ್ಚಿರ್ತಾರೆ, ಗೊತ್ತೇ ಆಗಲ್ಲ...’ ತೆಪರೇಸಿಗೂ ನಗು.
‘ಹೌದಾ? ಮತ್ತೆ ಒಂದೂ ಢಂ ಅಂದಿಲ್ಲ?’
‘ಅವು ಟೈಂ ಬಾಂಬ್ ತರ, ಯಾವ ಟೈಮಲ್ಲಿ ಎಲ್ಲಿ ಢಂ ಅಂತಾವೋ ದೇವರಿಗೇ ಗೊತ್ತು...’
‘ದೇವರು ಅಂದ ಕೂಡ್ಲೆ ನೆನಪಾತು ನೋಡು, ನಮ್ ದೇವರುಗಳಿಗೆ ಈ ರಾಜಕಾರಣಿಗಳ ಬೇಡಿಕೆ ಕೇಳಿ ಕೇಳಿ ತೆಲಿ ಕೆಟ್ಟು ಹೋಗೇತಂತೆ. ಸಿ.ಎಂ ಕುರ್ಚಿ ಉಳಿಸಿ ಅಂತ ಒಬ್ರು, ಕೊಡ್ಸಿ ಅಂತ ಇನ್ನೊಬ್ರು... ಯಾರ ಮಾತಂತ ಕೇಳೋದು?’
‘ಇದರ ಜತಿಗೆ ಈಗ ನಮ್ ಯತೀಂದ್ರಣ್ಣನೂ ಸಿ.ಎಂ ಉತ್ತರಾಧಿಕಾರದ ಹೊಸ ಪಟಾಕಿ ಹಚ್ಚಿಬಿಟ್ಟಿದಾರೆ?’
‘ಅದು ಪಟಾಕಿ ಅಲ್ಲ, ಬಾಂಬು... ಯಾರ ಬುಡಕ್ಕೆ ಇಡಬೇಕೋ ಇಟ್ಟಿದಾರೆ, ಢಂ ಅನ್ನೋದೊಂದು ಬಾಕಿ...’ ಎಂದು ಮಂಜಮ್ಮ ನಕ್ಕಳು.
‘ಅಹಹ, ನಗು ನೋಡು, ಕೈ ಪಕ್ಷದೋರು ಕಿತ್ತಾಡಿದ್ರೆ ನಿಂಗೆ ಖುಷಿ ಅಲ್ವಾ? ಹೋಗ್ಲಿ, ನಿಂಗೆ ಜಹಾಂಗೀರ್ ಮಾಡಾಕೆ ಬರುತ್ತಾ?’ ಗುಡ್ಡೆ ಕೇಳಿದ.
‘ಬರುತ್ತೆ, ಆದ್ರೆ ಮಾಡಲ್ಲ...’
‘ಮೊನ್ನೆ ನಮ್ ರಾಗಾ ಸಾಹೇಬ್ರು ಡೆಲ್ಲೀಲಿ ಜಹಾಂಗೀರು, ಲಾಡು ಎಷ್ಟ್ ಚೆನ್ನಾಗಿ ಮಾಡಿದ್ರು ಗೊತ್ತಾ?’
‘ಅದ್ಕೇ ಮಾಡಲ್ಲ, ಅದಿರ್ಲಿ, ನಿಮ್ ರಾಗಾ ಸಾಹೇಬ್ರಿಗೆ ಕೇಸರಿಬಾತ್ ಮಾಡಾಕೆ ಬರುತ್ತಾ?’
‘ಬರುತ್ತೆ, ಆದ್ರೆ ಮಾಡಲ್ಲ... ಅದು ಕಮಲ ಪಕ್ಷದ್ದು. ನಮ್ಮದೇನಿದ್ರೂ ‘ಕೈ’ಸರಿ ಬಾತ್! ನಾವೇಳಿದ್ದೇ ಸರಿ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.