ADVERTISEMENT

ಚುರುಮುರಿ: ಮದುವೆ ಜರ್ನಿ

ಮಣ್ಣೆ ರಾಜು
Published 9 ಆಗಸ್ಟ್ 2022, 22:00 IST
Last Updated 9 ಆಗಸ್ಟ್ 2022, 22:00 IST
   

ಜಡಿಮಳೆಯಲ್ಲಿ ಶಂಕ್ರಿ, ಸುಮಿ ಸ್ಕೂಟರ್‌ ಏರಿ ಮದುವೆಗೆ ಹೊರಟಿದ್ದರು.‌

‘ಕಲ್ಯಾಣಮಂಟಪ ತುಂಬಾ ಹತ್ತಿರ, ಎರಡು ರೋಡ್ ಕ್ರಾಸ್ ಮಾಡಿದ್ರೆ ಸಿಗುತ್ತೆ, ಬೇಗ ಹೋಗಿಬಿಡೋಣ...’ ಎಂದು ಶಂಕ್ರಿ ಹೆಂಡತಿಗೆ ಹೇಳಿದ್ದ. ಸ್ವಲ್ಪ ದೂರ ಹೋಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಕೈ ಅಡ್ಡ ಹಾಕಿದರು.

‘ಹೆಲ್ಮೆಟ್ ಹಾಕಿದ್ದೀವಿ, ಡಿಎಲ್, ಡಾಕ್ಯುಮೆಂಟ್ಸ್ ಕರೆಕ್ಟಾಗಿದೆ’ ಅಂದ ಶಂಕ್ರಿ.

ADVERTISEMENT

‘ನೀವು ಕರೆಕ್ಟಾಗಿದ್ದೀರಿ, ಪರಿಸ್ಥಿತಿ ಕರೆಕ್ಟಾಗಿಲ್ಲ, ಬೆಲೆ ಏರಿಕೆ ಖಂಡಿಸಿ ಹೋರಾಟಗಾರರು ಈ ರೋಡಲ್ಲಿ ಮೆರವಣಿಗೆ ಬರ್ತಿದ್ದಾರೆ, ಮುಂದೆ ಹೋಗಲಾಗದು, ಪಕ್ಕದ ರೋಡಲ್ಲಿ ಹೋಗಿ’ ಅಂದ್ರು ಪೊಲೀಸರು. ಶಂಕ್ರಿ ಪಕ್ಕದ ರಸ್ತೆಗೆ ಸ್ಕೂಟರ್‌ ತಿರುಗಿಸಿದ.

ಅಲ್ಲೂ ಪೊಲೀಸರ ಅಡ್ಡಗೈ. ‘ಮಳೆ ಬಂದು ರಸ್ತೆ ಕುಸಿದಿದೆ, ಸಂಚಾರ ಬಂದ್ ಮಾಡಿದ್ದೀವಿ, ಟೇಕ್ ಡೈವರ್ಷನ್’ ಅಂದರು. ಶಂಕ್ರಿ ಡೈವರ್ಷನ್ ತಗೊಂಡ.

ಮುಂದೆ ಹೋದಾಗ ಮತ್ತೆ ಪೊಲಿಸರು ತಡೆದರು. ‘ವಿವಿಐಪಿ ಪಾಸ್ ಆಗ್ತಿದ್ದಾರೆ. ಅವರು ಹೋಗೋವರೆಗೂ ವೆಯ್ಟ್ ಮಾಡಿ ಇಲ್ಲವೇ ಇನ್ನೊಂದು ರಸ್ತೆಯಲ್ಲಿ ಹೋಗಿ’ ಎಂದರು. ಶಂಕ್ರಿ ರಸ್ತೆ ಬದಲಿಸಿದ.

ಅಲ್ಲಿ ಪೊಲೀಸರು ವಿಶಲ್ ಊದಿ ತಡೆದರು, ‘ಇದು ಒನ್ ವೇ ಕಣ್ರೀ, ಗೊತ್ತಾಗಲ್ವಾ?’ ಅಂತ ರೇಗಿದರು. ಶಂಕ್ರಿ ಸ್ಕೂಟರ್‌ ತಿರುಗಿಸಿದ.

‘ಸಾರ್, ಮುಂದೆ ಹೋಗ್ಬೇಡಿ, ಅಲ್ಲಿ ಆ್ಯಕ್ಸಿಡೆಂಟ್ ಆಗಿ ಟ್ರಾಫಿಕ್ ಜಾಮ್ ಆಗಿದೆ, ವೆಹಿಕಲ್ಸ್ ಬಿಡ್ತಿಲ್ಲ’ ಅಂದ ಒಬ್ಬ. ಇನ್ನೊಂದು ರಸ್ತೆಗೆ ಶಂಕ್ರಿ ಸ್ಕೂಟರ್‌ ನುಗ್ಗಿಸಿದ.

ಕಡೆಗೂ ಕಲ್ಯಾಣಮಂಟಪ ಸೇರಿದರು. ಸುಮಿಯ ರೇಷ್ಮೆ ಸೀರೆ ಒದ್ದೆಯಾಗಿ ನೀರು ಸುರಿಯುತ್ತಿತ್ತು. ಮುಖದ ಮೇಕಪ್ ಮಳೆಯಲ್ಲಿ ಕರಗಿ ಕಾಣೆಯಾಗಿತ್ತು.

‘ಯಾಕೆ ಲೇಟು?...’ ಎಂದು ಮದುವೆ ಮನೆಯವರು ಕೇಳಿ, ಪನ್ನೀರು ಚಿಮುಕಿಸಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.