ADVERTISEMENT

ಚುರುಮುರಿ: ಗುಟ್ಕಾಗೆ ಹೋದ ಆರೋಗ್ಯ

ಸುಮಂಗಲಾ
Published 27 ಏಪ್ರಿಲ್ 2025, 23:15 IST
Last Updated 27 ಏಪ್ರಿಲ್ 2025, 23:15 IST
   

‘ಮಂದಿ ಬಸ್ಸು, ರೈಲೊಳಗೆ ಗುಟ್ಕಾ ತಿಂದು ಉಗುಳೂದಲ್ಲದೆ ಈಗ ಮೆಟ್ರೊದೊಳಗೂ ಗುಟ್ಕಾ ಅಗಿಲಾಕೆ ಶುರು ಮಾಡ್ಯಾರೆ’ ಎಂದು ಬೆಕ್ಕಣ್ಣ ಸುದ್ದಿ ಓದುತ್ತ ಬೈಯುತ್ತಿತ್ತು.

‘ಅಂವಾ ಎಷ್ಟರೆ ಬುದ್ಧಿಗೇಡಿ! ನಮ್ಮ ಮೆಟ್ರೊವಳಗೆ ಅಷ್ಟ್‌ ಫಳಫಳ ಹೊಳೆಯೂ ಹಂಗ ಒರೆಸಿ, ಕ್ಲೀನಾಗಿಟ್ಟಿರತಾರೆ, ಅಂತಲ್ಲಿ ಗುಟ್ಕಾ ತಿಂದು, ಮೂಲೆಮೂಲೆವಳಗೆ ಉಗುಳಿ, ಕೆಂಪು ಮೆಟ್ರೊ ಮಾಡಾಕೆ ಹೊಂಟಾನೆ’ ಎಂದು ನಾನೂ ಬೈಯ್ದೆ.

‘ಅಂವಾ ಪಾಕೀಟು ಬಿಚ್ಚಿ ಬಾಯಿಗೆ ಹಾಕಿಕೊಳ್ಳದು ನೋಡಿ, ಪಕ್ಕದಲ್ಲಿದ್ದಂವ ಒಬ್ಬ ಬೈದ್ರೆ, ಮೆಟ್ರೊ ನಿಂದಷ್ಟೇ ಅಲ್ಲ, ನಮ್ಮದೂ ಐತಿ ಅಂತಾನ, ಎಷ್ಟರೆ ಸೊಕ್ಕು’ ಎನ್ನುತ್ತ ವಿಡಿಯೊ ತೋರಿಸಿತು.

ADVERTISEMENT

‘ಅಂವಾ ಒಬ್ಬಾಂವ ಬೈಯೂ ಮುಂದ ಉಳಿದ ಪ್ರಯಾಣಿಕರು ಸುಮ್ಮನೇ ನೋಡಿಕೋತ ಕುಂತಾರೆ. ಗುಟ್ಕಾ ಹಾಕಬ್ಯಾಡಲೇ ಅಂತ ಅಕ್ಕಪಕ್ಕದಲ್ಲಿದ್ದವರೂ ಬೈಯಬೇಕಿತ್ತು’.

‘ಅಯ್ಯೋ ನಮಗ್ಯಾಕೆ ಬಿಡು ಅಂತ, ತಮ್ಮ ಮೊಬೈಲು ನೋಡಿಕೊತ ಸುಮ್ಮನೆ ಕುಂದರತಾರ. ಮೆಟ್ರೊದಾಗೆ ಗುಟ್ಕಾ ಸ್ಕ್ಯಾನರ್‌ ಅಳವಡಿಸಬೇಕು. ಮೊದಲು ಗುಟ್ಕಾ ಬ್ಯಾನ್‌ ಮಾಡಬಕು’ ಬೆಕ್ಕಣ್ಣ ಹುರುಪಿನಿಂದ ವಾದಿಸಿತು.

‘ನಿನ್ನ ಫೇವರಿಟ್‌ ಹೀರೊಗಳು ಶಾರುಕ್‌ ಖಾನ್‌, ಅಜಯ್‌ ದೇವಗನ್‌ ಇಂಥೋರೆಲ್ಲ ಗುಟ್ಕಾ ಜಾಹೀರಾತು ಕೊಡ್ತಾರಲ್ಲ, ಅವ್ರಿಗೆ ನಾಚಿಕೆಯಾಗಬಕು. ರೊಕ್ಕ ಬರತೈತೆ ಅಂದ್ರ ಎಂಥಾ ಜಾಹೀರಾತಿಗಾದರೂ ನಿಂತು ಪೋಸ್‌ ಕೊಡತಾರೆ’.

‘ನಾವು ಯಾಲಕ್ಕಿ, ಅಡಿಕೆ ಜಾಹೀರಾತು ಕೊಡಾಕೆ ಹತ್ತೀವಿ, ಹೊಗೆಸೊಪ್ಪಿಗೆ ಅಲ್ಲ ಅಂತಾರೆ ಅವ್ರು’ ಎಂದು ಬೆಕ್ಕಣ್ಣ ಸಮರ್ಥಿಸಿಕೊಂಡಿತು.

‘ಗುಟ್ಕಾ ಜಾಹೀರಾತು ಕೊಡೋ ಅವ್ರೆಲ್ಲ ಬಾಲಿವುಡ್ಡಿನ ಗುಟ್ಕಾ ಗ್ಯಾಂಗ್‌ ಅಂತಲೇ ಕುಪ್ರಸಿದ್ಧರು ಕಣಲೇ! ನಮ್ಮ ಮಲೆನಾಡಿನವರು ಬೆಳೆಯೋ ಅಡಿಕೆ ಕ್ಯಾನ್ಸರ್‌ಕಾರಕ ಅಂತ ಸುಳ್ಳೇ ವಾದಿಸ್ತಾರೆ. ಅಡಿಕೆವಳಗೆ ಹೊಗೆಸೊಪ್ಪು ಇರತದೇನು?’

‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅಂತಾರಲ್ಲ ಹಂಗೆ ಗುಟ್ಕಾಗೆ ಹೋದ ಆರೋಗ್ಯ ಏನು ಕೊಟ್ಟರೂ ಬಾರದು’ ಎಂದು ಬೆಕ್ಕಣ್ಣ ಹೊಸ ಗಾದೆ ಹೊಸೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.