ADVERTISEMENT

ಒಲಿಂಪಿಕ್ಸ್‌ ಚಿನ್ನದ ಕನಸು ಬಿತ್ತಿದ ಸಿಂಧು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:30 IST
Last Updated 26 ಆಗಸ್ಟ್ 2019, 20:30 IST
   

‘ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಚಿನ್ನದ ಪದಕ ಜಯಿಸುವುದು ಖಚಿತ’– ಭಾನುವಾರ ಇಂತಹದೊಂದು ನಿರೀಕ್ಷೆಯನ್ನು ಹೈದರಾಬಾದ್ ಹುಡುಗಿ ಸಿಂಧು, ಕೋಟಿ ಕೋಟಿ ಭಾರತೀಯರ ಮನದಲ್ಲಿ ಬಿತ್ತಿದರು.

ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅವರ ಸಾಧನೆಯಿಂದಾಗಿ ಹೊಸ ಆಸೆ ಚಿಗುರೊಡೆದಿದೆ. ಫೈನಲ್‌ನಲ್ಲಿ ಜಪಾನಿನ ನೊಜೊಮಿ ಒಕುಹಾರಾ ಅವರನ್ನು ಅಧಿಕಾರಯುತವಾಗಿ ಸೋಲಿಸಿದ ಸಿಂಧು ಅಗ್ರಪಟ್ಟ ಅಲಂಕರಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಅವರು.

ಐದನೇ ಶ್ರೇಯಾಂಕದ ಸಿಂಧುಗೆ ಫೈನಲ್ ಹಾದಿ ಸುಲಭವಾಗಿರಲಿಲ್ಲ. ಎಂಟರ ಘಟ್ಟದಲ್ಲಿ ತೈವಾನ್‌ನ ತೈ ಜು ಯೀಂಗ್ ಮತ್ತು ನಾಲ್ಕರ ಹಂತದಲ್ಲಿ ಆಲ್‌ ಇಂಗ್ಲೆಂಡ್ ಚಾಂಪಿಯನ್ ಯು ಫೆ ವಿರುದ್ಧ ಜಯಿಸಿದ್ದರು. ಫೈನಲ್‌ನಲ್ಲಿ ಕೇವಲ 38 ನಿಮಿಷಗಳಲ್ಲಿ ಬಲಿಷ್ಠ ಎದುರಾಳಿಯನ್ನು ಸಿಂಧು ಮಣಿಸಿದರು. ನಾಲ್ಕು ದಶಕಗಳಿಂದ ಭಾರತದ ಕ್ರೀಡಾಪ್ರೇಮಿಗಳು ಕಂಡಿದ್ದ ಕನಸನ್ನು ನನಸುಗೊಳಿಸಿದರು.

ADVERTISEMENT

1983ರಲ್ಲಿ ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ಇನ್ನೂ ಅಷ್ಟೊಂದು ಬೆಳವಣಿಗೆ ಕಾಣದ ಸಮಯ. ಆಗಲೇ ಕನ್ನಡಿಗ ಪ್ರಕಾಶ್ ಪಡುಕೋಣೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅದರೊಂದಿಗೆ ಚೀನಾ, ಜಪಾನ್, ಮಲೇಷ್ಯಾ, ಇಂಗ್ಲೆಂಡ್ ಪ್ರಾಬಲ್ಯವಿರುವ ಈ ಕ್ರೀಡೆಯಲ್ಲಿ ನಾವೂ ಪದಕ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದರು. ಇದೀಗ ಚಿನ್ನವೂ ನಮ್ಮದಾಗಬಹುದು ಎಂದು ಸಿಂಧು ನಿರೂಪಿಸಿದ್ದಾರೆ. ಅಷ್ಟೇ ಅಲ್ಲ, ಈ ಟೂರ್ನಿಯಲ್ಲಿ ನಮಗೆ ಕಂಡಿದ್ದು ವಿಭಿನ್ನವಾದ ಸಿಂಧು. 2016ರಲ್ಲಿ ರಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ಜಯಿಸಿದ್ದ ಅವರು, ಇಲ್ಲಿಯವರೆಗೆ ಹಲವು ಮಹತ್ವದ ಟೂರ್ನಿಗಳಲ್ಲಿ ಸೆಮಿಫೈನಲ್ ಮತ್ತು ಫೈನಲ್ ಹಂತಗಳಲ್ಲಿ ಎಡವಿದ್ದರು. 2017 ಮತ್ತು 2018ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಆದರೆ ಈ ಸಲ ಅವರ ಶೈಲಿ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಅದರ ಹಿಂದಿನ ಗುಟ್ಟು ಕೊರಿಯಾದ ಕಿಮ್ ಜಿ ಯೂನ್ ಅವರ ತರಬೇತಿ ಮತ್ತು ಸಿಂಧು ಅವರ ಮನೋದಾರ್ಢ್ಯ. ಸೋಲು ಮತ್ತು ಟೀಕೆಗಳಿಗೆ ಕುಗ್ಗದೇ ಪುಟಿದು ನಿಂತಿದ್ದಾರೆ. ‘ಟೀಕಾಕಾರರಿಗೆ ಈ ಗೆಲುವೇ ಉತ್ತರ’ ಎಂದು ತಿರುಗೇಟು ನೀಡಿದ್ದಾರೆ.

ಇಲ್ಲಿ ಪುಲ್ಲೇಲ ಗೋಪಿಚಂದ್ ಅವರ ಶ್ರಮವೂ ಶ್ಲಾಘನಾರ್ಹ. ಹದಿನೆಂಟು ವರ್ಷಗಳ ಹಿಂದೆ ಆಲ್‌ ಇಂಗ್ಲೆಂಡ್ ಚಾಂಪಿಯನ್ ಆದ ನಂತರ ಗಮನ ಸೆಳೆದ ಅವರು ನಂತರ ತಮ್ಮದೇ ಅಕಾಡೆಮಿಯನ್ನು ಆರಂಭಿಸಿ ಹೈದರಾಬಾದ್ ನಗರವನ್ನು ‘ಬ್ಯಾಡ್ಮಿಂಟನ್ ತಾರೆಯರ ಕಣಜ’ವನ್ನಾಗಿ ಮಾಡಿದರು. ಸೈನಾ ನೆಹ್ವಾಲ್, ಸಿಂಧು ಅವರಂತಹ ಒಲಿಂಪಿಕ್ಸ್‌ ಪದಕವಿಜೇತರು ಅವರ ನೆರಳಲ್ಲಿ ಬೆಳೆದರು. ಕಿದಂಬಿ ಶ್ರೀಕಾಂತ್, ಸಾಯಿಪ್ರಣೀತ್, ಎಚ್‌.ಎಸ್‌.ಪ್ರಣಯ್‌, ಪರುಪಳ್ಳಿ ಕಶ್ಯಪ್, ಸಿಕ್ಕಿ ರೆಡ್ಡಿ ಸೇರಿದಂತೆ ಹಲವು ಪ್ರತಿಭಾವಂತರ ಶಿಷ್ಯಬಳಗ ಅವರದ್ದು. ಈ ಬಾರಿ ಪುರುಷರ ವಿಭಾಗದಲ್ಲಿ ಸಾಯಿಪ್ರಣೀತ್ ಕಂಚಿನ ಪದಕ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರನಾಗಿದ್ದಾರೆ.

ಇವತ್ತು ಭಾರತವು ಏಷ್ಯಾದ ಬ್ಯಾಡ್ಮಿಂಟನ್ ‘ಶಕ್ತಿ ಕೇಂದ್ರ’ವಾಗಲು ಗೋಪಿಚಂದ್‌ ಕಾಣಿಕೆ ದೊಡ್ಡದು. ಆದರೆ ಈ ವಿಷಯದಲ್ಲಿ ಕರ್ನಾಟಕ ಇಂದಿಗೂ ಹಿಂದುಳಿದಿದೆ. 1980ರಲ್ಲಿ ಪ್ರಕಾಶ್ ಪಡುಕೋಣೆ ಆಲ್‌ ಇಂಗ್ಲೆಂಡ್ ಚಾಂಪಿಯನ್ ಆಗಿದ್ದರು. ಅವರ ಪ್ರೇರಣೆಯಿಂದಲೇ ಗೋಪಿ ಮತ್ತು ಶಿಷ್ಯಬಳಗ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ಈಚೆಗೆ ರಾಷ್ಟ್ರಮಟ್ಟದ ಟೂರ್ನಿಯೊಂದರ ಆಯೋಜನೆಗಾಗಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯು ಪ್ರಾಯೋಜಕರ ಕೊರತೆ ಅನುಭವಿಸಿದ್ದು ವರದಿಯಾಗಿತ್ತು. ‌ನಮ್ಮ ರಾಜ್ಯದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರ ಬೆಳವಣಿಗೆಯತ್ತ ಚಿತ್ತ ಹರಿಸಲು ಇದು ಸಕಾಲ. ಆಂಧ್ರ ಮಾದರಿಯಲ್ಲಿ ಉತ್ತಮ ಸೌಲಭ್ಯಗಳ ಅಭಿವೃದ್ಧಿ ಮಾಡುವತ್ತ ಸರ್ಕಾರ ಹೆಜ್ಜೆ ಇಡಬೇಕು. ಸಿಂಧು, ಸೈನಾ ಮತ್ತು ಶ್ರೀಕಾಂತ್ ಅವರ ನಂತರ ಆ ಸ್ಥಾನಗಳನ್ನು ತುಂಬುವ ತಾರೆಗಳು ಕನ್ನಡನಾಡಿನಿಂದ ಬರುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.