ADVERTISEMENT

‘ಬಾಲಿವುಡ್‌ ತಾರೆಯರ ಕರೆಸಲ್ಲ’

ನಾಗತಿಹಳ್ಳಿ ಚಂದ್ರಶೇಖರ
Published 8 ಫೆಬ್ರುವರಿ 2019, 19:45 IST
Last Updated 8 ಫೆಬ್ರುವರಿ 2019, 19:45 IST
   

ಸಂದರ್ಶನ:ಪದ್ಮನಾಭ ಭಟ್‌

* ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಬಿಐಎಫ್‌ಎಫ್‌) ಈ ಸಲದ ಥೀಮ್‌ ಏನು?

‘ನೈಸರ್ಗಿಕ ವಿಕೋಪಗಳು’ ಎಂಬುದು ಥೀಮ್‌.60 ದೇಶಗಳ 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಾಣಲಿವೆ.15 ವಿಭಾಗಗಳಿವೆ. ಅವುಗಳಲ್ಲಿ ಒಂದು ವಿಭಾಗದಲ್ಲಿ ಗಾಂಧೀಜಿ ಕುರಿತು ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದ ಸಿನಿಮಾಗಳು ಪ್ರದರ್ಶನ ಕಾಣುತ್ತವೆ.

ADVERTISEMENT

* ಪ್ರತಿವರ್ಷ ನಿರ್ದಿಷ್ಟ ದಿನಾಂಕದಂದು ಸಿನಿಮೋತ್ಸವ ನಡೆಸುವ ಯೋಚನೆ ಕೈಗೂಡುತ್ತಲೇ ಇಲ್ಲವಲ್ಲ?

ವಿಶ್ವಮಾನ್ಯತೆ ಸಿಗುವಂತಾಗಬೇಕು ಎಂದರೆ ಪ್ರತಿವರ್ಷ ನಿರ್ದಿಷ್ಟ ದಿನಾಂಕದಂದು ಚಿತ್ರೋತ್ಸವ ನಡೆಯಬೇಕು. ಈ ಸಲ ಫೆ. 21ರಿಂದ 28ರವರೆಗೆ ನಡೆಯಲಿದೆ. ಬಹುಶಃಮುಂದಿನ ವರ್ಷದಿಂದ ಇದೇ ಅವಧಿಯಲ್ಲಿ ನಡೆಯುತ್ತದೆ. ಈ ಚಿತ್ರೋತ್ಸವ ಮುಗಿದ ತಕ್ಷಣ ವಿಶ್ವಮಾನ್ಯತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ.

* ಪ್ರತಿವರ್ಷ ಚಿತ್ರೋತ್ಸವದ ವ್ಯವಸ್ಥೆಯ ಬಗ್ಗೆ ಒಂದಿಷ್ಟು ತಕರಾರುಗಳು ಇರುತ್ತವಲ್ಲ?

ಈ ಸಲ ವಿಶೇಷ ಎಚ್ಚರಿಕೆ ತೆಗೆದುಕೊಂಡಿದ್ದೇವೆ. ಚಿತ್ರೋತ್ಸವ ಎರಡು ವಾರ ಮುಂದಕ್ಕೆ ಹೋಗಿದ್ದರಿಂದ ಅನೇಕ ಲಾಭ ಆಯಿತು. ಎಲ್ಲ ಗುರುತಿನ ಚೀಟಿಗಳನ್ನು ಲ್ಯಾಮಿನೇಶನ್ ಮಾಡಿಸುತ್ತಿದ್ದೇವೆ. ಇದರಿಂದ ಐಡಿ ಕಾರ್ಡ್‌ಗಳ ದುರುಪಯೋಗ ತಪ್ಪುತ್ತದೆ. ಚಿತ್ರೋತ್ಸವದಲ್ಲಿ ಪ್ರದರ್ಶಿತ ಆಗಲಿರುವ ಶೇ 95ರಷ್ಟು ಚಿತ್ರಗಳು ಈಗಾಗಲೇ ನಮಗೆ ತಲುಪಿವೆ. ಚಿತ್ರೋತ್ಸವ ನಡೆಯಲಿರುವ ಒರಾಯನ್‌ ಮಾಲ್‌ ಚಿತ್ರಮಂದಿರಗಳ ಧ್ವನಿವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ್ದೇವೆ. ಅತಿಥಿಗಳನ್ನು 5 ಸ್ಟಾರ್‌ ಹೋಟೆಲ್‌ನಲ್ಲಿ ಇರಿಸುವ ಅದ್ಧೂರಿ ಕೈಬಿಟ್ಟು,
3 ಸ್ಟಾರ್ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಿಸಿದ್ದೇವೆ. ಕೋಟ್ಯಂತರ ಹಣ ಕೊಟ್ಟು ಬಾಲಿವುಡ್‌ನಿಂದ ತಾರೆಯರನ್ನು ಕರೆತರುವ ಪರಿಪಾಟ ಕೈಬಿಟ್ಟಿದ್ದೇವೆ. ಒಟ್ಟಾರೆ ಹಿಂದಿನ ವರ್ಷಕ್ಕಿಂತ ಶೇ 30ರಿಂದ 40ರಷ್ಟು ಕಡಿಮೆ ಹಣ ಖರ್ಚಾಗಲಿದೆ.

* ಚಿತ್ರೋತ್ಸವಕ್ಕೊಂದು ಕಾಯಂ ನಿರ್ದೇಶನಾಲಯ ರೂಪಿಸಬೇಕು ಎಂಬ ಕನಸು ನನಸಾಗುವುದೆಂದು?

ಈ ಸಲವೂ ಆ ಕುರಿತು ಬೇಡಿಕೆ ಸಲ್ಲಿಸಿದ್ದೇವೆ. ರಾಜಕೀಯ ಪಲ್ಲಟಗಳಿಗೆ ತಕ್ಕ ಹಾಗೆ ಅದೂ ಬದಲಾಗುತ್ತಿರುವುದು ವಿಪರ್ಯಾಸ. ಸ್ವತಂತ್ರ ನಿರ್ದೇಶನಾಲಯ ಇದ್ದರೆ, ಅನುಭವಿಗಳ ತಂಡ ವರ್ಷಪೂರ್ತಿ ಕೆಲಸ ಮಾಡಬಹುದು. ಕೊನೇ ಗಳಿಗೆ ಅವಸರ ತಪ್ಪುತ್ತದೆ. ಆದರೆ ಸದ್ಯ ಅದು ಸಾಧ್ಯವಾಗುವ ಲಕ್ಷಣಗಳು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.