ADVERTISEMENT

ನುಡಿ ಬೆಳಗು: ಪ್ರಚೋದನೆಗೆ ಪ್ರತಿಕ್ರಿಯಿಸಬೇಕಿಲ್ಲ

ರೇಣುಕಾ ನಿಡಗುಂದಿ
Published 11 ಸೆಪ್ಟೆಂಬರ್ 2025, 23:23 IST
Last Updated 11 ಸೆಪ್ಟೆಂಬರ್ 2025, 23:23 IST
   

ಒಂದು ಆನೆ ನದಿಯಲ್ಲಿ ಸ್ನಾನ ಮಾಡಿ ತನ್ನ ದಾರಿಯಲ್ಲಿ ಸಾಗುತ್ತಿತ್ತು. ಅದು ಒಂದು ಸೇತುವೆಯನ್ನು ಸಮೀಪಿಸುತ್ತಿದ್ದಂತೆ, ವಿರುದ್ಧ ದಿಕ್ಕಿನಿಂದ ಬಂದ ಹಂದಿಯೊಂದು ಕೊಳಕು ಕೆಸರಿನಲ್ಲಿ ಪೂರ್ತಿ ತೊಯ್ದಿರುವುದನ್ನು ಗಮನಿಸಿತು. ಆನೆ ಶಾಂತವಾಗಿ ಒಂದು ಬದಿಗೆ ಸರಿದು, ಕೊಳಕು ಹಂದಿಯನ್ನು ಹಾದುಹೋಗಲು ಅವಕಾಶ ಮಾಡಿಕೊಟ್ಟು, ನಂತರ ತನ್ನ ದಾರಿಯಲ್ಲಿ ಸಾಗಿತು.

‘ನಾನು ಎಷ್ಟು ದೊಡ್ಡವನಾಗಿದ್ದೇನೆ ನೋಡಿ; ಆನೆ ಕೂಡ ನನ್ನನ್ನು ನೋಡಿ ಭಯಭೀತಗೊಂಡು ಒಂದು ಬದಿಗೆ ಸರಿದು ನಾನು ಹಾದುಹೋಗಲು ಅವಕಾಶ ಮಾಡಿಕೊಟ್ಟಿತು’ ಎಂದು ಹಂದಿ ನಂತರ ತನ್ನ ಗೆಳೆಯರಿಗೆ ಹೆಮ್ಮೆಯಿಂದ ಹೇಳಿಕೊಂಡಿತು.

ಇದನ್ನು ಕೇಳಿದ ಹಲವಾರು ಆನೆಗಳು ತಮ್ಮ ಸ್ನೇಹಿತನ ಕ್ರಿಯೆಗಳನ್ನು ಪ್ರಶ್ನಿಸಿದವು. ‘ನೀನು ಪಕ್ಕಕ್ಕೆ ಸರಿದಿದ್ದು ಭಯದಿಂದಲೇನಾ?’

ADVERTISEMENT

‘ನಾನು ಹಂದಿಯನ್ನು ನನ್ನ ಕಾಲಿನ ಕೆಳಗೆ ಸುಲಭವಾಗಿ ತುಳಿಯಬಹುದಿತ್ತು’ ಎಂದು ಹೇಳಿದ ಆನೆ ಮುಂದುವರಿದು, ‘ಆದರೆ ನಾನು ಸ್ವಚ್ಛವಾಗಿದ್ದೆ. ಹಂದಿ ತುಂಬಾ ಕೊಳಕಾಗಿತ್ತು.ಇದಲ್ಲದೆ, ಅದನ್ನು ತುಳಿಯುವುದರಿಂದ ನನ್ನ ಕಾಲು ಹೊಲಸು ಕೆಸರುಮಯವಾಗುತ್ತಿತ್ತು. ಅದನ್ನು ತಪ್ಪಿಸಲೆಂದೇ ನಾನು ನಾನು ದೂರ ಸರಿದೆ’ ಎಂದು ಹೇಳಿತು.

ನಾವು ಕೆಲಸ ಮಾಡುವ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಅಥವಾ ನಮ್ಮ ನಮ್ಮ ಸಮಾಜ ಮತ್ತು ಕುಟುಂಬಗಳಲ್ಲಿಯೇ ನಮ್ಮ ದೃಷ್ಟಿಕೋನಗಳನ್ನು, ನಮ್ಮ ವಿಚಾರಗಳನ್ನು ಒಪ್ಪದ, ವಿತಂಡವಾದ ಮಾಡುವ, ಮೈ ಮನಸ್ಸುಗಳಲ್ಲಿಯೇ ದ್ವೇಷ ನಂಜನ್ನೇ ತುಂಬಿಕೊಂಡ ವ್ಯಕ್ತಿಗಳು ಇರುತ್ತಾರೆ. ಅವರ ಕೆಲಸ ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಮೂಗು ತೂರಿಸಿ ನಿಮ್ಮನ್ನು ಅವಮಾನಿಸಿವುದೋ ಇಲ್ಲ ನೀವು ಮಾಡಿದ ಕೆಲಸ ಸರಿಯಿಲ್ಲ ಎಂದು ಸಾಬೀತುಮಾಡುವುದಷ್ಟೇ ಆಗಿರುತ್ತದೆ. ಅದಕ್ಕಾಗಿ ಯಾವ ಮಾರ್ಗವನ್ನು ಅನುಸರಿಸಲೂ ಹಿಂಜರಿಯುವುದಿಲ್ಲ.

ಒಮ್ಮೆ ಒಬ್ಬ ಮ್ಯಾನೇಜರ್ ತನ್ನ ಮಹಿಳಾ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಆಕೆ ಅವನ ಮಾತಿಗೆ ಬೆದರಿಕೆಗೆ ಸೊಪ್ಪು ಹಾಕದೇ ತನ್ನ ಕೆಲಸ ಮಾಡಿಕೊಂಡಿದ್ದಳು. ಯಾವಾಗ ಆ ಮ್ಯಾನೇಜರ್ ಅವಳನ್ನು ಕೆಲಸದಿಂದ ಕಿತ್ತುಹಾಕಲು ಪ್ರಯತ್ನಿಸಿದನೋ ಆಗ ಆಕೆ ನೇರ ಚೇರ್ಮನ್ ಅವರಿಗೇ ಹೋಗಿ ಸಮಸ್ಯೆ ಹೇಳಿಕೊಂಡು ಅಲ್ಲಿಂದ ಬೇರೆ ಕಡೆ ವರ್ಗ ಮಾಡಿಸಿಕೊಂಡು ಹೋದಳು. ಹಂದಿಯಂತೆ ಮನಸ್ಸಿಗೆ ಕೆಸರನ್ನೇ ಮೆತ್ತಿಕೊಂಡಿದ್ದ ಜಾಗದಲ್ಲಿ ಇರುವ ಬದಲು ಅಲ್ಲಿಂದ ಕಾಲ್ತೆಗೆಯುವುದೇ ಕ್ಷೇಮವಾಗಿತ್ತು.

ಒಬ್ಬ ಬುದ್ಧಿವಂತ ವ್ಯಕ್ತಿಯು ನಕಾರಾತ್ಮಕ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು, ಅವರ ಸಂಪರ್ಕವನ್ನು ತಪ್ಪಿಸುವುದು ಭಯದಿಂದಲ್ಲ, ಬದಲಾಗಿ ತಾವೆಷ್ಟೇ ಶಕ್ತಿಶಾಲಿಯಾಗಿದ್ದರೂ ವಿಚಾರ ಆಲೋಚನೆಗಳು ಎಷ್ಟೇ ಶುದ್ಧವಾಗಿದ್ದರೂ ಕೆಲವೊಮ್ಮೆ ಕೆಲವರ ನಕಾರಾತ್ಮಕತೆ, ದೋಷಯುಕ್ತ ಆಲೋಚನೆಗಳು, ನಮ್ಮನ್ನು ತೀವ್ರವಾಗಿ ಪ್ರಭಾವಿಸಲು ಪ್ರಚೋದಿಸುವಂತಿರುತ್ತವೆ. ನಾವು ಪ್ರತಿಯೊಂದು ವಿರುದ್ಧ ದೃಷ್ಟಿಕೋನ, ಪ್ರತಿಯೊಂದು ಮಾತು ಅಥವಾ ಪ್ರತಿಯೊಂದು ಸನ್ನಿವೇಶಕ್ಕೂ ಪ್ರತಿಕ್ರಿಯಿಸುವ ಅಗತ್ಯವಿರುವುದಿಲ್ಲ. ಸಂಯಮದಿಂದ ವಿವೇಚನೆಯಿಂದ ನಮ್ಮ ದಾರಿಯನ್ನು ಬದಲಿಸಿಕೊಂಡರೆ ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.