ADVERTISEMENT

ನುಡಿ ಬೆಳಗು: ಭೂಲೋಕದ ಅಮೃತ

ರೇಣುಕಾ ನಿಡಗುಂದಿ
Published 12 ಫೆಬ್ರುವರಿ 2026, 23:30 IST
Last Updated 12 ಫೆಬ್ರುವರಿ 2026, 23:30 IST
   

ಅದೊಂದು ದಿನ ಒಬ್ಬ ಕುರುಡ ತನ್ನ ಗೆಳೆಯನ ಮನೆಗೆ ಬಂದಿದ್ದ. ಕೆಲಕಾಲ ಗೆಳೆಯನೊಂದಿಗೆ ಮಾತುಕತೆಯಾಡಿ ತನ್ನ ಮನೆಗೆ ಹೋಗಲು ಸಿದ್ಧನಾದ. ಆಗಲೇ ಕತ್ತಲಾಗಿತ್ತು. ಹೊರಗೆ ಬೀದಿಯಲ್ಲಿ ದೀಪಗಳಿರಲಿಲ್ಲ. ಬೆಳದಿಂಗಳೂ ಇರಲಿಲ್ಲ. ರಸ್ತೆಯಲ್ಲಿ ಓಡಾಡುವವರಿಗೆ ಬಹಳ ಕಷ್ಟವಾಗುತ್ತಿತ್ತು. ಗೆಳೆಯ, ಹೊರಗಡೆ ಬಹಳ ಕತ್ತಲಿದೆ, ಹೇಗೆ ಹೋಗುತ್ತಿ ಎಂದು ಕೇಳಲಿಲ್ಲ. ಇಲ್ಲಿಯೇ ಉಳಿದುಕೊಂಡು ನಾಳೆ ಬೆಳಕಿನಲ್ಲಿ ಹೊರಡು ಎನ್ನಲಿಲ್ಲ. ಕುರುಡನೇ ತನ್ನ ಗೆಳಯನಿಗೆ ‘ಗೆಳೆಯಾ, ಹೊರಗೆ ರಸ್ತೆಯಲ್ಲಿ ಹೋಗಲು ಅನುಕೂಲವಾಗುವಂತೆ ಒಂದು ದೀಪವನ್ನು ಕೊಡು’ ಎಂದು ಕೇಳುತ್ತಾನೆ. ಗೆಳೆಯ, ‘ಅಯ್ಯಾ, ನಿನಗೇಕೆ ದೀಪ, ಅದು ನಿನ್ನಲ್ಲಿ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ. ನಿನಗಂತೂ ಅದರ ಬೆಳಕಿನಿಂದ ಬೀದಿ ಕಾಣಿಸುವುದಿಲ್ಲವಲ್ಲ. ಹೀಗಿರುವಾಗ ದೀಪ ಏಕೆ ಬೇಕು’ ಎಂಬ ಉಡಾಫೆಯ ಮಾತುಗಳನ್ನು ಆಡುತ್ತಾನೆ. ಆಗ ಕುರುಡ ಹೇಳುತ್ತಾನೆ: ‘ಮಿತ್ರಾ, ದೀಪದಿಂದ ನನಗೇನೂ ಉಪಯೋಗವಾಗುವುದಿಲ್ಲ ನಿಜ. ಆದರೆ ನಾನು ದೀಪ ತೆಗೆದುಕೊಂಡು ಹೋಗುವುದು ನನಗಲ್ಲ. ನಾನು ಹಾದಿಯಲ್ಲಿ ಹೋಗುವಾಗ ನನ್ನ ಎದುರಿನಿಂದ ಬರುವವರು ನನಗೆ ಡಿಕ್ಕಿ ಹೊಡೆಯಬಾರದಲ್ಲ, ಅದಕ್ಕಾಗಿ ಈ ದೀಪ ನನ್ನ ಬಳಿ ಇದ್ದರೆ ಒಳ್ಳೆಯದಲ್ಲವೇ’. 

ಬಳಿಕ ಗೆಳೆಯ ನೀಡಿದ ದೀಪವನ್ನು ಕೋಲಿಗೆ ಸಿಕ್ಕಿಸಿಕೊಂಡು ಕುರುಡ ಮನುಷ್ಯ ನಡೆದ. ತುಸು ದೂರ ಸಾಗುತ್ತಲೂ ದಾರಿಯಲ್ಲಿ ಒಬ್ಬ ಇವನಿಗೆದುರಾಗಿ ಬಂದು ಡಿಕ್ಕಿ ಹೊಡೆದ. ಕುರುಡನಿಗೆ ತುಂಬಾ ಕೋಪ ಬಂತು. ರೇಗಿ ಕೇಳಿದ: ‘ಏನಯ್ಯಾ, ನಾನಂತೂ ಕುರುಡ. ನನಗೆದುರಾಗಿ ಯಾರು ಬರುತ್ತಾರೆ ಎನ್ನುವುದು ನನಗೆ ಕಾಣಿಸುವುದಿಲ್ಲ. ಆದರೆ ನೀನು ಕಣ್ಣುಳ್ಳವನು ತಾನೆ? ನಿನಗಾದರೂ ನಾನು ಎದುರಾಗಿ ಬರುತ್ತಿರುವುದು ಕಾಣಬೇಡವೇ? ಹಾಗೆ ಬೇರೆಯವರಿಗೆ ಕಾಣಲೆಂದೇ ತಾನೇ ನಾನು ದೀಪ ಹಿಡಿದು ಹೊರಟಿರುವುದು? ಅಥವಾ ನೀನೂ ನನ್ನಂತೆ ಕಣ್ಣುಕಾಣದ ಕುರುಡನೋ?’ ಎನ್ನುತ್ತಾನೆ. ಆಗ ಎದುರು ಬಂದು ಈ ಕುರುಡನಿಗೆ ಡಿಕ್ಕಿ ಹೊಡೆದವನು ಈ ಮಾತು ಕೇಳಿ ‘ಅಪ್ಪಾ, ನಾನು ಕುರುಡನಲ್ಲ. ಕತ್ತಲಲ್ಲಿ ಹಾದಿ ಕಾಣಿಸುತ್ತಿಲ್ಲ ನಿಜ. ಹಾಗೆ ಕಾಣಿಸಲೆಂದು ನೀನು ದೀಪ ಒಯ್ಯುತ್ತಿರುವುದೇನೋ ಒಳ್ಳೆಯದೇ ಸರಿ. ಆದರೆ ಆ ದೀಪವನ್ನು ಹತ್ತಿಸಿಕೊಂಡು ತರಬಾರದೇ? ನೀನು ಒಯ್ಯುತ್ತಿರುವುದು ಉರಿಯದೇ ಇರುವ ದೀಪವನ್ನು’ ಎಂದನು. ಕುರುಡನಿಗೆ ಬಹಳ ನೋವಾಗುತ್ತದೆ.

ಇಂಥ ದುಷ್ಟ ಗುಣದ ಗೆಳೆಯರು ಇದ್ದರೆಷ್ಟು, ಬಿಟ್ಟರೆಷ್ಟು ಈ ಬದುಕಿನಲ್ಲಿ ಎನಿಸುವುದಲ್ಲವೇ?

ADVERTISEMENT

ಹೇಗೋ ಹೇಗೋ ಹೆಗಲುಗೊಟ್ಟು ಬಂದಿಹ ಕೂರ್ಪು 

ಆಗುಹೋಗುಗಳಿಗೆ ಬಾಗದಂತೆ ಸುಖಕೆ ಸಂತಸಪಟ್ಟು

ದುಃಖದಲಿ ಸಹಭಾಗಿಯಾಗೆ ಜೀವನರಸದ ಪಾಕದಂತೆ

ಸರಸ ವಿರಸವನೆಲ್ಲ ಅಪ್ಪುಕಯ್ದು 

ಬಾಳುವರು ಗಂಧದೊಲು ಜೀವ ತೇಯ್ದು

ಕವಿ ಚೆನ್ನವೀರ ಕಣವಿ ಗೆಳೆತನವನ್ನು ಇಹಲೋಕದ ಅಮೃತವೆನ್ನುತ್ತಾರೆ. ‘ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವ, ಏನೇ ಬಂದರೂ ಪ್ರೀತಿಯಿಂದ ಸಂತೈಸುವ, ಸುಖದಲ್ಲಿ ಸಂತಸಪಟ್ಟು, ದುಃಖದಲ್ಲಿ ಸಹಭಾಗಿಯಾಗುವ ಗೆಳೆಯ ದೊರೆತಾಗ ಜೀವನ ರಸಪಾಕವಾಗುವುದು, ಬಾಳುವರು ಗಂಧದೊಲು ಜೀವತೇಯ್ದು. ಗಂಧವು ತೀಡಿದಷ್ಟೂ ಸುವಾಸನೆ ಬೀರುತ್ತದೆ, ಹಾಗೆ ಪಕ್ವಗೊಂಡಷ್ಟೂ ಸ್ನೇಹವು’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.