ADVERTISEMENT

ಥಾಯ್ಲೆಂಡ್‌ ಬಿಕ್ಕಟ್ಟು: ಒಳಗಿನವರೊಬ್ಬರ ನೋಟ

ಸಮೀರ ಸಿ ದಾಮ್ಲೆ
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

ಕಳೆದ ತಿಂಗಳು ನಾನು ಪ್ಯಾರಿಸ್‌ನಲ್ಲಿ ಕಾರ್ಯಾ­ಗಾರವೊಂದರಲ್ಲಿ ಭಾಗವಹಿ­ಸಿದ್ದೆ (ಮೇ ೨೨). ಬ್ಯಾಂಕಾಕ್‌ನ ಸಹೋ­ದ್ಯೋಗಿ­ಯಿಂದ ನನಗೆ ಮೊಬೈಲ್ ಕರೆ ಬಂತು, ಉತ್ತರಿಸ­ಲಾಗಲಿಲ್ಲ. ಇನ್ನೆರಡು ನಿಮಿಷಕ್ಕೆ ಸಂದೇಶ ಬಂತು: ‘ಥಾಯ್ಲೆಂಡ್‌ನಲ್ಲಿ ತುರ್ತುಪರಿ­ಸ್ಥಿತಿ ಹೇರಿದ್ದಾರೆ. ನಿನ್ನ ಹೆಂಡತಿ ಹಾಗೂ ಮಗಳಿಗೆ ತೀರಾ ಅಗತ್ಯದ ಹೊರತಾಗಿ ವಸತಿ ಸಮು­ಚ್ಚ­ಯದಿಂದ ಹೊರ­ಹೋಗ­ದಂತೆ ತಿಳಿಸು. ಅಗತ್ಯವಿ­ದ್ದರೆ ನಮ್ಮನ್ನು ಸಂಪರ್ಕಿಸಲು ಹೇಳು. ನಿನಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಳುಹಿಸುತ್ತಿರುತ್ತೇವೆ’ ಅಂತ.

ಭಾರತದ ತುರ್ತುಪರಿಸ್ಥಿತಿಯ ಕಥೆಗಳನ್ನು ಕೇಳಿ ತಿಳಿದಿದ್ದ ನನಗೆ ಆತಂಕವಾಯಿತು. ಅಷ್ಟ­ರಲ್ಲಿ ಮನೆಯಿಂದ ಬಂದ ‘ನಾವು ಸುರಕ್ಷಿತ­ವಾಗಿದ್ದೇವೆ, ಚಿಂತಿಸಬೇಕಾಗಿಲ್ಲ’ ಎಂಬ ಸಂದೇಶ ಮನಸ್ಸಿಗೆ ಸಮಾಧಾನ ತಂದಿತು. ಕಾರ್ಯಾ­ಗಾರ ಮುಗಿಸಿ ಮೇ ೨೪ ರ ಬೆಳಿಗ್ಗೆ ಪ್ಯಾರಿಸ್‌ನಿಂದ ಬ್ಯಾಂಕಾಕ್‌ಗೆ ಬಂದಿಳಿದ ನನಗೆ ಎಲ್ಲೂ ವಿಶೇಷ ಬದಲಾವಣೆ ಕಾಣಲಿಲ್ಲ. ತಿಂಗಳಿಗೆ ಎರಡು ಮೂರು ಬಾರಿ ಬ್ಯಾಂಕಾಕ್‌ನ ಸುವರ್ಣ­ಭೂಮಿ ಅಂತರರಾ­ಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಾಡುವ ನನಗೆ ಎಲ್ಲೂ ಮಾಮೂಲಿಗಿಂತ ಹೆಚ್ಚಿನ ಪೊಲೀಸರಾ­ಗಲೀ, ಸೈನಿಕರಾಗಲೀ ಕಾಣಲಿಲ್ಲ! ರಸ್ತೆಯಲ್ಲಿ, ಮುಖ್ಯ­ವಾಗಿ ಕೆಲ ಜಂಕ್ಷನ್‌ಗಳಲ್ಲಿ ಸ್ವಲ್ಪ ಹೆಚ್ಚು ಭದ್ರತೆ ಕಂಡುಬಂತೇ ವಿನಾ  ಬೇರೇನೂ ಬದ­ಲಾವಣೆ ಕಾಣಲಿಲ್ಲ. ವಾಹನ ದಟ್ಟಣೆ ಮಾಮೂ­ಲಿ­ನಂತೆಯೇ ಇತ್ತು. ನನ್ನ ಕಚೇರಿ ‘ಬಿಸಿನೆಸ್ ಸ್ಟ್ರೀಟ್’ ಎಂದೇ ಕರೆಯಲ್ಪಡುವ ಬ್ಯಾಂಕಾಕ್‌ನ ಸಿಲೊಮ್ ಮುಖ್ಯ ರಸ್ತೆಯಲ್ಲಿದೆ.

ಸೇನಾಡಳಿತ ಆರಂಭವಾದ ದಿನದಿಂದ ಇಂದಿನ­ವರೆಗೂ ಇಲ್ಲಿನ ನಮ್ಮ ಕಚೇರಿ ಕೆಲಸ­ಗಳು ನಿರಾತಂಕ­ವಾಗಿ ಸಾಗಿವೆ. ಸಾಮಾನ್ಯ ಜನರ ಬದುಕು ಆತಂಕದಿಂದ ಕೂಡಿಲ್ಲ. ಮುಖ್ಯವಾಗಿ ಮಧ್ಯಮವರ್ಗದವರಲ್ಲಿ ಒಂದು ಹೊಸ ಬೆಳಕು ಕಾಣುವ ಆಕಾಂಕ್ಷೆ ಮೂಡಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ  ಲೇಖ­­­ನ­­­­ಗಳ­­ನ್ನೋದಿದರೆ ಥಾಯ್ಲೆಂಡ್‌ನ ಜನ ನಿತ್ಯಭಯದಿಂದ ಏಳುತ್ತಾರೇನೋ ಎನಿಸ­ಬೇಕು! ಥಾಯ್ಲೆಂಡ್‌ನ ರಾಜಕೀಯ ಬಿಕ್ಕಟ್ಟಿಗೆ ಅಗತ್ಯ­ಕ್ಕಿಂತ ಹೆಚ್ಚು ಬಣ್ಣ ಲೇಪಿಸಿದ್ದು ಕಂಡು­ಬಂತು. ‘ಜನರೆಲ್ಲಾ ಭಯಭೀತರಾಗಿ ಓಡಾಡು­ತ್ತಿದ್ದಾರೆ, ನಾಗರಿಕರಲ್ಲಿ ಮನೆಮಾ­ಡಿ­ರುವ ಭಯ­ವನ್ನು ಹೋಗಲಾಡಿ­ಸಲು ಅರೆಬರೆ ಬಟ್ಟೆತೊಟ್ಟ ಹುಡು­ಗಿ­ಯರಿಂದ ರಸ್ತೆಗಳಲ್ಲಿ ಮನರಂಜನಾ ಕಾರ್ಯಕ್ರ­ಮವನ್ನು ಸೇನೆಯ­ವರು ಆಯೋಜಿಸಿ­ದ್ದಾರೆ’ ಎಂದು ಕೆಲವರು ಬರೆದಿರುವುದು ಸತ್ಯಕ್ಕೆ ದೂರ. ನನ್ನ ಪ್ರಕಾರ ಜನ ಈಗ ಹೆಚ್ಚು ಸಮಾಧಾನದಿಂದಿ­ದ್ದಾರೆ. ಒಳ್ಳೆಯ ಪ್ರಜಾತಂತ್ರ, ಸ್ಥಿರ ಆಡಳಿತ ಬೇಗನೆ ಬರಲಿದೆ ಎಂಬ ಆಶಯದಿಂದ ಇದ್ದಾರೆ.

ಇಲ್ಲಿ ಸೆಕ್ಸ್ ಟೂರಿಸಮ್ ಇದೆ, ಸ್ಟ್ರಿಪ್ ಬಾರ್, ಡ್ಯಾನ್ಸ್ ಬಾರುಗಳಿವೆ ಎಂಬುದು ನಿಜ; ಆದರೆ ಇವು ಕೆಲವು ನಿರ್ದಿಷ್ಟ ಜಾಗ, ರಸ್ತೆಗಳಲ್ಲಿ ಮಾತ್ರ ನಡೆಯುತ್ತವೆ. ಅಂತಹ ಜಾಗಗಳಲ್ಲಿ ಇಂತಹ ಕಾರ್ಯಕ್ರಮಗಳು ದಿನನಿತ್ಯವೂ ನಡೆಯುತ್ತವೆ! ಅಷ್ಟೇ ಅಲ್ಲ ಅಂತಹ ಸ್ಥಳಗಳು ವಿದೇಶಿ ಪ್ರವಾಸಿಗ­ರಿಂದಲೇ ತುಂಬಿರುತ್ತವೆ ಎಂಬುದೂ ಅಷ್ಟೇ ಸತ್ಯ! ಸೇನಾಡಳಿತ ಬಂದು ಕರ್ಫ್ಯೂ ಹೇರಿದಾಗ ಈ ವ್ಯವಹಾರ ಕೆಲ ದಿನಗಳ ಕಾಲ ನಿಂತಿತ್ತು.

ಕರ್ಫ್ಯೂ ಸಡಿಲವಾಗುತ್ತಿದ್ದಂತೆ  ಮತ್ತೆ ಇವೆಲ್ಲ ಪ್ರಾರಂಭವಾಗಿವೆ. ಥಾಯ್ ಜನರ ಭಯ ನೀಗಿ­ಸು­ವುದಕ್ಕೆ ಅಗತ್ಯವಿರುವುದು ಇಂತಹ ನೃತ್ಯಗ­ಳಲ್ಲ, ಬದಲಿಗೆ ಭ್ರಷ್ಟಾಚಾರರಹಿತ ಆಡಳಿತ.

ಈ ವರ್ಷದ ಪ್ರಾರಂಭದಲ್ಲಿ ಥಾಯ್ಲೆಂಡ್‌­ನಲ್ಲಿ ಆಡಳಿತ ವಿರೋಧಿ ಪ್ರತಿಭ­ಟನೆ ಪ್ರಾರಂಭ­ವಾದಾ­ಗಿನಿಂದ ಅಂತರ­ರಾಷ್ಟ್ರೀಯ ಸುದ್ದಿ ಮಾಧ್ಯ­ಮಗಳು ಥಾಯ್ಲೆಂಡ್‌ ಪರಿಸ್ಥಿತಿ ಬಗ್ಗೆ ರಂಗು ಹಚ್ಚಿ ವರದಿ ಮಾಡುವುದನ್ನು ಗಮನಿಸಿದ್ದೇನೆ. ಮಾಧ್ಯಮ ದಿಗ್ಗಜರೆನಿಸಿಕೊಂಡಿ­ರುವ ಬಿ.ಬಿ.ಸಿ ಹಾಗೂ ಸಿ.ಎನ್.ಎನ್ ಕೂಡ ಇದನ್ನೇ ಮಾಡುತ್ತಿವೆ.

ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳು ಎಲ್ಲೋ ಒಂದು ಸರ್ಕಾರಿ ಕಚೇರಿಯ ಮುಂದೆ ನಡೆದ ಕಲ್ಲು ತೂರಾಟವನ್ನು ದಿನವಿಡೀ ತೋರಿ­ಸುತ್ತಾ ಇಡೀ ಬ್ಯಾಂಕಾಕ್ ಪ್ರತಿಭಟನೆ­ಯಿಂದ ತುಂಬಿ ಹೋಯಿತೆಂಬ ಭ್ರಮೆ ಸೃಷ್ಟಿಸಿವೆ.

ಆದರೆ ಅದೇ ಬ್ಯಾಂಕಾಕ್‌ನ ಮುಖ್ಯರಸ್ತೆಗ­ಳಲ್ಲಿ ಪ್ರತಿಭಟನೆಯ 6 ಸ್ಥಳಗಳನ್ನು ಹೊರತು­ಪಡಿ­­ಸಿದರೆ, ವಾಹನಗಳ ಓಡಾಟ ವ್ಯವಹಾರ­ಗಳು ಎಂದಿನಂತೆ ಸಾಗಿತ್ತು. ಪ್ರತಿಭಟನಾ ಸ್ಥಳಗ­ಳಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತೇ ಹೊರತು ಮೆಟ್ರೊ ಮಾನೊ ರೈಲು ಸಂಚಾರ ನಿಲ್ಲಲಿಲ್ಲ.

ಈ ನಡುವೆ, ಅಂತರರಾಷ್ಟ್ರೀಯ ಮಾಧ್ಯಮ­ಗಳು, ಬುದ್ಧಿಜೀವಿಗಳು ಅಮೆರಿಕ ಅಥವಾ ಯುರೋ­ಪಿನ ದೃಷ್ಟಿಕೋನದಿಂದಲೇ ಇಡೀ ವಿಶ್ವನ್ನು ನೋಡುವುದು, ಅಮೆರಿಕ,­ ಯೂರೋ­­ಪಿನ ಸಹಭಾಗಿತ್ವದಿಂದಲೇ ಎಲ್ಲಾ ದೇಶ­ಗಳ ಬಿಕ್ಕಟ್ಟನ್ನು ಸರಿಪಡಿಸುತ್ತೇವೆಂಬ ಭಾವನೆ ಹೊಂದಿ­ರುವುದು ವಿಪರ್ಯಾಸ. ಇವರು ಸ್ಥಳೀಯ ಜನರ ಮನಸ್ಸು, ಹಿನ್ನೆಲೆ, ಸಂಸ್ಕೃತಿಯನ್ನೂ ಕೊಂಚ ಅರ್ಥೈಸಿಕೊಳ್ಳಬೇಕು.

೨೦೧೪ರ ಜನವರಿ ೧೩ರಂದು ಸುತೇಪ್ ತೌಗ್ಸು­ಬಾನ್ ನೇತೃತ್ವದಲ್ಲಿ ಬ್ಯಾಂಕಾಕ್‌ನಲ್ಲಿ ಆಡ­ಳಿತ ವಿರೋಧಿಸಿ ಪ್ರತಿಭಟನೆ ಆರಂಭವಾದಾ­ಗಲೂ ಜನರ ದೈನಂದಿನ ಬದುಕಿನಲ್ಲಿ ಬದಲಾ­ವಣೆ ಅವಶ್ಯಕತೆ ಬರಲಿಲ್ಲ. ಅದು ಶಾಂತಿ­ಯುತ ಪ್ರತಿಭಟನೆಯಾಗಿತ್ತು.

ಜ. ೧೩ರಿಂದ ಏ. ೧೦ವರೆಗೆ ಬ್ಯಾಂಕಾಕ್‌ನ 6 ಪ್ರಮುಖ ಸ್ಥಳಗಳಲ್ಲಿ ನಿರಂತ­ರ­ವಾಗಿ ಹಗಲು ರಾತ್ರಿ ನಡೆದ ಪ್ರತಿಭಟನೆಯಲ್ಲಿ ಕೇವಲ ಒಂದೆ­ರಡು ಹೇಳಬಹು­ದಾದ ಹಿಂಸೆಯ ಘಟನೆಗಳು ನಡೆದವು. ಆ ಹಿಂಸೆ ಕೂಡ ನಡೆದದ್ದು ಪ್ರತಿಭ­ಟನಾಕಾ­ರರಿಂದಲ್ಲ ಬದಲಿಗೆ ಸರ್ಕಾರದ ಬೆಂಬಲಿಗರಿಂದ.

ಪ್ರತಿಭಟನೆಯ ಸ್ವರೂಪ ಆಕರ್ಷಕವಾಗಿತ್ತು. ಅಲ್ಲೊಂದು ಜಾತ್ರೆಯ ವಾತಾವರಣವಿತ್ತು! ಪ್ರತಿ­ಭ­ಟನೆಗಾಗಿ ಇದ್ದ ವೇದಿಕೆಯಲ್ಲಿ ಭಾಷಣಗ­ಳೊಂದಿಗೆ ಸಂಗೀತ ನೃತ್ಯಗಳು ನಡೆದವು. ಅದರ ಸುತ್ತಲೂ ಹಲವಾರು ಅಂಗಡಿಗಳು ಹುಟ್ಟಿ­ಕೊಂಡವು. ಅಲ್ಲಿ ಪ್ರತಿಭಟನಾಕಾರರಿಗೆ ಅಗತ್ಯ­ವಾದ ಆಹಾರ ಮತ್ತು ಹಣ್ಣುಗಳ ಮಾರಾಟ, ಥಾಯ್ ಧ್ವಜದ ಚಿತ್ರವಿರುವ ಹಲವಾರು ನಿತ್ಯೋಪಯೋಗದ ವಸ್ತುಗಳು ಮತ್ತು ಆಟಿಕೆಗಳ ಮಾರಾಟವಾಗುತ್ತಿದ್ದವು.

ಪ್ರಮುಖ ಭಾಷಣಗಳ ಸಮಯದಲ್ಲಿ ಸುತ್ತ­ಮು­ತ್ತಲ ಕಚೇರಿಗಳಿಂದ ಉದ್ಯೋಗಿಗಳು, ಶಾಲಾ ಕಾಲೇಜುಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿ­ಗಳು, ವರ್ತಕರು ಒಂದೆರಡು ಗಂಟೆ­ಗಳ ಕಾಲ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲ­ವನ್ನು ಸೂಚಿ­ಸಲು ಪ್ರತಿಭಟನೆಯ ಸ್ಥಳಕ್ಕೆ ಬರು­ತ್ತಿದ್ದರು.  ಸೊಂಕ್ರಾನ್ ಹಬ್ಬ (ಥಾಯ್ ಹೊಸ­ವರ್ಷ) ಪ್ರಾರಂಭವಾದಂದಿನಿಂದ ಕಳೆದ ತಿಂಗಳು ಸೇನಾ­ಡಳಿತ ಬರುವವರೆಗೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಪ್ರತಿಭಟನೆಯನ್ನು ಲುಂಪಿನಿ ಉದ್ಯಾನವನಕ್ಕೆ ಸ್ಥಳಾಂತರಿಸಲಾ­ಯಿತು!

ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ ಪ್ರತಿಭಟ­ನಾಕಾರರ ಬೇಡಿಕೆ ರಾಜತಾಂತ್ರಿಕವಾಗಿ ಒಂದು ದೊಡ್ಡ ಬಿಕ್ಕಟ್ಟಾಯಿತು. ಏಕೆಂದರೆ ಅವರ ಬೇಡಿಕೆ, ಪ್ರಜಾತಾಂತ್ರಿಕ ಪರಿಹಾರವಾ­ಗಿರಲಿಲ್ಲ.

ಪ್ರಧಾನಿ ಯಿಂಗ್ಲಕ್ ಶಿನವಾತ್ರ  ಹಾಗೂ ಪ್ರತಿಭ­-ಟನಾಕಾರರ ನಾಯಕ ಸುತೇಪ್ ನಡುವೆ ಮುಕ್ತ ಚರ್ಚೆ ನಡೆಯಲಿಲ್ಲ. ಹಾಗೆ ನೋಡಿದರೆ ಜನವರಿಯಲ್ಲೇ ಸೇನಾ­ಡಳಿತವನ್ನು ಹೇರಬಹು­ದಿತ್ತು. ಆದರೆ ಸೇನಾನಾಯಕ ಪ್ರಯುತ್ ರಾಜಕೀಯ ಬಿಕ್ಕಟ್ಟು ಪ್ರಬಲವಾದಾಗಿನಿಂದಲೂ ‘ಮಾತುಕತೆ ಮೂಲಕ ದೇಶದ ಹಿತಕ್ಕೆ ಧಕ್ಕೆಯಾಗದಂತಹ ಒಂದು ಪರಿಹಾರ ಹುಡುಕಿ’ ಎಂದು ಹೇಳುತ್ತಲೇ ಬಂದಿದ್ದಾರೆ.

‘ಯಾವುದೇ ಸಂದರ್ಭದಲ್ಲಿಯೂ ಸೇನೆಯು ಜನರ ಹಿತ ಕಾಪಾಡಲು ಆದ್ಯತೆ ಕೊಡುತ್ತದೆ’ ಇದು ಪ್ರಯುತ್ ನಿರಂತರವಾಗಿ ಹೇಳಿಕೊಂಡು ಬಂದಿರುವ ಮಾತು.

ಥಾಯ್ಲೆಂಡಿನ ಸರ್ವೋಚ್ಚ ನ್ಯಾಯಾಲಯ ಅಧಿಕಾರದಿಂದ ಕೆಳಗಿಳಿಯು­ವಂತೆ ಆದೇಶ ನೀಡಿದ ನಂತರವೂ ಯಿಂಗ್ಲಕ್ ಶಿನವಾತ್ರ ಉದ್ಧಟತನ ತೋರಿದಾಗ ಸೇನಾಡಳಿತ ಹೇರಲಾಯಿತು ಎಂಬುದನ್ನು ಮರೆಯಬಾರದು.

ಯಿಂಗ್ಲಕ್‌ ಮತ್ತು ಆಕೆಯ ಅಣ್ಣ ಉಚ್ಚಾಟಿತ ಮಾಜಿ ಪ್ರಧಾನಿ ತಕ್ಸಿನ್ ಅವರ ಸರ್ಕಾರಕ್ಕೆ ಮೊದಲು ರೈತರ ದೊಡ್ಡ ಬೆಂಬಲ ಇದ್ದುದು ಇಂದು ಅದು ಕಡಿಮೆಯಾಗಿದೆ. ರೈತರು ಸರ್ಕಾ­ರ­ದಿಂದ ಬಾಕಿ ಹಣ ಬರದೆ ಬಸವಳಿ­ದಿದ್ದಾರೆ, ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಅಣ್ಣ-ತಂಗಿಯ ಭ್ರಷ್ಟ ಆಡಳಿತ ನೋಡಿ ಸುಸ್ತಾ­ಗಿದ್ದಾರೆ. ಹಾಗೆಂದು ಯಿಂಗ್ಲಕ್ ಶಿನ­ವಾ­ತ್ರಗೆ ಬೆಂಬಲಿಗರೇ ಇಲ್ಲವೆಂದು ನಾನು ಹೇಳು­ತ್ತಿಲ್ಲ. ಸರ್ಕಾರದ ಪ್ರಮು­­ಖರ ಬಂಧನವಾ­ಗಿದೆ, ಪಲಾ­ಯನ ಮಾಡಿ­ದ­ವರ ಮೇಲೆ ನಿರ್ಬಂಧ ಹೇರ­ಲಾಗಿದೆ. ಆದರೆ ಜನರ ಸ್ವಾತಂತ್ರ್ಯ ಸಂಪೂರ್ಣ ಕಳೆದುಹೋಗಿದೆ ಎಂದು ಹೇಳಲಾಗದು.

ಇವತ್ತಿಗೂ ಥಾಯ್ಲೆಂಡ್‌ನ ಪ್ರಮುಖ  ಪತ್ರಿಕೆ ‘ಬ್ಯಾಂಕಾಕ್ ಪೋಸ್ಟ್’ನಲ್ಲಿ ಸರ್ಕಾರದ ಪರ–ವಿರೋಧ ಅಭಿಪ್ರಾಯಗಳೆರಡೂ ಪ್ರಕಟ­ವಾ­ಗು­ತ್ತಿವೆ. ಆದಷ್ಟು ಬೇಗ ಪ್ರಜಾತಂತ್ರ ಪುನರ್ ಸ್ಥಾಪಿ­ಸು­ವುದಾಗಿ ಸೇನಾಧ್ಯಕ್ಷ  ಹೇಳುತ್ತಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಸೇನಾಧ್ಯಕ್ಷರೇ ಥಾಯ್ಲೆಂಡ್ ದೇಶದ ಮುಂದಿನ ಪ್ರಧಾನಿಯಾಗಿ ಸ್ವಚ್ಛ ಆಡಳಿತದೊಂದಿಗೆ ದೇಶಕ್ಕೆ ಹೊಸ ಬೆಳಕು ನೀಡಬಹುದೆಂಬ ಆಶಯ ನನ್ನ ಕೆಲ ಥಾಯ್ ಮಿತ್ರರಲ್ಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.