
ನಮ್ಮಲ್ಲಿ ಪುಸ್ತಕಪಂಥ ಅಲ್ಪಸಂಖ್ಯಾತರದು. ತಮಿಳುನಾಡಿನಲ್ಲಿ ಪುಸ್ತಕಪ್ರೇಮಿಗಳುಬಹುಸಂಖ್ಯಾತರು! ಅಲ್ಲಿ, ಪುಸ್ತಕಗಳು ಜನರ ದೈನಿಕದೊಂದಿಗೆ ಬೆಸೆದುಕೊಂಡಿವೆ.
ಈ ವರ್ಷದ ಚೆನ್ನೈ ಪುಸ್ತಕ ಮೇಳಕ್ಕೆ ಭೇಟಿ ಕೊಟ್ಟು, ಅದರ ಆಯೋಜಕ ಸಂಸ್ಥೆಯಾದ ‘ಬಾಪ್ಸಿ’ (ಬುಕ್ ಸೆಲ್ಲರ್ಸ್ ಅಂಡ್ ಪಬ್ಲಿಷರ್ಸ್ ಅಸೋಸಿಯೇಷನ್) ಜೊತೆ ಮಾತನಾಡಿ ಹಿಂತಿರುಗುವಾಗ, ‘ತಮಿಳರಿಂದ ಕಲಿಯುವುದು ಸಾಕಷ್ಟಿದೆ’ ಅನ್ನಿಸಿತು.
ಚೆನ್ನೈ ಪುಸ್ತಕ ಮೇಳವು ವ್ಯಾವಹಾರಿಕ ಕಾರ್ಯಕ್ರಮ ಮಾತ್ರವಲ್ಲ; ಅದೊಂದು ಸಾಂಸ್ಕೃತಿಕ ಚಳವಳಿ, ಸಾಹಿತ್ಯ ಪರಂಪರೆ ಮತ್ತು ತಲೆಮಾರುಗಳನ್ನು ಓದುವ ಸಂಸ್ಕೃತಿಗೆ ಜೋಡಿಸುವ ಜೀವಂತ ವೇದಿಕೆ. ಶ್ರೀಲಂಕಾ, ಮಲೇಷ್ಯಾ, ಸಿಂಗಪುರ, ಯುರೋಪ್, ಅಮೆರಿಕದಿಂದಲೂ ಓದುಗರು ಮತ್ತು ಪ್ರಕಾಶಕರು ಭಾಗವಹಿಸುವುದು ಆ ಮೇಳದ ಹೆಚ್ಚುಗಾರಿಕೆಗೆ ಸಾಕ್ಷಿ.
ಚೆನ್ನೈ ಪುಸ್ತಕ ಮೇಳ ಶುರುವಾದದ್ದು 1976ರಲ್ಲಿ. ಮೊದಲನೇ ಆವೃತ್ತಿಯಲ್ಲಿ ಇದ್ದ ಪುಸ್ತಕ ಮಳಿಗೆಗಳು ಹದಿಮೂರು ಮಾತ್ರ. 2026ರ 49ನೇ ಆವೃತ್ತಿಯ ಹೊತ್ತಿಗೆ ಅದು ಸಾವಿರ ಮಳಿಗೆಗಳನ್ನು ಒಳಗೊಂಡು ಭವ್ಯರೂಪ ಪಡೆದುಕೊಂಡಿದೆ. ಈ ಬೆಳವಣಿಗೆಯ ಹಿಂದೆ ದೂರದೃಷ್ಟಿ, ಸಂಘಟಿತ ಪ್ರಯತ್ನ ಮತ್ತು ಸಮಾಜದ ಒಟ್ಟಾರೆ ಸಹಭಾಗಿತ್ವ ಅಡಗಿದೆ. ಈ ಮೇಳದ ಒಂದು ಆವೃತ್ತಿಗೆ ಅಂದಾಜು ನಾಲ್ಕೂವರೆ ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಬಾಪ್ಸಿಯ ಅಧ್ಯಕ್ಷರು ಹೇಳಿದರು. ನಮ್ಮಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡಿದಂತೆ ಅಲ್ಲಿ ಈ ಪುಸ್ತಕ ಮೇಳಕ್ಕೆ ಸರ್ಕಾರದಿಂದ ಅನುದಾನ ದೊರೆಯುತ್ತದೆ.
ಚೆನ್ನೈ ಪುಸ್ತಕ ಮೇಳದ ಅತಿದೊಡ್ಡ ವಿಶೇಷ ಜನರ ಭಾಗವಹಿಸುವಿಕೆ. ಓದುಗರನ್ನು ಗ್ರಾಹಕರನ್ನಾಗಿ ಅಲ್ಲದೆ, ಸಾಂಸ್ಕೃತಿಕ ಭಾಗವಾಗಿ ಕಾಣುವ ಪುಸ್ತಕ ಮೇಳವಿದು. ಆದ್ದರಿಂದಲೇ ಇಲ್ಲಿ ಮಕ್ಕಳಿಂದ ವೃದ್ಧರವರೆಗೆ, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಉದ್ಯೋಗಸ್ಥರು, ಎಲ್ಲ ವರ್ಗದ ಜನರು ಸೇರುತ್ತಾರೆ. ವಾರಾಂತ್ಯದಲ್ಲಿ ಎರಡು ಲಕ್ಷ ಜನರನ್ನು ಸೆಳೆಯುವ ಪುಸ್ತಕ ಮೇಳ, ವಾರದ ದಿನಗಳಲ್ಲಿ ಸುಮಾರು ಒಂದು ಲಕ್ಷ ಜನರನ್ನು ಒಳಗೊಳ್ಳುತ್ತದೆ. ಒಟ್ಟು ಹದಿನೈದು ದಿನದಲ್ಲಿ ಅದು ಹದಿನೈದರಿಂದ ಇಪ್ಪತ್ತು ಲಕ್ಷ ಜನರನ್ನು ತನ್ನತ್ತ ಸೆಳೆಯುತ್ತದೆ. ಹನ್ನೆರಡರಿಂದ ಹದಿನೈದು ಕೋಟಿ ರೂಪಾಯಿಯಷ್ಟು ಪುಸ್ತಕಗಳ ವ್ಯಾಪಾರವಾಗುತ್ತದೆ. ಕೆಲವರು ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಿದ ದಾಖಲೆಯೂ ಇದೆಯಂತೆ!
ಓದುಗರ ಮನಸ್ಸುಗಳನ್ನು ರೂಪಿಸುವ, ಚಿಂತನೆಗಳನ್ನು ಬೆಳೆಸುವ ಮತ್ತು ಸಮಾಜದ ಬೌದ್ಧಿಕ ದಿಕ್ಕನ್ನು ನಿರ್ಧರಿಸುವ ಮಹಾವೇದಿಕೆಯಂತೆ ಚೆನ್ನೈ ಪುಸ್ತಕ ಮೇಳ ನನಗನ್ನಿಸಿತು. ಮೇಳದಲ್ಲಿ ನಡೆಯುವ ಚರ್ಚೆಗಳು, ಕವಿಗೋಷ್ಠಿಗಳು, ಪುಸ್ತಕ ಬಿಡುಗಡೆಗಳು, ಇವೆಲ್ಲವೂ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಳ್ಳುತ್ತವೆ. ಅವರನ್ನು ಆಲೋಚಿಸಲು ಪ್ರೇರೇಪಿಸುತ್ತವೆ. ಆ ಮೂಲಕ ಅವರು ಸಾಹಿತ್ಯವನ್ನು ಬರೀ ಸಂರಕ್ಷಿಸುವುದಿಲ್ಲ, ಬದಲಾಗಿ ಸಾಹಿತ್ಯವನ್ನು ಜನಜೀವನದ ಭಾಗವನ್ನಾಗಿಸಲು ಪ್ರಯತ್ನಿಸುತ್ತಾರೆ. ಸಾಹಿತ್ಯಲೋಕದ ಸಹೃದಯರನ್ನು ಅಲ್ಪಸಂಖ್ಯಾತರಂತೆ ಕಾಣುವ ಈ ಕಾಲಘಟ್ಟದಲ್ಲಿ, ನನಗೆ ತಮಿಳುನಾಡಿನ ಸಾಹಿತ್ಯಲೋಕ ದವರು ಬಹುಸಂಖ್ಯಾತರಂತೆ ಕಂಡುಬಂದರು.
ಚೆನ್ನೈ ಪುಸ್ತಕ ಮೇಳದ ಮತ್ತೊಂದು ವಿಶೇಷ, ಪುಸ್ತಕ ಮಳಿಗೆಗಳ ವಿನ್ಯಾಸ. ಮಳಿಗೆಯನ್ನೂ ಹಬ್ಬಕ್ಕೆ ಮನೆಯನ್ನು ಅಲಂಕರಿಸುವಂತೆ ಸಿಂಗರಿಸಿ ಸಂಭ್ರಮಿಸುವವರು ಅವರು! ಕೆಲವು ಕಡೆ ತೋರಣಗಳು, ಕೆಲವು ಕಡೆ ಸಾಹಿತಿಗಳ ಫೋಟೊಗಳು, ಕೆಲವು ಕಡೆ ಸುಗ್ಗಿ ನೆನಪಿಸುವ ಮಳಿಗೆ, ಕ್ರಿಸ್ಮಸ್ ನೆನಪಿಸುವ ಮಳಿಗೆ, ಮಸೀದಿಯನ್ನು ನೆನಪಿಸುವ ಮಳಿಗೆಗಳು ಅಲ್ಲಿ ಸಾಮಾನ್ಯ. ಅಂಬೇಡ್ಕರ್ ಅವರನ್ನು ಅಲ್ಲಿ ಸಂಭ್ರಮಿಸುವಂತೆ ಬೇರೆಲ್ಲೂ ಸಂಭ್ರಮಿಸಿದ್ದನ್ನು ನಾನಂತೂ ನೋಡಿಲ್ಲ. ಮಳಿಗೆಗಳಲ್ಲಿ ಅಂಬೇಡ್ಕರ್ ಪುಸ್ತಕಗಳನ್ನು ಮಾತ್ರವಲ್ಲ, ಅವರ ದೊಡ್ಡ ದೊಡ್ಡ ಫೋಟೊ, ಪ್ರತಿಮೆಗಳನ್ನೂ ಇಟ್ಟಿದ್ದರು. ಅವರನ್ನು ಬಿಟ್ಟರೆ ವಿವೇಕಾನಂದ ಅವರ ಪುತ್ಥಳಿಯೂ ಕಾಣಿಸಿತು. ಅಂಬೇಡ್ಕರ್, ವಿವೇಕಾನಂದ, ಮೋದಿ ಕುರಿತ ಪುಸ್ತಕಗಳನ್ನು ಒಟ್ಟೊಟ್ಟಿಗೆ ಮಾರಾಟಕ್ಕಿಟ್ಟಿದ್ದರು. ‘ಪುಸ್ತಕ ಪಂಥ’ ಎಂಬ ಮಾತಿಗೆ ಅನ್ವರ್ಥದಂತೆ ಅಲ್ಲಿ ಎಲ್ಲರೂ ಮತ್ತು ಎಲ್ಲವೂ ಇದ್ದವು!
ಈ ಮೇಳವನ್ನು ಕನ್ನಡ ಸಾಹಿತ್ಯ ಕ್ಷೇತ್ರ ದೊಂದಿಗೆ ಹೋಲಿಸಿದಾಗ, ನೋವಿನ ಸತ್ಯವೊಂದು ಕಾಣಿಸಿತು. ಕನ್ನಡ ಸಾಹಿತ್ಯಕ್ಕೆ ಅಪಾರವಾದ ಇತಿಹಾಸ, ಶ್ರೇಷ್ಠ ಕವಿಗಳು, ಸಾಹಿತಿ ಗಳು, ತತ್ತ್ವಜ್ಞಾನ ಮತ್ತು ವೈವಿಧ್ಯಮಯ ಬರಹಗಾರರ ಸಮೂಹವೇ ಇದ್ದರೂ, ಓದುಗರ ತಲೆಮಾರನ್ನು ನಿರಂತರ ವಾಗಿ ಬೆಳೆಸುವ ವ್ಯವಸ್ಥೆ ನಮ್ಮಲ್ಲಿ ತಮಿಳುನಾಡಿನಷ್ಟು ಬಲವಾಗಿಲ್ಲ. ಕನ್ನಡದಲ್ಲಿ ಪುಸ್ತಕ ಮೇಳಗಳು ನಡೆಯುತ್ತವೆ, ಉತ್ತಮ ಪ್ರಯತ್ನಗಳೂ ಇವೆ; ಆದರೆ, ಅವು ಜನೋತ್ಸವದ ರೂಪ ಪಡೆದಿಲ್ಲ. ನಾವು ಸಾಹಿತಿಕೇಂದ್ರಿತ ಚರ್ಚೆಯನ್ನು ಮಾಡುತ್ತೇವೆ. ಶ್ರೇಷ್ಠತೆಯನ್ನು ಹಿಂಬಾಲಿಸುತ್ತೇವೆ. ಆದರೆ, ಓದುಗ ಕೇಂದ್ರಿತ ಅಥವಾ ಓದುಗರ ಸೃಷ್ಟಿಗೆ ಪ್ರಯತ್ನವನ್ನೇ ಮಾಡುವುದಿಲ್ಲ. ಸಾಹಿತ್ಯ ಉಳಿಯಬೇಕಾದರೆ ಅದು ಜನರ ದಿನನಿತ್ಯದ ಬದುಕಿನಲ್ಲಿ ಜೀವಿಸಬೇಕು ಎಂಬ ಸಂಗತಿ ಕಡೆಗೆ ನಮಗ್ಯಾರಿಗೂ ಗಮನವಿದ್ದಂತಿಲ್ಲ.
ತಮಿಳು ಸಾಹಿತ್ಯ ಇಂದು ಎತ್ತರದಲ್ಲಿದೆ ಎಂದರೆ, ಅದು ಭಾಷೆಯ ಶ್ರೇಷ್ಠತೆಯಿಂದ ಮಾತ್ರವಲ್ಲ; ಅದು ಸಮಾಜದ ಒಟ್ಟಾರೆ ಬದ್ಧತೆಯಿಂದ. ಕನ್ನಡಕ್ಕೂ ಆ ಶಕ್ತಿ ಇದೆ. ಅದನ್ನು ಜಾಗೃತಗೊಳಿಸಬೇಕಿದೆ. ಚೆನ್ನೈ ಮೇಳ ನಮಗೆ ಪ್ರೇರಣೆ ಆಗಬೇಕು. ಸಾಹಿತ್ಯದ ಗೆಲುವು ಒಂದು ಭಾಷೆಯದ್ದಲ್ಲ, ಅದು ಸಂಸ್ಕೃತಿಯ ಗೆಲುವು. ಕನ್ನಡವೂ ಆ ಗೆಲುವಿಗೆ ಅರ್ಹ. ಅದಕ್ಕೆ ಬೇಕಾಗಿರುವುದು ದೀರ್ಘ ದೃಷ್ಟಿ, ತಲೆಮಾರಿನ ಹೂಡಿಕೆ, ಮತ್ತು ಪುಸ್ತಕದ ಮೇಲಿನ ನಿಜವಾದ ಪ್ರೀತಿ.
ಲೇಖಕ: ಪುಸ್ತಕೋದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.