
ಜೆಫ್ರಿ ಎಪ್ಸ್ಟೈನ್ನ ಕುಕೃತ್ಯಗಳ ಬಗೆಗೆ ಅಮೆರಿಕದ ನ್ಯಾಯಾಂಗ ಇಲಾಖೆ ಸಂಗ್ರಹಿಸಿರುವ ದಾಖಲೆಗಳಲ್ಲಿ ಇನ್ನೂ ಅರ್ಧದಷ್ಟನ್ನು ಬಿಡುಗಡೆ ಮಾಡಲಾಗಿಲ್ಲ ಎನ್ನಲಾಗುತ್ತಿದೆ. ಯಾವುದೇ ವ್ಯಕ್ತಿಯೂ ಹುಟ್ಟಿನಿಂದಲೇ ಕ್ರಿಮಿನಲ್ ಆಗಿರಲು ಸಾಧ್ಯವಿಲ್ಲ, ಒಂದು ವ್ಯವಸ್ಥೆ ವ್ಯಕ್ತಿಯನ್ನು ರೂಪುಗೊಳಿಸುತ್ತದೆ ಎನ್ನುವುದನ್ನು ಇವತ್ತು ಮನೋವಿಜ್ಞಾನಿಗಳು, ನರವಿಜ್ಞಾನಿಗಳು ಮತ್ತು ಸಮಾಜಶಾಸ್ತ್ರಜ್ಞರೆಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಈ ದಾಖಲೆಗಳಲ್ಲಿ ಯಾರೆಲ್ಲರ ಹೆಸರಿದೆ ಎನ್ನುವುದಕ್ಕಿಂತ, ಒಬ್ಬ ಜೆಫ್ರಿ ಎಪ್ಸ್ಟೈನ್ ಹೇಗೆ ಸೃಷ್ಟಿಯಾದ ಎನ್ನುವುದು ನಮಗೆಲ್ಲ ಮುಖ್ಯವಾದ ಪ್ರಶ್ನೆಯಾಗಬೇಕು.
ಅಧಿಕಾರ ನಮ್ಮ ಮಿದುಳನ್ನು ಮತ್ತು ಅದರ ಕಾರ್ಯ ಕ್ಷಮತೆಯನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದರ ಕುರಿತಾಗಿ ನರವಿಜ್ಞಾನಿಗಳು ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ. ಅಧಿಕಾರ ಎಂದರೆ ಬರೀ ರಾಜಕೀಯ ಅಧಿಕಾರ ಆಗಬೇಕಾಗಿಲ್ಲ. ಹಣ, ಧರ್ಮ, ಜಾತಿ, ಮೈಬಣ್ಣ, ವಿದ್ಯೆ, ಜೀವನದಲ್ಲಿ ದೊರೆಯುವ ಅವಕಾಶಗಳು, ಹೀಗೆ ಸಾಕಷ್ಟು ಅಂಶಗಳು ಅಧಿಕಾರದ ನಶೆಯನ್ನು ಏರಿಸಬಹುದು. ಜಾಗತೀಕರಣಗೊಂಡಿರುವ ಇವತ್ತಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹಣ ಎಲ್ಲಕ್ಕಿಂತ ಹೆಚ್ಚಿನ ಅಧಿಕಾರದ ನಶೆಯನ್ನು ತುಂಬುತ್ತಿದೆ.
ಅಧಿಕಾರದ ನಶೆಯಲ್ಲಿರುವವರ ಮಿದುಳನ್ನು ಸ್ಕ್ಯಾನಿಂಗ್ ಯಂತ್ರಗಳ ಮೂಲಕ ಅಧ್ಯಯನ ಮಾಡಿದಾಗ ನರವಿಜ್ಞಾನಿಗಳಿಗೆ ಆಶ್ಚರ್ಯಕರ ಬದಲಾವಣೆಗಳು ಕಂಡುಬಂದವು. ಮಾನವರ ಮಿದುಳಿನಲ್ಲಿ ‘ಮಿರರ್
ನ್ಯೂರಾನ್’ ಎನ್ನುವ ವಿಶಿಷ್ಟ ಜೀವಕೋಶಗಳಿರುತ್ತವೆ. ಅವುಗಳು ಎದುರಿಗಿರುವ ವ್ಯಕ್ತಿಯ ನೋವು–
ಕಷ್ಟಗಳನ್ನು ಪ್ರತಿಫಲಿಸಿ ನಮ್ಮೊಳಗೆ ಸಹಾನುಭೂತಿಯನ್ನು ಮೂಡಿಸುತ್ತವೆ. ಆಗ ಮಾತ್ರ ನಾವು ಮಾನವೀಯವಾಗಿ ವರ್ತಿಸಲು ಸಾಧ್ಯ. ಆದರೆ ಅಧಿಕಾರದ ನಶೆಯಲ್ಲಿರುವವರ ಮಿದುಳಿನಲ್ಲಿ ಮಿರರ್ ನ್ಯೂರಾನ್ಗಳು ನಿಷ್ಕ್ರಿಯವಾಗಿರುತ್ತವೆ ಎಂದು ಕೆನಡಾದ ಮ್ಯಾಕ್ಮಾಸ್ಟರ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನೆಗಳು ತೋರಿಸಿವೆ. ಹಾಗಾಗಿಯೇ ಹಸುಳೆಗಳ ಕಣ್ಣೀರು ಕೂಡ ಇಂತಹವರ ಪೈಶಾಚಿಕತೆಯನ್ನು ತಡೆಯಲಾರವು. ಸಮಾಜ ಹೆಚ್ಚಿನ ಹಣಗಳಿಸುವುದನ್ನು ಯಶಸ್ಸು ಎಂದು ಕರೆದರೆ, ನರವಿಜ್ಞಾನ ಹಣದಿಂದ ಬರುವ ಅಧಿಕಾರಭಾವ ಮಿದುಳಿಗೆ ಹಾನಿಕರ ಎನ್ನುತ್ತದೆ.
ಇಷ್ಟೇ ಅಲ್ಲ, ಹಣ ಸೇರುತ್ತಾ ಹೋದಂತೆ ಅದನ್ನು ಹೆಚ್ಚಿಸುತ್ತಲೇ ಹೋಗುವ ಅತೃಪ್ತಿ ಮತ್ತು ಕಳೆದುಕೊಳ್ಳುವ ಭಯ ಅಭದ್ರತೆಗಳು ಕೂಡ ನಮ್ಮೊಳಗೆ ಸೃಷ್ಟಿಯಾಗುತ್ತವೆ. ಹಾಗಾಗಿ, ಬಂಡವಾಳಶಾಹಿಗಳಿಗೆ ಎಲ್ಲವೂ ಹಣಗಳಿಸುವ ಮಾರ್ಗವಾಗಿ ಮಾತ್ರ ಗೋಚರಿಸುತ್ತವೆ. ಒಂದು ಅಪ್ಪಟ ಸ್ನೇಹ, ಬಾಂಧವ್ಯ, ಕಲೆ, ಸಾಹಿತ್ಯ, ಸಂಗೀತ ಮುಂತಾದ ಯಾವುದೇ ಭಾವಪ್ರಚೋದಕ ಕ್ರಿಯೆಗಳು ಇವರಿಗೆ ದೌರ್ಬಲ್ಯವಾಗಿ ಕಾಣುತ್ತವೆ. ಇಂಥವರು ಅಂತರಂಗದಲ್ಲಿ ಏಕಾಂಗಿ ಆಗಿರುತ್ತಾರೆ ಮತ್ತು ಹೆಚ್ಚಿನ ಹಣ ಮಾತ್ರ ಇವರ ಏಕಾಕಿತನವನ್ನು ನೀಗಿಸುವ ದಾರಿಯಾಗುತ್ತದೆ. ಇದರಿಂದಾಗಿ ನಿಧಾನವಾಗಿ ಇವರ ಕ್ರೌರ್ಯ ಹೆಚ್ಚುತ್ತಲೇ ಹೋಗುತ್ತದೆ ಎನ್ನುವುದು ಕೂಡ ಅಮೆರಿಕದ ಬರ್ಕ್ಲಿ ವಿಶ್ವವಿದ್ಯಾನಿಲಯದ ಅಧ್ಯಯನಗಳಲ್ಲಿ ಕಂಡುಬಂದಿದೆ.
ಇವತ್ತಿನ ಪ್ರಜಾಪ್ರಭುತ್ವಗಳು ಹೆಸರಿಗೆ ಮಾತ್ರ ‘ಪ್ರಜೆಗಳ ಆಡಳಿತ’ ಎನ್ನಿಸಿಕೊಂಡಿವೆ. ಪರದೆಯ ಹಿಂದಿನಿಂದ ಹಣವಂತರು ಪ್ರಪಂಚದ ಎಲ್ಲಾ ದೇಶಗಳ ರಾಜಕೀಯ ಅಧಿಕಾರವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿ
ದ್ದಾರೆ. ನ್ಯಾಯಾಂಗ ಕೂಡ ತನ್ನ ಪಾವಿತ್ರ್ಯಉಳಿಸಿಕೊಂಡಿಲ್ಲ. ಹಾಗಾಗಿ ಶ್ರೀಮಂತರ ಎಲ್ಲಾ ಕುಕೃತ್ಯಗಳು ಕಾನೂನಿನ ಹಿಡಿತದಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತವೆ. ಅದಿಲ್ಲದಿದ್ದರೆ 2005ರಲ್ಲಿಯೇ ಎಪ್ಸ್ಟೈನ್ ವಿರುದ್ಧ ಮೊದಲ ದೂರು ದಾಖಲಾಗಿದ್ದರೂ, 2019ರಲ್ಲಿ ಅವನು ಸಾಯುವವರೆಗೂ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವುದು ಹೇಗೆ ಸಾಧ್ಯ? ಇಂತಹ ಶ್ರೀಮಂತರು ಅತ್ಯಂತ ದುಬಾರಿ ವಕೀಲರನ್ನು ನೇಮಿಸಿಕೊಂಡು ಕಾನೂನಿನ ಸಣ್ಣಪುಟ್ಟ ಕುಂದುಗಳನ್ನು ಬಳಸಿಕೊಂಡು ಸುರಕ್ಷಿತವಾಗಿರುತ್ತಾರೆ. ಅಮೆರಿಕದಂತಹ ದೇಶದಲ್ಲಿ ಶಿಕ್ಷೆಯನ್ನು ಚೌಕಾಸಿ ಮಾಡಿ ಕಡಿಮೆ ಮಾಡಿಸಿಕೊಳ್ಳುವ ವ್ಯವಸ್ಥೆಗೆ ‘ಪ್ಲೀ ಬಾರ್ಗೈನ್’ ಎನ್ನುವ ಗೌರವದ ಹೆಸರಿನಿಂದ ಅವಕಾಶ ನೀಡಲಾಗಿದೆ. ಈ ಎಲ್ಲ ಅಂಶಗಳು
ಶ್ರೀಮಂತರಲ್ಲಿ ವ್ಯವಸ್ಥೆಯನ್ನು ಧಿಕ್ಕರಿಸಿ ಕಾನೂನುಬಾಹಿರವಾಗಿ ಮತ್ತು ಅನೈತಿಕವಾಗಿ ತಮ್ಮ ಗುರಿಯನ್ನು ಸಾಧಿಸಿಕೊಳ್ಳುವ ದುರಹಂಕಾರವನ್ನು ತುಂಬುತ್ತಾ ಬಂದಿದೆ.
ಇನ್ನೊಂದು ಕಡೆ ತೀವ್ರವಾಗಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಹೆಚ್ಚಿನ ಜನರನ್ನು ಹತಾಶೆ, ಅಸಹಾಯಕತೆಗಳತ್ತ ನೂಕುತ್ತಿದೆ. ಇಂತಹವರನ್ನು ಹಣ, ಸ್ಥಾನಮಾನ, ಸುಖ ಜೀವನದ ಆಸೆಗಳತ್ತ ಸೆಳೆಯುವುದು ಸುಲಭ. ಜೀವಿಸುವ ಅನಿವಾರ್ಯತೆಗಾಗಿ ಕೆಲವರು ಬಲಿಪಶುಗಳಾದರೆ, ಹೆಚ್ಚಿನ
ಹಣದ ಆಸೆಗೆ ಇನ್ನು ಕೆಲವರು ಬಲಿಪಶುಗಳಾಗಲು ಸಿದ್ಧರಾಗಬಹುದು. ಅಂದರೆ, ಬಲಿಪಶುಗಳನ್ನು ಉತ್ಪನ್ನ ಮಾಡುವ ಒಂದು ಅಗೋಚರ ಸಮಾನಾಂತರ ವ್ಯವಸ್ಥೆ ಕೂಡ ಇವತ್ತಿನ ಆರ್ಥಿಕ ನೀತಿಗಳಿಂದ ಸೃಷ್ಟಿಯಾಗುತ್ತಿದೆ. ಹೀಗೆ ಬಲಿಪಶುಗಳಾಗಲು ಸಿದ್ಧವಾಗಿರುವ ದೊಡ್ಡ ಜನಸಮೂಹ ಮತ್ತು ಬಲಿ
ಪಡೆದುಕೊಳ್ಳಲು ಕಾಯುತ್ತಿರುವ ಶ್ರೀಮಂತ ವರ್ಗ ಇವೆರಡೂ ಸೇರಿ ಒಬ್ಬ ಜೆಫ್ರಿ ಎಪ್ಸ್ಟೈನ್ನನ್ನು ಸೃಷ್ಟಿ ಮಾಡಿದೆ. ಇಂತಹ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸದಿದ್ದರೆ ಮತ್ತೆ
ಮತ್ತೆ ಜೆಫ್ರಿ ಎಪ್ಸ್ಟೈನ್ಗಳು ಸೃಷ್ಟಿಯಾಗುವುದನ್ನು ತಡೆಯುವುದಾದರೂ ಹೇಗೆ?
ನಮ್ಮ ದೇಶದ ರಾಮ್ರಹೀಮ್, ಆಸಾರಾಮ್ ಬಾಪು, ಪ್ರಜ್ವಲ್ ರೇವಣ್ಣ ಅಂತಹವರು ಸೃಷ್ಟಿಯಾಗಿರುವುದು ಕೂಡ ಇಂತಹ ವ್ಯವಸ್ಥೆಯಿಂದಲೇ ಎನ್ನುವುದನ್ನು ಗಮನದಲ್ಲಿ ಇಡಬೇಕು. ಎಪ್ಸ್ಟೈನ್ಗಳನ್ನು ತಯಾರಿಸುತ್ತಿರುವ ಕಾರ್ಖಾನೆಗಳನ್ನು ಮುಚ್ಚದಿದ್ದರೆ ಮತ್ತೆಮತ್ತೆ ಅಂಥವರು ಹುಟ್ಟಿಕೊಳ್ಳು
ತ್ತಲೇ ಹೋಗುವುದನ್ನು ತಡೆಯಲಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.