ADVERTISEMENT

ಪ್ರಜಾವಾಣಿ ಪಾಡ್‌ಕಾಸ್ಟ್‌: ವಚನವಾಣಿಗೆ 300ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 3:08 IST
Last Updated 27 ಅಕ್ಟೋಬರ್ 2021, 3:08 IST

ಕನ್ನಡ ಪತ್ರಿಕಾಲೋಕದಲ್ಲಿಯೇ ವಿನೂತನ ಪ್ರಯೋಗವಾಗಿ ಪ್ರಜಾವಾಣಿಯು 'ಕನ್ನಡ ಧ್ವನಿ' ಹೆಸರಿನಲ್ಲಿ ಪಾಡ್‌ಕಾಸ್ಟ್ ಚಾನೆಲ್ ಆರಂಭಿಸಿದ್ದು, ಇದರಲ್ಲಿ ನಿತ್ಯವೂ ಮೂಡಿಬರುತ್ತಿರುವ ವಚನವಾಣಿ ದೈನಿಕ ಸರಣಿಗೆ ಅ. 27ರಂದು ದಾಖಲೆಯ 300ನೆಯ ಕಂತಿನ ಸಂಭ್ರಮ. ಅಂತರ್ಜಾಲದ ಮೂಲಕ ದೇಶ-ವಿದೇಶಗಳಿಗೆ ತಲುಪುತ್ತಿರುವ ಈ 'ಕನ್ನಡ ಧ್ವನಿ' ಕಾರ್ಯಕ್ರಮ ಈವರೆಗೆ ಐದು ಲಕ್ಷಕ್ಕೂ ಅಧಿಕ ಪ್ಲೇ ಕಂಡಿದೆ.

ಹಿಂದೆ ವಾರಕ್ಕೊಂದು ಎಂಬಂತಿದ್ದ ಈ ವಚನವಾಣಿ, ಕೇಳುಗರ ಬೇಡಿಕೆಯ ಮೇರೆಗೆ ಪ್ರತಿದಿನವೂ ಪ್ರಸಾರವಾಗುತ್ತಿದೆ. ವಚನಗಳನ್ನೇ ಆಯ್ದು, ವಿನೂತನ ಪಾಡ್‌ಕಾಸ್ಟ್ ತಂತ್ರಜ್ಞಾನದ ಮೂಲಕ ಜನತೆಗೆ ತಲುಪಿಸುತ್ತಿರುವ ಪ್ರಜಾವಾಣಿಯ ವಚನವಾಣಿ ಕಾರ್ಯಕ್ರಮ ಸರಣಿಯು ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಒಂದು ಅಪೂರ್ವ ದಾಖಲೆ.

ಡಾ.ಬಸವರಾಜ ಸಾದರ, ಡಾ. ಕುಮಾರ್ ಕಣವಿ, ಕವಿತಾ ಸಾದರ ಮತ್ತು ಬಸವಕುಮಾರ್ ಅವರು ವಚನವಾಣಿ ಪಾಡ್‌ಕಾಸ್ಟ್ ಪ್ರಸ್ತುತಪಡಿಸುತ್ತಿದ್ದಾರೆ.

ADVERTISEMENT

ಪರಿಕಲ್ಪನೆ, ವಾಚನ ಮತ್ತು ವಿಶ್ಲೇಷಣೆಯನ್ನು ಡಾ. ಬಸವರಾಜ ಸಾದರ ಅವರು ಮಾಡುತ್ತಿದ್ದು, ರಾಗಸಂಯೋಜನೆ-ಗಾಯನವನ್ನು ಡಾ. ಕುಮಾರ್ ಕಣವಿ ಮತ್ತು ಕವಿತಾ ಸಾದರ ನಡೆಸಿಕೊಡುತ್ತಿದ್ದಾರೆ.

ವಚನವಾಣಿಯ ಪ್ರತಿದಿನದ ಸಂಚಿಕೆಯಲ್ಲಿ ನಿತ್ಯವೂ ಒಂದೊಂದು ಹೊಸ ವಚನವನ್ನು ಜಗತ್ತಿಗೇ ತಲುಪಿಸಲಾಗುತ್ತಿದೆ. ಇದರಲ್ಲಿ ಈವರೆಗೆ ಕೇಳಿರದ ಮತ್ತು ಗಮನಿಸಿರದ ವಚನಗಳನ್ನೇ ಅಳವಡಿಸಲಾಗುತ್ತಿರುವುದು ವಿಶೇಷ. ಪ್ರತಿ ಕಾರ್ಯಕ್ರಮದಲ್ಲಿ ಮೊದಲು ಆಯಾ ವಚನದ ವಾಚನ ಇದ್ದು, ನಂತರ, ಒಂದೂವರೆ ನಿಮಿಷದ ಅವಧಿಯಲ್ಲಿ ಆ ವಚನವನ್ನು ವಿಶ್ಲೇಷಿಸಲಾಗುತ್ತದೆ. ಅನಂತರ ಆ ವಚನಕ್ಕೆ ಸಂಗೀತ ಸಂಯೋಜಿಸಿ ಹಾಡಲಾಗುತ್ತದೆ. ಕಡಿಮೆ ಅವಧಿಯಲ್ಲಿ ಇಡೀ ವಚನದ ಒಟ್ಟು ಸ್ವರೂಪ, ಅರ್ಥ ಮತ್ತು ಸಂದೇಶವು, ಮಾತು ಮತ್ತು ಹಾಡಿನ ಮೂಲಕ ಬಿತ್ತರ ಮಾಡುತ್ತಿರುವ ಈ ಪ್ರಯತ್ನ ಎಲ್ಲರ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.