ADVERTISEMENT

ಗುರುವಾರ, 5–10-1967

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ಸಣ್ಣ ಕಾರು ಬೇಕು: ‘ತಗಡಿನ ಡಬ್ಬ’ ಬೇಡ

ಬೆಂಗಳೂರು, ಅ. 4– ‘ತಗಡಿನ ಡಬ್ಬ’ ಭಾರತೀಯ ತಯಾರಿಕೆಯ ಕಾರೊಂದರ ಬಗ್ಗೆ ಕೇಂದ್ರ ಉಪಸಚಿವರ ವರ್ಣನೆ.

ವರದಿಗಾರರಿಗೆ ಸಣ್ಣ ಕಾರು ಯೋಜನೆಯಲ್ಲಿ ತಯಾರಾಗಬೇಕಾದ ಕಾರಿನ ರೂಪು ರೇಷೆ ನೀಡುತ್ತಿದ್ದ ಕೈಗಾರಿಕಾ ಉಪಸಚಿವ ಶ್ರೀ ಭಾನುಪ್ರಕಾಶ್ ಅವರು ‘ಈಗ ಬರುತ್ತಿರುವ ತಗಡಿನ ಡಬ್ಬ ಬೇಕಿಲ್ಲ’ ಎಂದರು.  (ಉದಾಹರಣೆಗೆ ಅವರು ಸ್ಟಾಂಡರ್ಡ್ ಹೆರಾಲ್ಡ್ ಕಾರಿನ ಹೆಸರನ್ನು ಹೇಳಿದರು).

ADVERTISEMENT

‘ಕಡಿಮೆ ಬೆಲೆಯಲ್ಲಿ ಶ್ರೇಷ್ಠ ದರ್ಜೆಯ ನಾಲ್ಕು ಬಾಗಿಲುಗಳ ಕಾರು ತಯಾರಾಗಬೇಕು. ಅದರ ಬೆಲೆ 10 ಸಾವಿರ ರೂಗಳಿಗಿಂತ ಕಡಿಮೆ ಇರಬೇಕು. ಬೆಲೆ ಕಡಿಮೆ ಇರಬೇಕೇ ವಿನಾ ಅಗ್ಗದ ಮಾಲಾಗಿರಬಾರದು’ ಎಂಬುದು ಅವರ ಆಶಯ.

ನಗರದಲ್ಲಿ ವರ್ತಕರ ಆಹಾರ ಧಾನ್ಯ ‘ಜನತಾ ಸ್ಟೋರ್ಸ್’ ಆರಂಭೋತ್ಸವ

ಮೈಸೂರು, ಅ. 4– ಒಟ್ಟು ವ್ಯಾಪಾರದ ಘಟ್ಟದಲ್ಲಿ ಶೇಕಡಾ 2 ಮತ್ತು ಚಿಲ್ಲರೆ ಮಾರಾಟದ ಘಟ್ಟದಲ್ಲಿ ಶೇಕಡಾ 3 ರಷ್ಟು ಮಾತ್ರ ಲಾಭದೊಡನೆ ನಗರದ ಜನರಿಗೆ ಅಕ್ಕಿ, ರಾಗಿ ಹಾಗೂ ಜೋಳವನ್ನು ಒದಗಿಸುವ ವರ್ತಕ ವೃಂದದ ‘ಹೊಸ ಪ್ರಯೋಗ’ ಇಂದು ನಗರದಲ್ಲಿ ಆರಂಭವಾಯಿತು.

ಇಡೀ ರಾಷ್ಟ್ರದಲ್ಲಿ ಪ್ರಪ್ರಥಮವಾಗಿ ವರ್ತಕ ವೃಂದ ವ್ಯವಸ್ಥೆ ಮಾಡಿರುವ ‘ಆಹಾರ ಧಾನ್ಯಗಳ ಜನತಾ ಸ್ಟೋರ್ಸ್’ನ ಆರಂಭೋತ್ಸವವನ್ನು ಆಹಾರ ಸಚಿವ ಶ್ರೀ ಬಿ.ಡಿ. ಜತ್ತಿ ಅವರು ಬೆಳಿಗ್ಗೆ ನೆರವೇರಿಸಿದರು.

ಅರಮನೆಯಲ್ಲಿ ನವರಾತ್ರಿ ಆರಂಭ

ಮೈಸೂರು, ಅ. 4– ಎಂಬತ್ತು ವರ್ಷಗಳ ದಸರಾ ವಸ್ತು ಪ್ರದರ್ಶನದ ಉದ್ಘಾಟನೆ ಹಾಗೂ ಶ್ರೀಮನ್ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರ ಸಿಂಹಾಸನಾರೋಹಣದ ಮೂಲಕ ಇಂದು ಮೈಸೂರಿನಲ್ಲಿ ಜಗತ್ಪ್ರಸಿದ್ಧ ದಸರಾ ಮತ್ತು ನವರಾತ್ರಿ ಉತ್ಸವಗಳು ಆರಂಭವಾದುವು.

ಮೈಸೂರು ದಸರಾ ನಿಲ್ಲಿಸಬಾರದೆಂದು ಶ್ರೀ ಭಾನುಪ್ರಕಾಶ್

ಬೆಂಗಳೂರು, ಅ. 4– ಮೈಸೂರಿನ ಸುಪ್ರಸಿದ್ಧ ದಸರಾ ಮಹೋತ್ಸವ ನಾಡಿನ ಸಾಂಸ್ಕೃತಿಕ ಸಂಕೇತವಾಗಿ ಮುಂದುವರೆಯಬೇಕೆಂದು ಕೇಂದ್ರ ಕೈಗಾರಿಕಾಭಿವೃದ್ಧಿ ಉಪ ಸಚಿವ ಶ್ರೀ ಭಾನುಪ್ರಕಾಶ್ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

ದಸರಾ ಅದ್ಧೂರಿಯಿಂದಲೇ ಮುಂದುವರೆಯಬೇಕೆಂದ ಅವರು ‘ಅದರಿಂದ ವಿದೇಶಿ ವಿನಿಮಯವೂ ಬರುತ್ತದೆ ಎಂಬುದನ್ನು ಮರೆಯಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.