ADVERTISEMENT

ಭಾನುವಾರ, 20-2-1961

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 15:50 IST
Last Updated 19 ಫೆಬ್ರುವರಿ 2011, 15:50 IST

 25 ರೊಳಗೆ ಬಿಕ್ಕಟ್ಟು ನಿವಾರಿಸುವ ಭರವಸೆ
ಬೆಂಗಳೂರು, ಫೆ. 19 - ಮೈಸೂರು ಕಾಂಗ್ರೆಸ್ಸಿನಲ್ಲಿ ಸಂಸ್ಥೆ ಹಾಗೂ ಮಂತ್ರಿಮಂಡಲಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಫೆಬ್ರುವರಿ 25 ರೊಳಗೆ ಪರಿಹರಿಸುವುದಾಗಿ ಎಂ.ಪಿ.ಸಿ.ಸಿ. ಅಧ್ಯಕ್ಷ ಎಸ್. ನಿಜಲಿಂಗಪ್ಪ ಮತ್ತು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಂದು ಎಂ.ಪಿ.ಸಿ.ಸಿ.ಗೆ ಭರವಸೆ ನೀಡಿದರು.

ಪ್ರದೇಶ ಕಾಂಗ್ರೆಸ್ ಚುನಾವಣೆ ಸಮಿತಿಯನ್ನು ರಚಿಸಲು ಸ್ಪರ್ಧೆಗಾಗಿ ಉಭಯ ಗುಂಪುಗಳೂ ಸರ್ವಸಿದ್ಧರಾಗಿ ಹಾಜರಿದ್ದ ಸಭೆ ಈ ನಾಯಕದ್ವಯರ ಆಶ್ವಾಸನೆಯನ್ನು ಹರ್ಷದಿಂದ ಸ್ವೀಕರಿಸಿ ಚುನಾವಣೆ ಸಮಿತಿಯ ರಚನೆಯನ್ನೂ ಆ ನಾಯಕರಿಗೆ ವಹಿಸಿಕೊಟ್ಟರು.

ಕ್ಷಮೆ ಕೇಳಲು ಭಿನ್ನಮತೀಯರಿಗೆ ಕರೆ
ನವದೆಹಲಿ, ಫೆ. 19 - ಉತ್ತರ ಪ್ರದೇಶದ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣವನ್ನು ಬಹಿಷ್ಕರಿಸಿದ ಹಿಂದಿನ ಮಂತ್ರಿಮಂಡಲದ ಗುಂಪಿನವರು ರಾಜ್ಯಪಾಲರನ್ನು ಹಾಗೂ ಶಾಸನ ಸಭೆ ಕಾಂಗ್ರೆಸ್ ಪಕ್ಷವನ್ನೂ ಕ್ಷಮೆ ಕೇಳಬೇಕೆಂದು ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ಇಂದು ತಿಳಿಸಿದೆ.

ಉತ್ತರ ಪ್ರದೇಶ ಕಾಂಗ್ರೆಸ್ಸಿನ ಹಗರಣ ಕುರಿತು ಎರಡು ದಿನಗಳಿಂದ ಚರ್ಚಿಸಿದ ಪಾರ್ಲಿಮೆಂಟರಿ ಬೋರ್ಡು ಇಂದು ನಿರ್ಣಯವೊಂದನ್ನು ಅಂಗೀಕರಿಸಿ ಕಾಂಗ್ರೆಸ್ ಶಾಸಕರ ಗುಂಪೊಂದು, ಉದ್ದೇಶ ಪೂರ್ವಕವಾಗಿಯೇ ರಾಜ್ಯಪಾಲರು ಭಾಷಣ ಮಾಡಿದ ಜಂಟಿ ಅಧಿವೇಶನಕ್ಕೆ ಹೋಗದಿರುವುದು ‘ರಾಜ್ಯಪಾಲರಿಗೆ ಹಾಗೂ ರಾಜ್ಯದ ಶಾಸಕಾಂಗಕ್ಕೆ ತೋರಿದ ತೀವ್ರ ಅವಮರ್ಯಾದೆ’ ಎಂದು ತಿಳಿಸಿದೆ.

ಮದ್ರಾಸಿನಲ್ಲಿ 10 ಲಕ್ಷ ಜನರಿಂದ ಭವ್ಯ ಸ್ವಾಗತ
ಮದ್ರಾಸ್, ಫೆ. 19 - ಮದರಾಸ್ ನಗರಕ್ಕೆ ಇಂದು ಸಂಜೆ ಆಗಮಿಸಿದ ಬ್ರಿಟಿಷ್ ರಾಣಿ ಎಲಿಜಬತ್ ಹತ್ತು ಲಕ್ಷ ಜನರಿಂದ ಅಭೂತಪೂರ್ವ ಸ್ವಾಗತ ಪಡೆದು ಆ ಮೇಲೆ ರಾಜಾಜಿ ಹಾಲಿನಲ್ಲಿ ಗೊಂಚಲು ದೀಪಗಳಡಿ ಕುಳಿತು ತಮ್ಮ ಮಗ ಪ್ರಿನ್ಸ್ ಆಂಡ್ರೊನ ಮೊದಲನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ‘ಕೇಕ್’ ಕತ್ತರಿಸಿದರು.

ವಿಮಾನ ನಿಲ್ದಾಣದಿಂದ ರಾಜಭವನಕ್ಕೂ, ಅಲ್ಲಿಂದ ಮುಖ್ಯಮಂತ್ರಿ ಶ್ರೀ ಕಾಮರಾಜ್ ಏರ್ಪಡಿಸಿದ್ದ ಸತ್ಕಾರ ಕೂಟಕ್ಕೂ ರಾಣಿ ಎಲಿಜಬತ್ ಮತ್ತು ಅವರ ಪತಿ ಎಡಿನ್‌ಬರೂ ಡ್ಯೂಕರು ಆಗಮಿಸಿದಾಗ ನಾದಸ್ವರದೊಡನೆ ಸ್ವಾಗತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.