86ರ ಮೀಸಲು ನೀತಿ ಅನ್ವಯ ವೃತ್ತಿ ಶಿಕ್ಷಣ ಪ್ರವೇಶ: ಮೊಯಿಲಿ
ಬೆಂಗಳೂರು, ಸೆ. 1– ಹಿಂದುಳಿದ ವರ್ಗದವರ ಮೀಸಲಾತಿಗೆ ಸಂಬಂಧಿಸಿದ 1986ರ ಆದೇಶಕ್ಕೆ ಅನುಗುಣವಾಗಿಯೇ ವೃತ್ತಿ ಶಿಕ್ಷಣದಲ್ಲಿ ಮೀಸಲು ಒದಗಿಸುವ ನಿಲುವಿಗೆ ಸರ್ಕಾರ ಬದ್ಧವಾಗಿದ್ದು, ಸುಪ್ರೀಂ ಕೋರ್ಟ್ ತಡೆ ನೀಡಿರುವ ಹತ್ತು ದಿನಗಳ ಅವಧಿ ಮುಗಿದ ಮರುದಿನದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಮೀಸಲು ಕುರಿತ 1986ರ ಆದೇಶಕ್ಕೆ ನ್ಯಾಯಾಲಯ ನೀಡಿರುವ ಹತ್ತು ದಿನಗಳ ತಡೆಯಿಂದ ವೃತ್ತಿಪರ ಶಿಕ್ಷಣ ಪ್ರವೇಶ ಪ್ರಕ್ರಿಯೆಗೆ ಎದುರಾಗಿರುವ ಅಡ್ಡಿ ಸಂಬಂಧದಲ್ಲಿ ನಡೆದ ಚರ್ಚೆಗೆ ಮೊಯಿಲಿ ಅವರು ನೀಡಿದ ಉತ್ತರದಿಂದ ಅತೃಪ್ತಗೊಂಡ ವಿರೋಧಿ ಸದಸ್ಯರು ಸಭಾತ್ಯಾಗ ಮಾಡಿದರು.
ಕನ್ನಡ ಪ್ರಾಧಿಕಾರಕ್ಕೆ ಶಾಸನಬದ್ಧ ಅಧಿಕಾರ
ಬೆಂಗಳೂರು, ಸೆ. 1– ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸನಬದ್ಧ ಅಧಿಕಾರ ನೀಡುವ 1994ರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿತು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಆರ್.ಎನ್. ನಾಯ್ಕ ಅವರು ವಿಧೇಯಕದ ಪರ್ಯಾಲೋಚನೆಗೆ ಸೂಚಿಸುತ್ತಿದ್ದಂತೆಯೇ ಆಕ್ಷೇಪ ವ್ಯಕ್ತಪಡಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೂವರು ಶಾಸಕರು ಸಭಾತ್ಯಾಗ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.