ರಾಷ್ಟ್ರಪತಿಗೆ ಬರೆದ ಪತ್ರ ವಾಪಸ್: ಕೇಸರಿ ಭರವಸೆ
ನವದೆಹಲಿ, ಏ.15– ಸಂಯುಕ್ತ ರಂಗವು ಪ್ರಧಾನಿ ಎಚ್.ಡಿ ದೇವೇಗೌಡ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ಕೂಡಲೇ, ಕಾಂಗ್ರೆಸ್ ಪಕ್ಷವು ಕಳೆದ ಮಾರ್ಚ್ 31 ರಂದು ಸರ್ಕಾರ ರಚಿಸುವುದಾಗಿ ರಾಷ್ಟ್ರಪತಿ ಅವರಿಗೆ ಬರೆದ ಪತ್ರವನ್ನು ಹಿಂತೆಗೆದು ಕೊಳ್ಳುವುದಾಗಿ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರು ರಂಗಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ.
ಸಂಯುಕ್ತ ರಂಗದ ಸಂಚಾಲಕ ಎನ್.ಚಂದ್ರಬಾಬು ನಾಯ್ಡು ಅವರಿಗೆ ಇಂದು ಅವರು ಅಧಿಕೃತವಾಗಿ ಪತ್ರ ಬರೆದು, ಅದರ ಜತೆಗೆ ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯು ಕೈಗೊಂಡ ನಿರ್ಣಯದ ಪ್ರತಿ
ಯೊಂದನ್ನು ಸಹ ಲಗತ್ತಿಸಿ ಕಳುಹಿಸಿದ್ದಾರೆ.
ರಾಜ್ಯ ದಳ ಅಧ್ಯಕ್ಷತೆಗೆ ಅನ್ಯರ ನೇಮಕ ಪಟೇಲ್ ಅಪೇಕ್ಷೆ
ಬೆಂಗಳೂರು, ಏ.15– ಪಕ್ಷದ ಸಂಘಟನೆಯನ್ನು ಚುರುಕಾಗಿ ಮತ್ತು ದಕ್ಷತೆಯಿಂದ ನಿಭಾಯಿಸಬಲ್ಲ ಹೊಸ ಅಧ್ಯಕ್ಷರನ್ನು ಸದ್ಯವೇ ಪ್ರದೇಶ ಜನತಾ ದಳಕ್ಕೆ ನೇಮಿಸಬೇಕಾದ ಅಗತ್ಯವನ್ನು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಇಂದು ಇಲ್ಲಿ ಪ್ರತಿಪಾದಿಸಿದರು.
ಪ್ರಸ್ತುತ ಕೇಂದ್ರ ನಾಗರಿಕ ವಿಮಾನಯಾನ ಹಾಗೂ ಪ್ರಸಾರ ಖಾತೆ ಸಚಿವ ಸಿ.ಎಂ.ಇಬ್ರಾಹಿಂ ಪಕ್ಷದ ಅಧ್ಯಕ್ಷರಾಗಿದ್ದಾರೆ.
‘ಪಕ್ಷದಲ್ಲಿ ಅಶಿಸ್ತು ಎನ್ನುವುದು ಅದರ ಬೇರನ್ನೇ ನುಂಗಿ ನೊಣೆಯತೊಡಗಿದೆ. ಅದನ್ನು ತಕ್ಷಣವೇ ನಿವಾರಿಸದೇ ಹೋದರೆ ಪಕ್ಷದ ಭವಿಷ್ಯಕ್ಕೆ ಭಾರಿ ಅನಾಹುತ ಕಾದಿದೆ’ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.