ತೀವ್ರ ವಿದ್ಯುತ್ ಬಿಕ್ಕಟ್ಟುಪ್ರಧಾನಿಗೆ ಗೌಡರ ವಿವರ
ನವದೆಹಲಿ, ನ. 27– ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಇಂದು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರನ್ನು ಭೇಟಿಯಾಗಿ, ಕರ್ನಾಟಕದಲ್ಲಿನ ವಿದ್ಯುತ್ ಅಭಾವ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ದಲಿತರ ಪ್ರತಿಭಟನೆ ಮತ್ತು ಅದರಿಂದ ಉಂಟಾಗಿರುವ ಕಾನೂನು ಮತ್ತು ಪರಿಸ್ಥಿತಿ ಬಗೆಗೆ ವಿವರಿಸಿದರು.
ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರದ ವಿದ್ಯುತ್ ಗ್ರಿಡ್ನಿಂದ ಪ್ರತಿನಿತ್ಯ 200 ಮೆಗಾವ್ಯಾಟ್ ವಿದ್ಯುತ್ ಪೂರೈಸಬೇಕೆಂದು ಈ ಹಿಂದೆ ಮಾಡಿದ್ದ ಮನವಿಯನ್ನು ದೇವೇಗೌಡರು ಪುನರುಚ್ಚರಿಸಿದರು.
ಸಿಬಿಐನಿಂದ ಮತ್ತೆಚಂದ್ರಸ್ವಾಮಿ ವಿಚಾರಣೆ
ನವದೆಹಲಿ, ನ. 27 (ಯುಎನ್ಐ)– ವಿವಾದಾತ್ಮಕ ಸಾಧು, ನೇಮಿಚಂದ್ರ ಜೈನ್ ಅಲಿಯಾಸ್ ಚಂದ್ರಸ್ವಾಮಿಯನ್ನು ಇಂದು ಸಿಬಿಐ ಅಧಿಕಾರಿಗಳು ಸುಮಾರು ಆರು ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿದರು. ಹಲವಾರು ಹಗರಣಗಳಲ್ಲಿ ಒಳಗೊಂಡಿರುವರೆನ್ನಲಾದ ಚಂದ್ರಸ್ವಾಮಿಯನ್ನು ಇಂದು ಮುಖ್ಯವಾಗಿ ಸೈಂಟ್ ಕಿಟ್ಸ್ ಫೋರ್ಜರಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು.
ಇದೇ ವೇಳೆ ಚಂದ್ರಸ್ವಾಮಿಯ ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.