ಟೆಲಿಕಾಂ ಹಗರಣ: ಜೆಪಿಸಿ ತನಿಖೆಗೆ ಪ್ರಧಾನಿ ನಕಾರ
ನವದೆಹಲಿ, ಡಿ. 20 (ಪಿಟಿಐ, ಯುಎನ್ಐ):ಟೆಲಿಕಾಂ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ತಳ್ಳಿಹಾಕಿದ್ದಾರೆ.
ಲೋಕಸಭೆಯಲ್ಲಿನ ವಿರೋಧ ಪಕ್ಷಗಳ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿಯವರು ಈ ವಿಷಯ ತಿಳಿಸಿದ್ದಾರೆ. ‘ಟೆಲಿಕಾಂ ವಿವಾದಕ್ಕೆ ಸಂಬಂಧಿಸಿದಂತೆ ಜೆಪಿಸಿ ತನಿಖೆ ಮಾಡಬೇಕಾದ ಅಗತ್ಯದ ಕುರಿತು ಪ್ರಧಾನಿಯವರ ಮನವೊಲಿಸಲು ನಾನು ವಿಫಲನಾಗಿದ್ದೇನೆ’ ಎಂದು ವಾಜಪೇಯಿ ಆನಂತರ ಹೇಳಿದರು.
ಕಾವೇರಿ: ಪ್ರತಿಪಕ್ಷ, ತಜ್ಞರ ಜತೆ ಚರ್ಚೆ ನಂತರವೇ ನಿರ್ಧಾರ
ಬೆಂಗಳೂರು, ಡಿ. 20:ಕಾವೇರಿ ಜಲ ವಿವಾದ ನ್ಯಾಯಮಂಡಲಿ ತಮಿಳುನಾಡಿಗೆ 11 ಟಿಎಂಸಿ ಅಡಿ ನೀರು ಬಿಡಲು ರಾಜ್ಯ ಸರ್ಕಾರಕ್ಕೆ ನೀಡಿರುವ ಆದೇಶದ ಬಗ್ಗೆ ಕಾನೂನು ತಜ್ಞರ ಹಾಗೂ ವಿರೋಧ ಪಕ್ಷಗಳ ಮುಖಂಡರ ಜತೆಗೆ ಚರ್ಚೆ ನಡೆಸುವವರೆಗೆ ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ನ್ಯಾಯಮಂಡಲಿಯ ಆದೇಶದ ಬಗ್ಗೆ ಕಾನೂನು ತಜ್ಞರ ಜತೆಗೆ ಚರ್ಚಿಸಿದ ನಂತರ ಎರಡು ಮೂರು ದಿನಗಳ ಒಳಗಾಗಿ ವಿರೋಧ ಪಕ್ಷಗಳ ಮುಖಂಡರ ಸಭೆಯನ್ನು ಕರೆಯಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.