ನ್ಯಾಯಮಂಡಲಿ ಆಜ್ಞೆ ಜಾರಿ ಕೋರಿ ತಮಿಳುನಾಡು ಅರ್ಜಿ
ನವದೆಹಲಿ, ಡಿ. 25– ತಮಿಳುನಾಡಿಗೆ ತುರ್ತಾಗಿ 11 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಡಬೇಕೆಂಬ ಕಾವೇರಿ ನ್ಯಾಯಮಂಡಲಿಯ ಆಜ್ಞೆಯನ್ನು ಜಾರಿಗೊಳಿಸಲು ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರವು ನಿರೀಕ್ಷೆಯಂತೆ ಇಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತು.
ನ್ಯಾಯಮಂಡಲಿಯು ಆಜ್ಞೆ ನೀಡಿ ಆರು ದಿನಗಳಾದರೂ ಕರ್ನಾಟಕವು ಆಜ್ಞೆಯನ್ನು ಪಾಲಿಸಿಲ್ಲ. ಮುಖ್ಯಮಂತ್ರಿ ಮತ್ತು ಕರ್ನಾಟಕದ ಇತರ ರಾಜಕಾರಣಿಗಳ ಹೇಳಿಕೆ ಪ್ರಕಾರ ತಮಿಳುನಾಡಿಗೆ ಕರ್ನಾಟಕವು ನೀರು ಬಿಡುವುದು ಅಸಂಭವವಿರುವುದರಿಂದ ನ್ಯಾಯಮಂಡಲಿಯ ಆಜ್ಞೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ತುರ್ತು ಆದೇಶ ನೀಡಬೇಕೆಂದು ಕೋರಲಾಗಿದೆ.
ಶಸ್ತ್ರ ಇಳಿಸಿದ ಪ್ರಕರಣ: ಪ್ರಧಾನಿ- ಚವಾಣ್ ಚರ್ಚೆ
ನವದೆಹಲಿ, ಡಿ. 25 (ಯುಎನ್ಐ)– ಕಳೆದ ವಾರ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ರಷ್ಯಾ ನಿರ್ಮಿತ ವಿಮಾನವೊಂದು ಶಸ್ತ್ರಾಸ್ತ್ರಗಳನ್ನು ಇಳಿಸಿರುವುದು ಮತ್ತು ಇನ್ನೊಂದು ವಿದೇಶಿ ವಿಮಾನ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಬಲವಂತವಾಗಿ ಇಳಿದ ಪ್ರಕರಣಗಳ ಹಿನ್ನೆಲೆಯಲ್ಲಿ ಮರುವಿಮರ್ಶಿಸಲು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಗೃಹ ಸಚಿವ ಎಸ್.ಬಿ. ಚವಾಣ್ ಅವರೊಂದಿಗೆ ಇಂದು ಮಾತುಕತೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.