ADVERTISEMENT

ಮಂಗಳವಾರ, 19–4–1994

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 20:00 IST
Last Updated 18 ಏಪ್ರಿಲ್ 2019, 20:00 IST

ನೌಕರಿ ಒದಗಿಸಬಲ್ಲ ತಂತ್ರಜ್ಞಾನ– ಪ್ರಧಾನಿ ಕರೆ
ನವದೆಹಲಿ, ಏ. 18 (ಯುಎನ್‌ಐ, ಪಿಟಿಐ)– ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲ ಉನ್ನತ ತಂತ್ರಜ್ಞಾನದ ಅಳವಡಿಕೆ ಅಗತ್ಯವಿದೆ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಕರೆ ಕೊಟ್ಟಿದ್ದಾರೆ.

ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡ ಕಡೆ ಅದರಲ್ಲೂ ಸಣ್ಣ ಪ್ರಮಾಣದ ಕೈಗಾರಿಕಾ ರಂಗಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಕ್ಕೆ ಬಾಧಕವೇನೂ ಇಲ್ಲ ಎಂದೂ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

ಕೈಗಾರಿಕಾ ಸಚಿವ ಖಾತೆ ಮತ್ತು ವಿಶ್ವ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಗಳು ಜಂಟಿಯಾಗಿ ಏರ್ಪಡಿಸಿದ್ದ ಭಾರತ ಬಂಡವಾಳ ಹೂಡಿಕೆ ಕುರಿತ ವಿಶಿಷ್ಟ ಸಮ್ಮೇಳನವನ್ನು ಉದ್ಘಾಟಿಸಿದ ಅವರು ‘ಉತ್ಪಾದನೆಯಲ್ಲಿ ಗುಣಮಟ್ಟಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅತಿ ಹೆಚ್ಚಿನ ಜನಕ್ಕೆ ಅತಿ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಆಶಯ’ ಎಂದು ಹೇಳಿದರು.

ADVERTISEMENT

ಗ್ಯಾಟ್ ಒಪ್ಪಂದಕ್ಕೆ ಪ್ರತಿಭಟನೆ: ರಾಜ್ಯಸಭೆ ಕಲಾಪ ಮುಂದಕ್ಕೆ
ನವದೆಹಲಿ, ಏ. 18 (ಯುಎನ್ಐ)– ಗ್ಯಾಟ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದನ್ನು ವಿರೋಧಿಸಿ ಪ್ರತಿಪಕ್ಷದವರು ಇಂದು ರಾಜ್ಯಸಭೆಯಲ್ಲಿ ತೀವ್ರ ಪ್ರತಿಭಟನೆ ಮಾಡಿದ್ದರಿಂದ ಉಂಟಾದ ಗದ್ದಲ, ಕೋಲಾಹಲಗಳ ನಡುವೆ ದಿನದ ಕಲಾಪವನ್ನು ಮುಂದಕ್ಕೆ ಹಾಕಲಾಯಿತು.

ಉದ್ರಿಕ್ತ ವಿರೋಧ ಪಕ್ಷದವರು, ‘ಈ ಒಪ್ಪಂದದಿಂದ ಭಾರತ ಹಿಂದೆ ಸರಿಯಬೇಕು. ಇದು ದೇಶದ ಹಿತಕ್ಕೆ ಪೂರಕವಲ್ಲ’ ಎಂದು ಕೂಗುತ್ತಾ ಸಭಾಪತಿಗಳ ಮುಂದಿನ ಅಂಗಳಕ್ಕೆ ಧಾವಿಸಿ ಬಂದಾಗ ಗದ್ದಲ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.