ಅಧಿಕಾರಿಗಳ ದಾಸ್ಯದಿಂದ ಗ್ಯಾಟ್ ಸಂಕಟ
ಬೆಂಗಳೂರು, ಮೇ 7– ಗ್ಯಾಟ್ ಒಪ್ಪಂದ ಅಂಗೀಕಾರ ವಿಷಯದಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೂ ಸೇರಿದಂತೆ ಉನ್ನತ ಹುದ್ದೆಗಳಲ್ಲಿರುವವರು ದಾಸ್ಯ ಮನೋಭಾವ ಹಾಗೂ ಸ್ವಹಿತಾಸಕ್ತಿಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರಸಿದ್ಧ ಪರಿಸರ ವಿಜ್ಞಾನಿ ಡಾ. ವಂದನಾಶಿವ ಇಂದು ಇಲ್ಲಿ ಆರೋಪಿಸಿದರು.
‘ನಿವೃತ್ತಿ ನಂತರ ಗ್ಯಾಟ್, ವಿಶ್ವಬ್ಯಾಂಕ್ ಇಲ್ಲವೇ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ ಭಾರೀ ಹುದ್ದೆ ಗಳಿಸುವ, ಮಕ್ಕಳು, ಸಂಬಂಧಿಗಳಿಗೆ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾರೀ ವೇತನದ ಹುದ್ದೆ ಅಥವಾ ಅಮೆರಿಕದ ‘ಗ್ರೀನ್ ಕಾರ್ಡ್’ ಕೊಡಿಸುವುದರಲ್ಲೇ ಈ ಎಲ್ಲರ ಆಸಕ್ತಿ’ ಎಂದು ಅವರು ಟೀಕಿಸಿದರು.
ಬೆಂಗಳೂರು ವರದಿಗಾರರ ಕೂಟದ ಆಶ್ರಯದಲ್ಲಿ ‘ಗ್ಯಾಟ್ ಒಪ್ಪಂದ–ಜೈವಿಕ ಹಾಗೂ ಜೈವ ತಾಂತ್ರಿಕ ಪರಿಣಾಮಗಳು’ ವಿಷಯ ಕುರಿತು ಮಾತನಾಡಿದ ಅವರು, ‘ನಮ್ಮ ಅಧಿಕಾರಸ್ಥರು ದೇಶದ ನಾಯಕರಾಗಿ ಅಥವಾ ಇಲ್ಲಿನ ಜವಾಬ್ದಾರಿಯುತ ಪ್ರಜೆಗಳಾಗಿ ನಡೆದುಕೊಳ್ಳುತ್ತಿಲ್ಲ’ ಎಂದು ದೂರಿದರು.
ಜಹೀರುದ್ದೀನ್ ಡಾಗರ್ ನಿಧನ
ನವದೆಹಲಿ, ಮೇ 7 (ಯುಎನ್ಐ)– ದ್ರುಪದ್ ಶೈಲಿಯ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ ಉಸ್ತಾದ್ ಜಹೀರುದ್ದೀನ್ ಡಾಗರ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.