ಮಳೆಯ ಅಬ್ಬರ ಇಳಿಮುಖ
ಬೆಂಗಳೂರು, ಜುಲೈ 16– ಆರೇಳು ದಿನಗಳಿಂದ ಒಂದೇ ಸಮನೆ ಸುರಿಯುತ್ತ ಅಪಾರ ಆಸ್ತಿ–ಪಾಸ್ತಿ ಹಾಗೂ ಜೀವ ಜಗತ್ತನ್ನು ಮಡಿಲಿಗೆ ಸೇರಿಸಿಕೊಂಡು ರಾಜ್ಯದ ಎಂಟು ಜಿಲ್ಲೆಗಳನ್ನು ತತ್ತರಿಸುವಂತೆ ಮಾಡಿದ್ದ ಮಳೆಯ ಅಬ್ಬರ ಇಳಿದು ಇಂದು ಜನರನ್ನು ಒಂದಿಷ್ಟು ನಿರಾಳವಾಗಿ ಉಸಿರಾಡುವಂತೆ ಮಾಡಿದೆ.
ತುಂಗಭದ್ರಾ ಭರ್ತಿ: ನೀರು ಹೊರಕ್ಕೆ
ಬಳ್ಳಾರಿ, ಜುಲೈ 16– ತುಂಗಭದ್ರಾ ಜಲಾಶಯ ಈಗ ತುಂಬಿದ್ದು ಇಂದು ಮಧ್ಯಾಹ್ನ 3 ಗಂಟೆಗೆ 30 ಕ್ರೆಸ್ಟ್ ಗೇಟ್ ತೆರೆದು ಸುಮಾರು 1.55 ಲಕ್ಷ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಜಲಾಶಯ ಇದೇ ಮೊದಲ ಬಾರಿಗೆ ಭರ್ತಿಯಾಗಿದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನೀರಿನ ಪ್ರಮಾಣ ಹೆಚ್ಚಳವಾಗ ಬಹುದೆಂದು ನಿರೀಕ್ಷಿಸಲಾಗಿದೆ.
ಕದ್ದಾಲಿಕೆ ಇಲ್ಲ: ಮೊಯಿಲಿ ಸ್ಪಷ್ಟನೆ
ಬೆಂಗಳೂರು, ಜುಲೈ 16– ‘ನನಗೆ ಗೊತ್ತಿರುವಂತೆ ಹಾಗೂ ಗೊತ್ತಿಲ್ಲದಂತೆಯೂ ಯಾವುದೇ ರಾಜಕಾರಣಿಗಳ ಹಾಗೂ ಸುದ್ದಿಗಾರರ ದೂರವಾಣಿಯನ್ನು ಕದ್ದಾಲಿಸಲು ರಾಜ್ಯ ಸರ್ಕಾರ ಕೋರಿಲ್ಲ. ನಾನು ಈ ಸ್ಥಾನದಲ್ಲಿ ಇರುವವರೆಗೂ ಜನತಂತ್ರ ವ್ಯವಸ್ಥೆಗೆ ಮಾರಕವಾದ ಅಂತಹ ಕೃತ್ಯಕ್ಕೆ ಅವಕಾಶ ಕೊಡಲಾರೆ’ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ಇಲ್ಲಿ ಹೇಳಿದರು.
ಸಚಿವ ಸಂಪುಟದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಂತಹ ಪಾಪವನ್ನು ಮಾಡಿ ಅಧಿಕಾರದಲ್ಲಿ ಉಳಿಯುವ ಅಗತ್ಯ ನನಗಿಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.