ನಿಲ್ಲದ ಮಳೆ, ಸಾವಿನ ಸಂಖ್ಯೆ 41ಕ್ಕೆ– ಸಾವಿರಾರು ಜನರಿಗೆ ಮನೆ ನಷ್ಟ
ಬೆಂಗಳೂರು, ಜುಲೈ 15– ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಿನ್ನೆ ರಾತ್ರಿಯಿಂದೀಚೆಗೆ ಆರು ಮಂದಿ ಬಲಿಯಾಗಿದ್ದಾರೆ. ಇದುವರೆಗೆ ಮಳೆಯಿಂದ ಸತ್ತವರ ಸಂಖ್ಯೆ 41ಕ್ಕೆ ಏರಿದೆ. ಪ್ರವಾಹದಿಂದ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಭಾರತ–ಪಾಕ್ ಮಾತುಕತೆ ಅಸಂಭವ
ನವದೆಹಲಿ, ಜುಲೈ 15 (ಪಿಟಿಐ, ಯುಎನ್ಐ)– ‘ಅಸಾಧ್ಯ ಪೂರ್ವಷರತ್ತು’ ಗಳನ್ನು ವಿಧಿಸುವ ಮೂಲಕ ದ್ವಿಪಕ್ಷೀಯ ಮಾತುಕತೆಗಳಿಗೆ ಪಾಕಿಸ್ತಾನ ಅಡ್ಡಿಯುಂಟು ಮಾಡುತ್ತಿದೆ ಎಂದು ಭಾರತ ಇಂದು ಆರೋಪಿಸಿತು. ಮಾತುಕತೆಗಳ ಸಂಬಂಧ ಇಸ್ಲಾಮಾಬಾದ್ನ ನಡವಳಿಕೆಯನ್ನು ಗಮನಿಸಿದರೆ ಮಾತುಕತೆ ಶೀಘ್ರದಲ್ಲಿ ಪುನರಾರಂಭವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಶ್ರೀನಿವಾಸನ್ ಸುದ್ದಿಗಾರರಿಗೆ ತಿಳಿಸಿದರು.
ಎಡದಂಡೆ ಕಾಲುವೆ ಬಿರುಕು: ತನಿಖೆಗೆ ಸಮಿತಿ
ರಾಯಚೂರು, ಜುಲೈ 15– ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 10ನೇ ಮೈಲಿಯಲ್ಲಿ ಕಾಣಿಸಿಕೊಂಡ ಬಿರುಕಿಗೆ ಕಾರಣವಾದ ಅಂಶಗಳ ತನಿಖೆಗೆ ನೀರಾವರಿ ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿ ನೀರಾವರಿ ಇಲಾಖೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.