ADVERTISEMENT

ಭಾನುವಾರ, 18–9–1994

ಭಾನುವಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 17:12 IST
Last Updated 17 ಸೆಪ್ಟೆಂಬರ್ 2019, 17:12 IST

ಮೀಸಲು ಪ್ರಮಾಣ ಶೇ 69– 73 ಮೊಯಿಲಿ ಇಂಗಿತ

ಬೆಂಗಳೂರು, ಸೆ. 17– ಹಿಂದುಳಿದ ವರ್ಗಗಳಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಉದ್ದೇಶಿತ ಮೀಸಲು ಪ್ರಮಾಣವನ್ನು ಒಟ್ಟು ಶೇಕಡ 80ರಿಂದ ಇಳಿಸಿ ಶೇಕಡ 69ರಿಂದ 73ರ ನಡುವೆ ನಿಗದಿಗೊಳಿಸುವ ಸಾಧ್ಯತೆಗಳಿವೆ.

ಶೇಕಡ 80ಕ್ಕಿಂತ ಕಡಿಮೆಗೊಳಿಸುವ ಸಾಧ್ಯತೆಗಳಿರುವ ಬಗ್ಗೆ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಇಂಗಿತ ನೀಡಿದರು. ಮೀಸಲಾತಿ ಪ್ರಮಾಣ ಶೇಕಡ 50ರಷ್ಟು ಇರಲು ಸಾಧ್ಯವಿಲ್ಲ. ಅದನ್ನು ಹೆಚ್ಚು ಮಾಡಲೇಬೇಕು. ಹಾಗೆಯೇ ಅದು ಶೇಕಡ 69ಕ್ಕಿಂತ ಕಡಿಮೆ ಇರಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಹಿಂದಿನಿಂದಲೂ ಶೇಕಡ 73ರಷ್ಟು ಮೀಸಲಾತಿ ಇದ್ದುಕೊಂಡೇ ಬಂದಿದೆ ಎಂದರು.

ADVERTISEMENT

ಮಹತ್ವದ ನೀತಿ– ಶೇಷನ್ ಎಚ್ಚರಿಕೆ

ಕಲ್ಕತ್ತ, ಸೆ. 17– ಶೀಘ್ರದಲ್ಲೇ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಆಡಳಿತ ಪಕ್ಷಗಳಿಗೆ ಅನುಕೂಲ ಮಾಡಿಕೊಡುವ ನೀತಿ ನಿರ್ಧಾರಗಳು ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನ ಪ್ರಕಟವಾದರೂ ಸಂವಿಧಾನದ 324ನೇ ವಿಧಿಯ ಅನ್ವಯ ‘ಸೂಕ್ತ ಕ್ರಮ’ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್. ಶೇಷನ್ ಇಂದು ಇಲ್ಲಿ ಹೇಳಿದರು.

ವೀರಪ್ಪನ್– ಕಾರ್ಯಪಡೆ ಘರ್ಷಣೆ: ಮೂವರು ಪೊಲೀಸರ ಸಾವು

ಸೇಲಂ, ಸೆ. 17 (ಯುಎನ್‌ಐ)– ಪೆರಿಯಾರ್ ಜಿಲ್ಲೆಯ ಹಾಸನೂರ್ ಅರಣ್ಯದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ ತಂಡ ಹಾಗೂ ಗಡಿ ಭದ್ರತಾ ಪಡೆ ಹಾಗೂ ಕರ್ನಾಟಕ, ತಮಿಳುನಾಡು ವಿಶೇಷ ಕಾರ್ಯಪಡೆಯ ಮಧ್ಯೆ ಇಂದು ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್‌ನ ಒಬ್ಬ ಯೋಧ ಹಾಗೂ ತಮಿಳುನಾಡು ವಿಶೇಷ ಕಾರ್ಯಪಡೆ ಮತ್ತು ವಿಶೇಷ ಭದ್ರತಾ ತಂಡದ ಇಬ್ಬರು ಸೈನಿಕರು ಮೃತಪಟ್ಟರು. ಐವರು ಸೈನಿಕರು ಗಾಯಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.