ಕಡ್ಡಾಯ ಮತದಾನ ಅಗತ್ಯವಿಲ್ಲ– ಶೇಷನ್
ತಿರುವನಂತಪುರ, ನ. 7 (ಯುಎನ್ಐ)– ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕೆಂಬ ಅಭಿಪ್ರಾಯಕ್ಕೆ ತಾವು ಪರವಾಗಿಲ್ಲ ಎಂದು ಮುಖ್ಯ ಚುನಾವಣಾ ಕಮಿಷನರ್ ಟಿ.ಎನ್. ಶೇಷನ್ ಅವರು ನುಡಿದಿದ್ದಾರೆ.
ಭಾರತದಲ್ಲಿ ಮತದಾನದ ಶೇಕಡಾವಾರು ಪ್ರಮಾಣವು ವಿಶ್ವದಲ್ಲೇ ಅತ್ಯಧಿಕವಾಗಿದೆ. ಈ ವ್ಯವಸ್ಥೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕಾದ ಅನಿವಾರ್ಯ ಏನೂ ಇಲ್ಲ ಎಂದು ಅವರು ಹೇಳಿದರು.
ಷೇರು ಹಗರಣ: ಶಂಕರಾನಂದ, ಠಾಕೂರ್ ವಿರುದ್ಧ ಕ್ರಮಕ್ಕೆ ಕೇಂದ್ರ ನಕಾರ
ನವದೆಹಲಿ, ನ. 7– ಷೇರು ಹಗರಣದಲ್ಲಿ ತಪ್ಪಿತಸ್ಥರು ಎಂದು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಆರೋಪಿಸಿರುವ ಇಬ್ಬರು ಕೇಂದ್ರ ಸಚಿವರುಗಳಾದ ಬಿ. ಶಂಕರಾನಂದ ಹಾಗೂ ರಾಮೇಶ್ವರ ಠಾಕೂರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಪ್ರತಿಪಕ್ಷಗಳ ಆಗ್ರಹವನ್ನು ಸರ್ಕಾರ ಇಂದು ತಳ್ಳಿಹಾಕಿತು.
ಇವರಿಬ್ಬರೂ ತಪ್ಪೆಸಗಿದ್ದಾರೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ ಎಂಬುದು ಸರ್ಕಾರದ ವಾದವಾಗಿದೆ. ಅದೇ ರೀತಿ, ಹಗರಣದಲ್ಲಿ ಮುಖ್ಯ ಪಾತ್ರ ವಹಿಸಿದ ಐದು ವಿದೇಶಿ ಬ್ಯಾಂಕುಗಳ ಮೇಲೆ ಕ್ರಮ ಕೈಗೊಳ್ಳಲು ಸಹ ಅದು ನಿರಾಕರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.