ADVERTISEMENT

25 ವರ್ಷಗಳ ಹಿಂದೆ: ಕುವೆಂಪು ನಿಧನರಾದದ್ದು ಇದೇ ದಿನ

ಗುರುವಾರ, 10–11–1994

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:34 IST
Last Updated 9 ನವೆಂಬರ್ 2019, 19:34 IST

ಕುವೆಂಪು ನಿಧನ
ಮೈಸೂರು, ನ. 9– ‘
ರಾಷ್ಟ್ರಕವಿ’, ‘ಪದ್ಮಭೂಷಣ’ ಕುವೆಂಪು (ಡಾ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಅವರು ಇಂದು ಮಧ್ಯರಾತ್ರಿ ಸ್ವಗೃಹ ಉದಯರವಿಯಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಕಳೆದ ಎರಡು ವರ್ಷಗಳಿಂದ ಅವರು ಅಸ್ವಸ್ಥರಾಗಿದ್ದರು. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಅನನ್ಯ ಕೃಷಿ ನಡೆಸಿರುವ ಕುವೆಂಪು ಅವರ ಮೇರು ಕೃತಿ ‘ರಾಮಾಯಣ ದರ್ಶನಂ’.

‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಅವರ ಸ್ಮರಣೀಯ ಬೃಹತ್ ಕಾದಂಬರಿಗಳು.

ADVERTISEMENT

ಕ್ರಿಯಾವರದಿ: ಸರ್ಕಾರ–ಪ್ರತಿಪಕ್ಷ ಗುದ್ದಾಟ
ನವದೆಹಲಿ, ನ. 9 (ಯುಎನ್‌ಐ, ಪಿಟಿಐ)– ಕೋಟ್ಯಂತರ ರೂಪಾಯಿಗಳ ಷೇರು ಹಗರಣ ಕುರಿತಂತೆ ಜಂಟಿ ಸಂಸದೀಯ ಸಮಿತಿ ನೀಡಿದ ವರದಿಯ ಮೇಲಿನ ಪರಿಷ್ಕೃತ ಕ್ರಿಯಾ ವರದಿಯ ಕಗ್ಗಂಟು ಪರಿಹಾರಕ್ಕೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಇಂದು ನಡೆದ ಮಾತುಕತೆಯಲ್ಲಿ ಯಾವುದೇ ಒಮ್ಮತ ಇರಲಿಲ್ಲ.

ಇದರಿಂದಾಗಿ ಹಣಾಹಣಿ ಮುಂದುವರಿಯುವ ಸೂಚನೆಗಳು ಕಂಡು ಬಂದಿವೆ.

ಈ ಮಧ್ಯೆ ಸಂಸತ್ತಿನ ಚಳಿಗಾಲದ ಅಧಿವೇಶನ ಬಹಿಷ್ಕರಿಸುವುದಾಗಿ ಬಿಜೆಪಿ ಬೆದರಿಕೆ ಹಾಕಿದೆ.

ಕೆರೆ ದಂಡೆಯಲ್ಲಿ ಕ್ರೀಡಾಗ್ರಾಮ: ಪರಿಸರಕ್ಕೆ ಧಕ್ಕೆ
ಬೆಂಗಳೂರು, ನ. 9– ಕೋರಮಂಗಲದ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಲಿಯ ಹಿಂಭಾಗದ ಕೆರೆಯ ದಂಡೆಯಲ್ಲಿ 1996ರ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಗಮಿಸುವ ಕ್ರೀಡಾಪಟುಗಳಿಗಾಗಿ ಬಹುಮಹಡಿ ವಸತಿ ಸಮುಚ್ಛಯ (ಅಪಾರ್ಟ್‌ಮೆಂಟ್) ನಿರ್ಮಿಸುವ ರಾಜ್ಯ ಸರ್ಕಾರದ ಸನ್ನಾಹ ಸರ್ಕಾರದ ಪರಿಸರ ಕಾಳಜಿಯ ಬಗ್ಗೆ ಸಂಶಯದ ಅಲೆಯೆಬ್ಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.