ಖಾಸಗಿಗೆ ಟೆಲಿಕಾಂ– ಸುಪ್ರೀಂ ಕೋರ್ಟ್ ಅಸ್ತು
ನವದೆಹಲಿ, ಫೆ. 19 (ಯುಎನ್ಐ, ಪಿಟಿಐ)– ಸುಪ್ರೀಂ ಕೋರ್ಟ್ ಇಂದು ಮೂಲ ದೂರಸಂಪರ್ಕ ಸೇವೆಯನ್ನು ರಾಷ್ಟ್ರದಲ್ಲಿ ಖಾಸಗೀಕರಣಗೊಳಿಸುವ ಕೇಂದ್ರದ ನೀತಿಯನ್ನು ಎತ್ತಿ ಹಿಡಿದಿದೆ.
ದೂರಸಂಪರ್ಕ ಸೇವೆಯ ಖಾಸಗೀಕರಣವನ್ನು ಪ್ರಶ್ನಿಸಿ ದೆಹಲಿ ವಿಜ್ಞಾನ ವೇದಿಕೆ, ನಾಗರಿಕ ಹಕ್ಕುಗಳ ಸಂಘಟನೆ, ನೀಲ್ಬೊಲ ಬಾಸು ಅವರ ನೇತೃತ್ವದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಇತರರ ಅರ್ಜಿಗಳನ್ನು ನ್ಯಾಯಾಲಯ ವಜಾ ಮಾಡಿದೆ.
‘ಇದು ಸತ್ಯಕ್ಕೆ ಸಂದ ದೊಡ್ಡ ಜಯ’ ಎಂದು ತೀರ್ಪಿಗೆ ಪ್ರತಿಕ್ರಿಯೆ ನೀಡಿದ ದೂರಸಂಪರ್ಕ ಖಾತೆಯ ಸಚಿವ ಸುಖರಾಂ ಅವರು, ಖಾಸಗಿಯವರಿಗೆ ಪರವಾನಗಿ ನೀಡುವುದನ್ನು ಸರ್ಕಾರ ನಾಳೆಯಿಂದಲೇ ಮುಂದುವರಿಸಲಿದೆ ಎಂದರು.
ರಾಜ್ಯಸಭೆಗೆ ಕೃಷ್ಣ, ಹೆಗಡೆ,ಇಬ್ರಾಹಿಂ, ಲೀಲಾದೇವಿ ಆಯ್ಕೆ
ಬೆಂಗಳೂರು, ಫೆ. 19– ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್(ಐ)ನ ಎಸ್.ಎಂ. ಕೃಷ್ಣ, ಜನತಾದಳದ ರಾಮಕೃಷ್ಣ ಹೆಗಡೆ,ಸಿ.ಎಂ.ಇಬ್ರಾಹಿಂ ಮತ್ತು ಲೀಲಾದೇವಿ ಆರ್. ಪ್ರಸಾದ್ ಅವರು ಚುನಾಯಿತರಾಗಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಿ.ವೈ. ಕೃಷ್ಣನ್, ಐ.ಜಿ. ಸನದಿ, ಪ್ರಭಾಕರ್ ಕೋರೆ, ಬಿ.ಕೆ. ಹರಿಪ್ರಸಾದ್ ಅವರ ಅವಧಿ ಏಪ್ರಿಲ್ 9ರಂದು ಅಂತ್ಯವಾಗುವುದರಿಂದ ಈ ಚುನಾವಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.