ಜೆ.ಎಚ್.ಪಟೇಲ್ ನೂತನ ಮುಖ್ಯಮಂತ್ರಿ
ಬೆಂಗಳೂರು, ಮೇ 30- ದಿನವಿಡೀ ನಡೆದ ಅನಿರೀಕ್ಷಿತ ನಾಟಕೀಯ ಬೆಳವಣಿಗೆ ನಂತರ ನೂತನ ಮುಖ್ಯಮಂತ್ರಿಯಾಗಿ ಜಯದೇವಪ್ಪ ಹಾಲಪ್ಪ ಪಟೇಲ್ ಹಾಗೂ ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಗೊಂಡರು.
ನಿಯೋಜಿತ ಪ್ರಧಾನಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ರಾತ್ರಿ ಮತ್ತೆ ಸೇರಿದ ಜನತಾದಳದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಸಭೆ ಒಕ್ಕೊರಲಿನಿಂದ ಅನುಮೋದನೆ ನೀಡಿತು.
ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಏರ್ಪಟ್ಟ ಕಾರಣ, ಬೆಳಗಿನಿಂದ ರಾತ್ರಿಯವರೆವಿಗೂ ವಿವಿಧ ಬಣಗಳ ಮುಖಂಡರು ಹಾಗೂ ಶಾಸಕರ ಜತೆಗೆ ಪಕ್ಷದ ನಾಯಕರು ಎಡೆಬಿಡದೆ ಸಮಾಲೋಚನೆ ನಡೆಸಿ, ಸಂಜೆಯ ಹೊತ್ತಿಗೆ ಸರ್ವಸಮ್ಮತವಾದ ನಿಲುವಿಗೆ ಬಂದರು.
ಜೂನ್ 7ಕ್ಕೆ ದೇವೇಗೌಡರಿಂದ ವಿಶ್ವಾಸಮತ?
ನವದೆಹಲಿ, ಮೇ 30– ನೂತನ ಪ್ರಧಾನಿಯಾಗಿ ಜೂನ್ 1ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಎಚ್.ಡಿ. ದೇವೇಗೌಡ ಅವರು ಏಳರಂದು ಲೋಕಸಭೆಯಲ್ಲಿ ವಿಶ್ವಾಸಮತ ಪಡೆಯಲಿ ದ್ದಾರೆಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.
ವಾಜಪೇಯಿ ಅವರು ರಾಜೀನಾಮೆ ನೀಡಿದ ನಂತರ ಸಂಯುಕ್ತ ರಂಗ ಮತ್ತು ಕಾಂಗ್ರೆಸ್ನ 311 ಸದಸ್ಯರ ಬೆಂಬಲ ಹೊಂದಿರುವ ದೇವೇಗೌಡ ಅವರನ್ನು ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರು ಸರ್ಕಾರ ರಚಿಸಲು ಕಳೆದ ಮಂಗಳವಾರ ರಾತ್ರಿ ಆಮಂತ್ರಿಸಿ, ಜೂನ್ 12ರೊಳಗೆ ವಿಶ್ವಾಸಮತ ಪಡೆಯಲು ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.