ರಾಜ್ಯದ ಭೂ ಸುಧಾರಣೆ ತಿದ್ದುಪಡಿಗೆ ಕೇಂದ್ರ ಆಕ್ಷೇಪ
ನವದೆಹಲಿ, ಅ. 21 (ಪಿಟಿಐ)– ಕರ್ನಾಟಕ ಭೂ ಸುಧಾರಣಾ ಕಾಯ್ದೆ (1995) ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಅನುಮತಿ ನೀಡಿರುವುದನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ.
ಗ್ರಾಮೀಣ ಪ್ರದೇಶ ಮತ್ತು ಉದ್ಯೋಗ ಸಚಿವ ಡಾ. ಜಗನ್ನಾಥ ಮಿಶ್ರಾ ಅವರು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಪತ್ರವೊಂದನ್ನು ಬರೆದು, ಈ ವಿಷಯವನ್ನು ಗಂಭೀರವಾಗಿ ಪರಿಶೀಲಿ ಸುವಂತೆ ಕೋರಿದ್ದಾರೆ.
ರಾಷ್ಟ್ರೀಯ ಭೂ ಸುಧಾರಣಾ ನೀತಿ ಜಾರಿಯಲ್ಲಿರುವಾಗ, ಪ್ರತ್ಯೇಕ ತಿದ್ದುಪಡಿ ಗಳನ್ನು ತರಲು ರಾಜ್ಯಗಳಿಗೆ ಅನುಮತಿ ನೀಡಬಾರದು. ರಾಷ್ಟ್ರೀಯ ಭೂ ಸುಧಾರಣಾ ಕಾಯ್ದೆಯಿಂದ ಪ್ರತ್ಯೇಕವಾಗಿ ಹೋಗಲು ರಾಜ್ಯಗಳಿಗೆ ಅನುಮತಿ ನೀಡಿ ದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸ್ಥಿತಿ ತಲೆದೋರಿ ‘ಅರಾಜಕತೆ’ ಉಂಟಾಗ ಬಹುದು ಎಂದು ಮಿಶ್ರಾ ತಮ್ಮ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸುರೇಶ್ ಮೆಹ್ತಾ: ಗುಜರಾತ್ ನೂತನ ಮುಖ್ಯಮಂತ್ರಿ
ಗಾಂಧಿನಗರ, ಅ. 21 (ಪಿಟಿಐ)– ಸುರೇಶ್ ಮೆಹ್ತಾ ಅವರು ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಇದರಿಂದ ಕಳೆದ ಇಪ್ಪತ್ತೈದು ದಿನಗಳಿಂದ ರಾಜ್ಯದಲ್ಲಿದ್ದ ರಾಜಕೀಯ ಬಿಕ್ಕಟ್ಟು ಕೊನೆಗೊಂಡಂತಾಗಿದೆ.
ಇಂದು ನಡೆದ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುರೇಶ್ ಮೆಹ್ತಾ ಅವರು ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಕೆ.ಎಲ್. ಶರ್ಮ, ಪ್ರಮೋದ್ ಮಹಾಜನ್ ಮತ್ತು ಜಸವಂತ್ ಸಿಂಗ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.