ಶನಿವಾರ–17–7–1999
ಮಥುರಾ ಬಳಿ ರೈಲುಗಳ ಡಿಕ್ಕಿ: 18 ಸಾವು, 185 ಮಂದಿಗೆ ಗಾಯ
ನವದೆಹಲಿ, ಜುಲೈ 16 (ಯುಎನ್ಐ)– ಹಳಿ ತಪ್ಪಿದ ಗೂಡ್ಸ್ ರೈಲಿನ ಬೋಗಿಗಳಿಗೆ ಚೆನ್ನೈ– ದೆಹಲಿ ಜಿ.ಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಕನಿಷ್ಠ 18 ಮಂದಿ ಸತ್ತು, 185ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ದುರ್ಘಟನೆ ಕೇಂದ್ರ ರೈಲ್ವೆಯ ಮಥುರಾ– ಆಗ್ರಾ ಸೆಕ್ಷನ್ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಉತ್ತರ ಪ್ರದೇಶದ ಝಾನ್ಸಿ ವಿಭಾಗದ ಫರ್ಹಾಬಾದ್ ವಿಭಾಗದಲ್ಲಿ ಹಳಿ ತಪ್ಪಿ ಮಾರ್ಗದಲ್ಲಿ ಅಡ್ಡಲಾಗಿ ಬಿದ್ದಿದ್ದ ಗೂಡ್ಸ್ ರೈಲಿನ ಬೋಗಿಗಳಿಗೆ ಈ ನತದೃಷ್ಟ ರೈಲು ಮುಂಜಾನೆ 2.14ರ ವೇಳೆಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ.
ಆಗ್ರಾ ಹಾಗೂ ಮಥುರಾದ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಈ ನಡುವೆ ಬಹುತೇಕ ಗಾಯಾಳುಗಳನ್ನು ವಿಶೇಷ ರೈಲಿನಲ್ಲಿ ನವದೆಹಲಿಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.
ಪಟೇಲ್ ದಿಢೀರ್ ನಿಲುವು
ದಳದಲ್ಲಿ ತೀವ್ರ ಗೊಂದಲ
ಬೆಂಗಳೂರು, ಜುಲೈ 16– ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ
ವನ್ನು ಸೇರುವುದಕ್ಕೆ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ತಾತ್ವಿಕ ಒಪ್ಪಿಗೆ ಸೂಚಿಸಿರುವುದು ರಾಜ್ಯ ಜನತಾದಳದ ನಾಯಕರಲ್ಲಿ ತೀವ್ರ ಗೊಂದಲ, ತಳಮಳ ಉಂಟು ಮಾಡಿದೆ.
ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ರಾಜ್ಯ ಜನತಾದಳ ರಾಜಕೀಯವಾಗಿ ಮುಂದೆ ಇಡಬೇಕಾದ ಹೆಜ್ಜೆಯ ಬಗ್ಗೆ ಮುಖ್ಯಮಂತ್ರಿ
ಪಟೇಲ್ ಅವರು ಹಠಾತ್ತಾಗಿ ಪ್ರಕಟಿಸಿರುವ ನಿರ್ಧಾರದಿಂದ ಆಘಾತಗೊಂಡಿರುವ ದಳದ ಮುಖಂಡರು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಲೂ ಆಗದ
ಪರಿಸ್ಥಿತಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.