25 ವರ್ಷಗಳ ಹಿಂದೆ ಈ ದಿನ
ಉಗ್ರರ ತೆರವು ನಂತರ ಚರ್ಚೆ: ಭಾರತ ಸ್ಪಷ್ಟನೆ
ನವದೆಹಲಿ, ಜೂನ್ 27– ಪಾಕಿಸ್ತಾನವು ಶಸ್ತ್ರ ಸಜ್ಜಿತ ಅತಿಕ್ರಮಣಕಾರರನ್ನು ಕಾರ್ಗಿಲ್ನಿಂದ ವಾಪಸ್ ಕರೆಸಿಕೊಳ್ಳುವ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡರೆ ಮಾತ್ರ ಆ ರಾಷ್ಟ್ರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭಾರತವು ಅಮೆರಿಕಕ್ಕೆ ಸ್ಪಷ್ಟವಾಗಿ ಹೇಳಿದೆ.
ಈ ನಡುವೆ, ಕಾರ್ಗಿಲ್ ವಲಯದೊಳಕ್ಕೆ ನುಸುಳಿರುವ ಪಾಕಿಸ್ತಾನಿ ಸೈನಿಕರು ಮತ್ತು ಅತಿಕ್ರಮಣಕಾರರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ಯಾವುದೇ ಸೂತ್ರವನ್ನು ಅಮೆರಿಕವು ಭಾರತದ ಮುಂದಿಟ್ಟಿಲ್ಲ.
ಅಮೆರಿಕದ ವಿದೇಶಾಂಗ ಖಾತೆ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಗಿಬ್ಸನ್ ಲ್ಯಾಂಫೆರ್ ಇಂದು ಇಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದರು.
ಭಿನ್ನರನ್ನು ಹೊರದಬ್ಬಲು ದಳ ತೀರ್ಮಾನ
ಬೆಂಗಳೂರು, ಜೂನ್ 27– ಪಕ್ಷದಲ್ಲಿ ಇದ್ದುಕೊಂಡೇ ಬೇರೆ ಪಕ್ಷಗಳಿಗೆ ಜಿಗಿಯಲು ತುದಿಗಾಲಲ್ಲಿ ನಿಂತಿರುವವರಿಗೆ ಬಾಗಿಲು ತೆಗೆದು ಹೊರ ಕಳುಹಿಸಲು ಜನತಾದಳ ಸದ್ಯದಲ್ಲೇ ನಿರ್ಣಯ ಕೈಗೊಳ್ಳಲಿದೆ.
ಜನತಾದಳ ಶಾಸಕಾಂಗ ಪಕ್ಷ ಸದ್ಯದಲ್ಲೇ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಂಸತ್ ಸದಸ್ಯ ಖಮರುಲ್ ಇಸ್ಲಾಂ ಅವರಿಗೆ ಪಕ್ಷ ಬಿಟ್ಟು ಹೋಗಲು ನಾಳೆಯೇ ಕಟ್ಟುನಿಟ್ಟಿನ ಆದೇಶ ನೀಡುವ ಸಾಧ್ಯತೆ ಇದೆ.
ಇತರೆ ಪಕ್ಷಗಳ ಜತೆಗೆ ಹೊಂದಾಣಿಕೆ ವಿಚಾರದಲ್ಲಿ ಪಕ್ಷದ ಕೆಲವು ಮಂದಿ ನಾನಾ ರೀತಿಯ ಹೇಳಿಕೆಗಳನ್ನು ಕೊಟ್ಟು ಗೊಂದಲ ಸೃಷ್ಟಿಸಿರುವ ನಿಟ್ಟಿನಲ್ಲಿ ಪಕ್ಷದ ಮೇಲೆ ಆಗಿರುವ ಪರಿಣಾಮ ಕುರಿತಂತೆ ಮಾಜಿ ಪ್ರಧಾನಿ
ಎಚ್.ಡಿ. ದೇವೇಗೌಡ, ಕೇಂದ್ರದ ಮಾಜಿ ಸಚಿವ ಎಸ್.ಆರ್. ಬೊಮ್ಮಾಯಿ, ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹಾಗೂ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು ಇಂದು ಸುದೀರ್ಘ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.