ನಕಲಿ ಜಾತಿ ಪ್ರಮಾಣಪತ್ರಪ್ರಕರಣಗಳು ಸಿಒಡಿ ತನಿಖೆಗೆ
ಬೆಂಗಳೂರು, ಆ. 18– ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರಗಳ ಮೂಲಕ ಪರಿಶಿಷ್ಟ ವರ್ಗದ ಸವಲತ್ತು ಪಡೆಯಲು ಯತ್ನಿಸಿರುವ 1,130 ಪ್ರಕರಣಗಳನ್ನು ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ರಮೇಶ ಸಿ. ಜಿಗಜಿಣಗಿ ಇಂದು ಇಲ್ಲಿ ತಿಳಿಸಿದರು.
ಖೋಟಾ ದಾಖಲೆಗಳನ್ನು ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿ ಅನುಕೂಲ ಪಡೆಯಲು ಯತ್ನಿಸಿರುವ ಈ ಪ್ರಕರಣಗಳು ಅರ್ಜಿಗಳ ಪರಿಶೀಲನಾ ಸಮಯದಲ್ಲಿ ಪತ್ತೆಯಾಗಿವೆ. ಆದರೆ, ಇಂಥ ಪ್ರಕರಣಗಳು ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆದಿರುವ ಬಗ್ಗೆ ವರದಿ ಆಗಿಲ್ಲ ಎಂದು ಅವರು ಹೇಳಿದರು.
ಕರಡು ಕೃಷಿ ನೀತಿಗೆಸಂಪುಟ ಅಂಗೀಕಾರ
ಬೆಂಗಳೂರು, ಆ. 18– ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡಿಕೆ, ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬ ಪ್ರಮುಖ ಶಿಫಾರಸು ಒಳಗೊಂಡ ಕರಡು ಕೃಷಿ ನೀತಿಯನ್ನು ಸಚಿವ ಸಂಪುಟ ಸಭೆ ಇಂದು ಅಂಗೀಕರಿಸಿತು.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಈಗಾಗಲೇ ಕರಡು ನೀತಿಯನ್ನು ಮಂಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.