ಅರ್ಜುನನ್ ಸೇರಿ ನಾಲ್ವರು ನ್ಯಾಯಲಯಕ್ಕೆ
ಮೈಸೂರು, ಆ. 19– ಕಾಡುಗಳ್ಳ ವೀರಪ್ಪನ್ನ ಸೋದರ ಅರ್ಜುನನ್ ಸೇರಿದಂತೆ ವೀರಪ್ಪನ್ ತಂಡದ ನಾಲ್ವರು ಪ್ರಮುಖರನ್ನು ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಬಿಗಿ ಬಂದೋಬಸ್ತಿನಲ್ಲಿ ಹಾಜರು ಪಡಿಸಲಾಯಿತು.
ನ್ಯಾಯಾಲಯದ ಆವರಣದಲ್ಲಿ ಕಿಕ್ಕಿರಿದು ನೆರೆದಿದ್ದ ಜನರ ನಡುವೆ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಬಿಗಿಯಾದ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರು.
‘ಬಾಡಿ ವಾರೆಂಟ್ನ ಪ್ರತಿಯನ್ನು ನ್ಯಾಯಾಲಯಕ್ಕೆ ತರುವುದನ್ನು ಪೊಲೀಸ್ ಅಧಿಕಾರಿಗಳು ಮರೆತ ಕಾರಣ ಅರ್ಜುನನ್ ತಂಡವನ್ನು ನ್ಯಾಯಾಲಯಕ್ಕೆ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಕರೆತರಬೇಕಾಯಿತು. ಇದರಿಂದಾಗಿ ಇಡೀ ದಿನ ನ್ಯಾಯಾಲಯದ ಆವರಣದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ನ್ಯಾಯಾಲಯದ ಒಳಗೂ ವಕೀಲರು ಮತ್ತು ಪತ್ರಕರ್ತರು ತುಂಬಿತುಳುಕುತ್ತಿದ್ದರು.
ಯಡಿಯೂರಪ್ಪ ವಿರುದ್ಧ ಹಕ್ಕುಚ್ಯುತಿ ಮಂಡನೆ: ವಿವಿಧ ಪಕ್ಷಗಳು ಸಜ್ಜು
ಬೆಂಗಳೂರು, ಆ. 19– ವಿಧಾನಸಭೆಯ ಹೊರಗೆ ಸಭ್ಯಾಧ್ಯಕ್ಷರ ರೂಲಿಂಗನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿದ್ದಾರೆಂಬ ಆರೋಪ ಹೊತ್ತಿರುವ ವಿರೋಧಿ ನಾಯಕ ಯಡಿಯೂರಪ್ಪ ಮತ್ತು ಇದರಿಂದ ಮನ ನೊಂದಿರುವ ಸಭಾಧ್ಯಕ್ಷ ರಮೇಶ್ ಕುಮಾರ್ ಪ್ರಕರಣದಲ್ಲಿ ಬಿಜೆಪಿಯನ್ನು ಹಣ್ಣುಗಾಯಿ–ನೀರುಗಾಯಿ ಮಾಡಲು ಆಡಳಿತಾರೂಢ ಜನತಾ ದಳವೂ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈಗ ಸಜ್ಜಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.