ಅಣ್ಣಾ ಡಿಎಂಕೆ ಸದಸ್ಯರವರ್ತನೆಗೆ ಸ್ಪೀಕರ್ ತರಾಟೆ
ನವದೆಹಲಿ, ಆ. 17– ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ತೀರ್ಪನ್ನು ಜಾರಿಗೊಳಿಸುವ ಸಂಬಂಧ ಸರ್ಕಾರ ಖಚಿತ ಹೇಳಿಕೆ ನೀಡಬೇಕೆಂದು ಒತ್ತಾಯಪಡಿಸಿದ ಎಐಎಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಇಂದು ಸಭಾಧ್ಯಕ್ಷರ ಪೀಠದ ಮುಂದೆ ಗದ್ದಲ ಎಬ್ಬಿಸಿದರು. ತಮಿಳುನಾಡಿನ ಸದಸ್ಯರ ಈ ವರ್ತನೆಯನ್ನು ಸಭಾಧ್ಯಕ್ಷ ಶಿವರಾಜ ಪಾಟೀಲ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ಸಿನ ಎರಾ ಅನ್ಬರಸು ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಈ ಘಟನೆ ನಡೆಯಿತು. ಕರ್ನಾಟಕ ಸರ್ಕಾರವು ನ್ಯಾಯಮಂಡಲಿಯ ಮಧ್ಯಂತರ ವರದಿಯನ್ನು ಜಾರಿಗೆ ತರದೆ ಇರುವುದರಿಂದ ತಂಜಾವೂರು ಜಿಲ್ಲೆಯಲ್ಲಿ ಕುರುವೈ ಬೆಳೆ ಒಣಗುತ್ತಿದ್ದು ರೈತರು ಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರವು ಈ ಕೂಡಲೇ ಮಧ್ಯೆ ಪ್ರವೇಶಿಸಿ ಸಂವಿಧಾನದ ಕಾಯ್ದೆ 266ರ ಪ್ರಕಾರ ನ್ಯಾಯಮಂಡಲಿಯ ತೀರ್ಪನ್ನು ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ರಾಜಕೀಯ: ರಾಹುಲ್ಗಾಂಧಿಗೆ ಕಾಂಗೈ ಸ್ವಾಗತ
ನವದೆಹಲಿ, ಆ. 17 (ಯುಎನ್ಐ)– ರಾಹುಲ್ ಗಾಂಧಿ ಅವರು ರಾಜಕೀಯ ಸೇರಿದರೆ ಕಾಂಗೈ ಪಕ್ಷವು ಸ್ವಾಗತಿಸುತ್ತದೆ ಎಂದು ಪಕ್ಷದ ವಕ್ತಾರ ವಿ.ಎನ್.ಗಾಡ್ಗೀಳ್ ಹೇಳಿದ್ದಾರೆ.
ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅವರಿಗೆ ಬಿಟ್ಟದ್ದು, ರಾಹುಲ್ ಗಾಂಧಿ ಅವರು ರಾಜಕೀಯ ಸೇರಿದರೆ ಪಕ್ಷದ ಯುವ ಪೀಳಿಗೆಯ ವರ್ಚಸ್ಸು ವೃದ್ಧಿಯಾಗುತ್ತದೆ ಎಂದು ಗಾಡ್ಗೀಳ್ ಪಕ್ಷದ ನಿಲುವು ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.