ADVERTISEMENT

25 ವರ್ಷಗಳ ಹಿಂದೆ: ಶನಿವಾರ, 25-10-1997

ಪ್ರಜಾವಾಣಿ ವಿಶೇಷ
Published 24 ಅಕ್ಟೋಬರ್ 2022, 21:30 IST
Last Updated 24 ಅಕ್ಟೋಬರ್ 2022, 21:30 IST
   

100 ತಾಲ್ಲೂಕುಗಳಲ್ಲಿ ಬರ:ಪರಿಹಾರಕ್ಕೆ 20 ಕೋಟಿ

ಬೆಂಗಳೂರು, ಅ. 24– ರಾಜ್ಯದಲ್ಲಿ ಸುಮಾರು ಒಂದು ನೂರು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಈ ತಾಲ್ಲೂಕುಗಳಲ್ಲಿ ಕೂಡಲೇ ಪರಿಹಾರ ಕಾರ್ಯಗಳನ್ನು ಆರಂಭಿಸಲು 12ರಿಂದ 20 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಇಂದು ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಸಭೆ ತೀರ್ಮಾನಿಸಿದೆ.

ಬರ ಪರಿಸ್ಥಿತಿ ಇರುವ ತಾಲ್ಲೂಕುಗಳ ಪೈಕಿ ಯಾವ ತಾಲ್ಲೂಕಿನಲ್ಲಿ ಯಾವ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಿ ಹಣ ಬಿಡುಗಡೆ ಮಾಡಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವ ಸಂಪುಟದ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ.ಸಿ. ನಾಣಯ್ಯ ಹೇಳಿದರು.

ADVERTISEMENT

ಅಭಿವೃದ್ಧಿಶೀಲ ರಾಷ್ಟ್ರಗಳಿಗೆನಿರ್ಬಂಧ: ಗುಜ್ರಾಲ್

ಎಡಿನ್ಬರ್ಗ್, ಅ. 24 (ಪಿಟಿಐ)– ನೂತನ ಅಂತರ ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಹೆಸರಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಭಾರತದ ಪ್ರಧಾನಿ ಐ.ಕೆ. ಗುಜ್ರಾಲ್‌ ಅವರು ಇಂದು ಟೀಕಿಸಿದರು.

ಇಂದು ಆರಂಭವಾದ ಕಾಮನ್‌ವೆಲ್ತ್‌ ರಾಷ್ಟ್ರಗಳ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡಿದ ಅವರು, ನ್ಯಾಯ ಮತ್ತು ಸಮಾನತೆ ಇದ್ದರೆ ಮಾತ್ರ ಆರ್ಥಿಕ ಉದಾರೀಕರಣ ಯಶಸ್ವಿಯಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.